ಕಮರಿತು ಟೆಸ್ಲಾ ಬರುವ ನಿರೀಕ್ಷೆ; ಭಾರತದ ಸಹವಾಸ ಬೇಡ ಎಂದು ಬಿಟ್ಟರಾ ಇಲಾನ್ ಮಸ್ಕ್?

Tesla India Investment: ಭಾರತದಲ್ಲಿ ಕಾರು ತಯಾರಕಾ ಘಟಕ ಸ್ಥಾಪಿಸುವ ಆಲೋಚನೆಯನ್ನು ಟೆಸ್ಲಾ ಕೈಬಿಟ್ಟಂತಿದೆ. ಭಾರತದ ಅಧಿಕಾರಿಗಳು ಮಾಡುವ ಕರೆಗಳಿಗೆ ಟೆಸ್ಲಾ ಎಕ್ಸಿಕ್ಯೂಟಿವ್​ಗಳು ಸ್ಪಂದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಬಂದು ನರೇಂದ್ರ ಮೋದಿಯನ್ನು ಭೇಟಿ ಮಾಡಬೇಕಿದ್ದ ಮಸ್ಕ್ ಅವರು ಕೊನೆ ಘಳಿಗೆಯಲ್ಲಿ ಭಾರತ ಬಿಟ್ಟು ವಿಯೆಟ್ನಾಂ, ಚೀನಾಗೆ ಹೋಗಿದ್ದಾಗಲೇ ಯಡವಟ್ಟು ಆಗಲಿರುವ ಮುನ್ಸೂಚನೆ ಇತ್ತು.

ಕಮರಿತು ಟೆಸ್ಲಾ ಬರುವ ನಿರೀಕ್ಷೆ; ಭಾರತದ ಸಹವಾಸ ಬೇಡ ಎಂದು ಬಿಟ್ಟರಾ ಇಲಾನ್ ಮಸ್ಕ್?
ಇಲಾನ್ ಮಸ್ಕ್, ನರೇಂದ್ರ ಮೋದಿ

Updated on: Jul 05, 2024 | 10:58 AM

ನವದೆಹಲಿ, ಜುಲೈ 5: ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರ್ ಸಂಸ್ಥೆಯಾದ ಟೆಸ್ಲಾ ಭಾರತದಲ್ಲಿ ಉತ್ಪಾದನಾ ಘಟಕ ((manufacturing unit) ಸ್ಥಾಪಿಸುವ ನಿರೀಕ್ಷೆ ಈಡೇರುವಂತೆ ತೋರುತ್ತಿಲ್ಲ. ಸರ್ಕಾರ ಕೆಂಪು ಹಾಸು ಹಾಕಿ ಸ್ವಾಗತಿಸಲು ಸಿದ್ಧವಾದರೂ ಟೆಸ್ಲಾ ಬರಲು ಇಚ್ಛಿಸಿದಂತಿಲ್ಲ. ಭಾರತದ ಅಧಿಕಾರಿಗಳು ಟೆಸ್ಲಾ ಎಕ್ಸಿಕ್ಯೂಟಿವ್​ಗಳನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಯಾರೂ ಕೂಡ ಸ್ಪಂದಿಸುತ್ತಿಲ್ಲ. ಇದರೊಂದಿಗೆ ಟೆಸ್ಲಾಗೆ ಭಾರತಕ್ಕೆ ಬರುವ ಆಸಕ್ತಿ ಹೊರಟುಹೋಗಿರುವುದು ಬಹುತೇಕ ಖಚಿತವಾಗಿದೆ. ಸರ್ಕಾರ ಕೂಡ ನಿರೀಕ್ಷೆ ಕೈಬಿಟ್ಟಿದೆ.

