ಟಿವಿ ಚಾನಲ್​ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್

SEBI Debars 15 TV Experts On Share Market: ಹಿಂದಿಯ ಝೀ ಬಿಸಿನೆಸ್ ವಾಹಿನಿಯಲ್ಲಿ ಷೇರು ಮಾರುಕಟ್ಟೆ ತಜ್ಞರು ಎಂದು ಹೇಳಿಕೊಳ್ಳುತ್ತಿದ್ದ ಕೆಲವರು ವಾಸ್ತವದಲ್ಲಿ ವಂಚಕರೆಂಬುದು ಗೊತ್ತಾಗಿದೆ. 15 ಮಂದಿ ತಜ್ಞರು ಮತ್ತು ಟ್ರೇಡಿಂಗ್ ಕಂಪನಿಗಳ ವಿರುದ್ಧ ಸೆಬಿ 7.41 ಕೋಟಿ ರೂ ದಂಡ ವಿಧಿಸಿದೆ. ತಜ್ಞರು ವೀಕ್ಷಕರಿಗೆ ತಮ್ಮ ಷೇರು ಶಿಫಾರಸುಗಳನ್ನು ತಿಳಿಸುವ ಮುನ್ನವೇ ಟ್ರೇಡಿಂಗ್ ಕಂಪನಿಗಳಿಗೆ ಮಾಹಿತಿ ರವಾನಿಸುತ್ತಿದ್ದರು. ಈ ಮೂಲಕ ಅಕ್ರಮವಾಗಿ ಲಾಬ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಟಿವಿ ಚಾನಲ್​ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್
ಸ್ಟಾಕ್ ಟ್ರೇಡಿಂಗ್

Updated on: Feb 09, 2024 | 10:53 AM

ನವದೆಹಲಿ, ಫೆಬ್ರುವರಿ 9: ಯೂಟ್ಯೂಬ್, ಟಿವಿ ಇತ್ಯಾದಿ ಮಾಧ್ಯಮಗಳಲ್ಲಿ ಬರುವ ಬಿಸಿನೆಸ್ ಎಕ್ಸ್​ಪರ್ಟ್ಸ್ ಎಂದು ಹೇಳಿಕೊಳ್ಳುವ ಜನರ ಬಗ್ಗೆ ಜಾಗ್ರತೆ ವಹಿಸಿ. ಹಿಂದಿಯ ಝೀ ಬಿಸಿನೆಸ್​ನಲ್ಲಿ ಬಂದು ಸಲಹೆಗಳನ್ನು ನೀಡುತ್ತಿದ್ದ ಕೆಲ ತಜ್ಞರ ಕರ್ಮಕಾಂಡ ಬಯಲಿಗೆ ಬಂದಿದೆ. ವೀಕ್ಷಕರಿಗೆ ದಾರಿ ತಪ್ಪಿಸುವ ಸಲಹೆ ನೀಡಿ ತಾವು ಹಣದ ಲಾಭ ಮಾಡಿಕೊಳ್ಳುತ್ತಿದ್ದ 15 ತಜ್ಞರಿಗೆ ಸೆಬಿ ದಂಡ ವಿಧಿಸಿದೆ. ವರದಿ ಪ್ರಕಾರ, ಈ 15 ಜನರಿಗೆ ಸೆಬಿ (SEBI) ಒಟ್ಟು 7.41 ಕೋಟಿ ರೂನಷ್ಟು ದಂಡ ಹಾಕಿದೆ. 2022ರ ಫೆಬ್ರುವರಿ 1ರಿಂದ 2022ರ ಡಿಸೆಂಬರ್ 31ರ ಅವಧಿಯವರೆಗೆ ಈ ತಜ್ಞರು ಟಿವಿ ವಾಹಿನಿಗೆ ಬಂದು ನೀಡಿದ ಸಲಹೆಗಳನ್ನು ನೀಡಿದ್ದರು. ಅವರು ವೀಕ್ಷಕರನ್ನು ವಂಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡಿದ್ದ ಷಡ್ಯಂತ್ರ ಸೆಬಿ ಕಣ್ಣಿಗೆ ಬಿದ್ದಿತ್ತು. ನಿನ್ನೆ ಗುರುವಾರ ಈ ಪರಿಣಿತರಿಗೆ ದಂಡ ವಿಧಿಸಿದ ಸೆಬಿ, ಮುಂದಿನ ಆದೇಶ ಬರುವವರೆಗೂ ಇವರು ಯಾವ ಟ್ರೇಡಿಂಗ್ ಮಾಡಬಾರದು ಎಂದು ತಿಳಿಸಿದೆ.

