Tomato: ಪೆಟ್ರೋಲ್ಗಿಂತ ದುಬಾರಿಯಾದ ಟೊಮೆಟೋ ಬೆಲೆ ಯಾವಾಗ ಇಳಿಯುತ್ತೆ? ತಜ್ಞರು ಹೇಳೋದೇನು? ಇಲ್ಲಿದೆ ಡೀಟೇಲ್ಸ್
When Will Tomato Price Come Down: ಬಿಸಿಲು, ಮಳೆ, ರೋಗ ಇತ್ಯಾದಿ ಕಾರಣದಿಂದ ಇಳುವರಿ ಕಡಿಮೆ ಆಗಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಜುಲೈ 3ನೇ ವಾರದಲ್ಲಿ ಬೆಲೆ ಇಳಿಯಬಹುದು ಎಂದು ಸರ್ಕಾರ ಹೇಳಿದ್ದರೂ ತಜ್ಞರ ಲೆಕ್ಕಾಚಾರದ ಪ್ರಕಾರ ಇನ್ನೊಂದು ತಿಂಗಳಾದರೂ ಟೊಮೆಟೋ ದುಬಾರಿಯಾಗೆ ಇರುತ್ತದೆ.

ನವದೆಹಲಿ: ಭಾರತದಾದ್ಯಂತ ಟೊಮೆಟೋ ಹಣ್ಣಿನ ಬೆಲೆ (Tomato Price) ಬಲು ದುಬಾರಿಯಾಗಿದೆ. ಕೆಲ ವಾರಗಳ ಹಿಂದಷ್ಟೇ ಕಿಲೋಗೆ 20 ರುಪಾಯಿ ಇದ್ದ ಟೊಮ್ಯಾಟೋ ಬೆಲೆ ಇದೀಗ 100 ರೂ ಗಡಿ ದಾಟಿ ವಾರದ ಮೇಲಾಗಿದೆ. ಪೆಟ್ರೋಲ್ಗಿಂತಲೂ ಟೊಮೆಟೊ ಬೆಲೆ ಹೆಚ್ಚಾಗಿದೆ. ಕೆಲವೆಡೆ ಟೊಮೆಟೊ 200 ರೂಗೆ ಮಾರುತ್ತಿರುವುದು ಕಂಡುಬಂದಿದೆ. ಭಾರತದ ಅಡುಗೆಮನೆಗೆ ಮತ್ತು ಭಾರತೀಯ ತಿಂಡಿತಿನಿಸುಗಳಿಗೆ ಈರುಳ್ಳಿಯಂತೆ ಟೊಮೆಟೊ ಕೂಡ ಒಂದು ರೀತಿಯಲ್ಲಿ ಅವಿಭಾಜ್ಯ ಹೂರಣವಾಗಿರುವುದರಿಂದ ಜನಸಾಮಾನ್ಯರಿಗೆ ಈ ಬೆಲೆ ಏರಿಕೆಯ ಬಿಸಿ ಜೋರಾಗಿ ತಾಗಿರುವುದು ಹೌದು. ಬೆಲೆ ಯಾಕೆ ಏರುತ್ತಿದೆ? ಯಾವಾಗ ಇಳಿಯುತ್ತದೆ ಎಂದು ಜನರು ಕಾಯುತ್ತಿರುವುದು ಹೌದು. ಹೋಟೆಲ್ ಉದ್ಯಮವೂ ಕೂಡ ಟೊಮೆಟೋ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿವೆ.
ಟೊಮೆಟೋ ಬೆಲೆ ಯಾವಾಗ ಇಳಿಯುತ್ತದೆ?
ಕಳೆದ ವಾರ (ಜೂನ್ 30) ಸರ್ಕಾರ ನೀಡಿದ ಮಾಹಿತಿ ಪ್ರಕಾರ ಮುಂದಿನ 15 ದಿನದಲ್ಲಿ ಟೊಮ್ಯಾಟೋ ಬೆಲೆ ಇಳಿಯಬಹುದು ಎಂದಿತ್ತು. ಅಂದರೆ ಜುಲೈ 15ರ ಆಸುಪಾಸಿನಲ್ಲಿ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದಿದೆ ಸರ್ಕಾರ. ಆದರೆ, ಕೆಲ ತಜ್ಞರ ಅಭಿಪ್ರಾಯ ಇದಕ್ಕೆ ಭಿನ್ನವಾಗಿದೆ. ಅವರ ಪ್ರಕಾರ 20-25 ದಿನಗಳಾದ ಮೇಲೆ ಟೊಮೆಟೊ ಬೆಲೆ ಇಳಿಯಬಹುದು.