ಟೆಸ್ಲಾ ಸಂಸ್ಥೆ ಭಾರತದಲ್ಲಿ 2-3 ವರ್ಷದಲ್ಲಿ ಕಾರು ತಯಾರಿಸುವ ಘಟಕ ಆರಂಭಿಸುವುದಾಗಿ ಹೇಳಿತ್ತು. ಇದಕ್ಕೆ ಬದಲಾಗಿ ಟೆಸ್ಲಾ ಕಾರಿಗೆ ಆಮದು ಸುಂಕದಲ್ಲಿ ಸರ್ಕಾರ ರಿಯಾಯಿತಿ ಕೊಡಲು ಒಪ್ಪಿತು. ಈ ಕೊಡುಕೊಳ್ಳು ವ್ಯವಹಾರ ಬಹುತೇಕ ಅಂತಿಮಗೊಳ್ಳಬೇಕು ಎನ್ನುವಷ್ಟರಲ್ಲಿ ಇಲಾನ್ ಮಸ್ಕ್ ಬೇರೆಯೇ ನಡೆ ಇಟ್ಟಿದ್ದರು. ಏಪ್ರಿಲ್ ತಿಂಗಳಲ್ಲಿ ಇಲಾನ್ ಮಸ್ಕ್ ಭಾರತಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಬೇಕಿತ್ತು. ಇನ್ನೇನು ಒಂದು ದಿನ ಇದೆ ಎನ್ನುವಷ್ಟರಲ್ಲಿ ಇಲಾನ್ ಮಸ್ಕ್ ಪ್ಲಾನ್ ಬದಲಿಸಿದ್ದರು. ಯಾವುದೋ ಮಹತ್ವದ ಕಾರಣಕ್ಕೆ ಭಾರತಕ್ಕೆ ಬರಲು ಆಗುತ್ತಿಲ್ಲ ಎಂದು ಹೇಳಿದ್ದರು. ನೋಡನೋಡುತ್ತಿದ್ದಂತೆಯೇ ಅವರು ಚೀನಾಗೆ ಹಾರಿ ಹೋಗಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ವಿಯೆಟ್ನಾಂಗೂ ಕೂಡ ಹೋಗಿ ಬಂದಿದ್ದರು.

ಇದನ್ನೂ ಓದಿ: ಭಾರತದಲ್ಲಿ ತಯಾರಿಸಿದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡಲು ಗೂಗಲ್ ಯೋಜನೆ

ಟೆಸ್ಲಾ ಕಂಪನಿಗೆ ಅಮೆರಿಕ ಮತ್ತು ಚೀನಾ ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಈಗ ಚೀನಾದಲ್ಲಿ ಆ ದೇಶದೇ ಹಲವು ಎಲೆಕ್ಟ್ರಿಕ್ ಕಾರ್ ಕಂಪನಿಗಳಿದ್ದು ತೀವ್ರ ಪೈಪೋಟಿ ನೀಡುತ್ತಿವೆ. ಬಿವೈಡಿ ಈಗ ಟೆಸ್ಲಾವನ್ನು ಹಿಂದಿಕ್ಕಿ ನಂಬರ್ ಒನ್ ಎನಿಸಿದೆ. ಇಲಾನ್ ಮಸ್ಕ್ ಕೂಡ ತಮಗೆ ಚೀನಾ ಎಲೆಕ್ಟ್ರಿಕ್ ಕಾರ್ ಕಂಪನಿಗಳ ಪೈಪೋಟಿ ಎದುರಿಸುವುದು ಕಷ್ಟ ಎಂದು ಹೇಳಿದ್ದರು. ಈ ಹಂತದಲ್ಲಿ ಅವರು ಭಾರತದ ಮಾರುಕಟ್ಟೆಗೆ ಬಂದು ಹಿಡಿತ ಸಾಧಿಸಲು ಇದು ಸರಿಯಾದ ಸಂದರ್ಭ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೂ ಕೂಡ ಇಲಾನ್ ಮಸ್ಕ್ ಬೇರೆಯೇ ಆಲೋಚನೆಯಲ್ಲಿರುವುದು ಕುತೂಹಲ ಮೂಡಿಸಿದೆ.

ಟೆಸ್ಲಾ ಭಾರತಕ್ಕೆ ಬರದೇ ಹೋದರೆ ಮಹೀಂದ್ರ ಅಂಡ್ ಮಹೀಂದ್ರ, ಟಾಟಾ ಮೋಟಾರ್ಸ್​ನಂತಹ ದೇಶೀಯ ಕಾರ್ ಕಂಪನಿಗಳಿಗೆ ವರದಾನವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us