ಇದನ್ನೂ ಓದಿ: PMLA: ಜಿಎಸ್ಟಿ ವಂಚನೆ ಎಸಗುವವರಿಗೆ ಕಾದಿದೆ ಇಡಿ ಕುಣಿಕೆ; ಪಿಎಂಎಲ್ಎ ವ್ಯಾಪ್ತಿಗೆ ಜಿಎಸ್ಟಿಎನ್ ಸೇರಿಸಿದ ಸರ್ಕಾರ
ಹವಾಮಾನ ಬದಲಾಗುತ್ತಿರುವಂತೆಯೇ ಟೊಮ್ಯಾಟೋದ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ. ಕೃಷಿ ಆರ್ಥಿಕ ತಜ್ಞ ದೇವೀಂದರ್ ಶರ್ಮಾ ಪ್ರಕಾರ ಆಗಸ್ಟ್ ತಿಂಗಳಲ್ಲಿ ಟೊಮ್ಯಾಟೋ ಬೆಲೆ ಕಡಿಮೆ ಆಗಬಹುದು.
ಕರ್ನಾಟಕದಲ್ಲಿ ಟೊಮೆಟೊ ಬೆಲೆ 200 ರೂಗೆ?
ದೇಶದ ಪ್ರಮುಖ ಟೊಮ್ಯಾಟೋ ಉತ್ಪಾದಕ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಟೊಮ್ಯಾಟೋ ಬೆಲೆ 100ರಿಂದ 150 ರೂ ಆಗಿದೆ. ಕೋಲಾರ ಎಪಿಎಂಸಿ ಕಾರ್ಯದರ್ಶಿ ನೀಡಿರುವ ಮಾಹಿತಿ ಪ್ರಕಾರ ಮುಂದಿನ ಎರಡು ವಾರದಲ್ಲಿ ಟೊಮಾಟೋ ಇಳುವರಿ ಕಡಿಮೆಯೇ ಇದ್ದರೆ ಬೆಲೆ ಇನ್ನೂ ಗಗನಕ್ಕೇರುತ್ತದೆ. ಜೊತೆಗೆ ಟೊಮೆಟೊಗೆ ರೋಗಬಾಧೆಯೂ ಇದ್ದು ಈ ಹಣ್ಣಿನ ಬೆಲೆ ಕಿಲೋಗೆ 200 ರೂ ಆಗಬಹುದು ಎಂದಿದ್ದಾರೆ.
ಇದನ್ನೂ ಓದಿ: Ticket Prices Reduced: ವಂದೇ ಭಾರತ್ ಸೇರಿದಂತೆ ವಿವಿಧ ರೈಲ್ವೆ ಟಿಕೆಟ್ ದರ ಶೇ. 25ರವರೆಗೂ ಕಡಿತಗೊಳಿಸಿದ ಭಾರತೀಯ ರೈಲ್ವೆ
ಟೊಮೆಟೋಗೆ ರೋಗಬಾಧೆ
ದೇಶಾದ್ಯಂತ ಟೊಮ್ಯಾಟೋ ಬೆಲೆ ಹೆಚ್ಚಾಗಲು ಬೇಡಿಕೆ ಮತ್ತು ಸರಬರಾಜು ಸೂತ್ರ ಕಾರಣ. ಟೊಮ್ಯಾಟೋ ಸರಬರಾಜು ಕಡಿಮೆ ಆಗಿರುವುದು ಅದರ ಬೆಲೆ ಹೆಚ್ಚಳಕ್ಕೆ ಕಾರಣ. ಕೆಲವೆಡೆ ಬೇಸಿಗೆ ಬಿಸಿಗೆ ಟೊಮೆಟೊ ಇಳುವರಿ ಕಡಿಮೆ ಆಗಿದೆ. ಇನ್ನೂ ಕೆಲವೆಡೆ ಅತಿವೃಷ್ಟಿ ಕಾರಣ ಟೊಮ್ಯಾಟೊ ಬೆಳೆ ಹಾಳಾಗಿದೆ. ಮತ್ತೂ ಕೆಲವೆಡೆ ಟೊಮ್ಯಾಟೋ ಬೆಳೆಗಳಿಗೆ ರೋಗಭಾದೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಟೊಮೆಟೋ ಮೊಸಾಯಿಕ್ ವೈರಸ್ ಸೋಂಕು ಟೊಮೆಟೋ ಬೆಳೆಗಳಿಗೆ ತಾಗಿದೆ. ಇದರಿಂದ ಇಳುವರಿ ತೀರಾ ಕುಂಠಿತಗೊಂಡಿರುವುದು ಕಂಡುಬಂದಿದೆ.
ಆದರೆ, ಟೊಮೆಟೊ ಇಳುವರಿ ಹೆಚ್ಚಬಹುದು ಎಂದು ಕಾಯುತ್ತಾ ಇರುವ ರೈತರ ಆಸೆಗೆ ವೈರಸ್ ಬಾಧೆ ತಣ್ಣೀರೆರಚಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