ಟಿವಿ ವಾಹಿನಿಗಳಲ್ಲಿ ಬರುವ ತಜ್ಞರ ವಂಚನೆ ಷಡ್ಯಂತ್ರ ಹೇಗಿರುತ್ತಿತ್ತು?

ಝೀ ಬಿಸಿನೆಸ್ ಚಾನಲ್​ನ ಸ್ಟಾಕ್ ಮಾರ್ಕೆಟ್​ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅತಿಥಿ ತಜ್ಞರಾಗಿ ಹೋಗುವ ಕೆಲವರು ನಿರ್ದಿಷ್ಟ ಷೇರುಗಳು ಮತ್ತು ಕಾಂಟ್ರಾಕ್ಟ್​ಗಳ ಬಗ್ಗೆ ತಮ್ಮ ಶಿಫಾರಸುಗಳನ್ನು ಮಾಡುತ್ತಾರೆ. ಆದರೆ, ಈ ವಂಚಕ ಅತಿಥಿಗಳು ಚಾನಲ್​ನಲ್ಲಿ ತಮ್ಮ ಶಿಫಾರಸು ತಿಳಿಸುವ ಮುನ್ನವೇ ನಿರ್ದಿಷ್ಟ ಟ್ರೇಡಿಂಗ್ ಕಂಪನಿಗಳಿಗೆ ಮಾಹಿತಿ ರವಾನಿಸಿರುತ್ತಾರೆ. ಆಗ ಆ ಕಂಪನಿಗಳು ತಜ್ಞರ ಶಿಫಾರಸಿಗೆ ವಿರುದ್ಧವಾಗಿ ಸ್ಕ್ರಿಪ್ ಪೊಸಿಶನ್ ನಿಗದಿ ಮಾಡುತ್ತಾರೆ.

ಇದನ್ನೂ ಓದಿ: ಮತ್ತೆ 100 ಬಿಲಿಯನ್ ಡಾಲರ್ ಗುಂಪಿಗೆ ಬಂದ ಗೌತಮ್ ಅದಾನಿ; ವಿಶ್ವ ಶ್ರೀಮಂತರ ಸ್ಥಾನಪಲ್ಲಟವಾಗಿದೆಯಾ?

ಈ ಮೂಲಕ ಬಂದ ಲಾಭವನ್ನು ಈ ಟ್ರೇಡಿಂಗ್ ಕಂಪನಿಗಳು ತಜ್ಞರೊಂದಿಗೆ ಹಂಚಿಕೊಳ್ಳುತ್ತಾರೆ. ಇದೆಲ್ಲವೂ ಪೂರ್ವಯೋಜಿತವಾಗಿ ನಡೆಯುತ್ತವೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಈ ಷಡ್ಯಂತ್ರವನ್ನು ಪತ್ತೆ ಮಾಡಿದೆ. ಈ ರೀತಿ ಅಕ್ರಮ ಟ್ರೇಡಿಂಗ್​ನಿಂದ 7.41 ಕೋಟಿ ರೂ ಲಾಭ ಆಗಿರುವುದನ್ನು ಸೆಬಿ ಗ್ರಹಿಸಿದೆ. ಅಂತೆಯೇ ಆರೋಪಿತ 15 ಮಂದಿ ತಜ್ಞರು, ಟ್ರೇಡಿಂಗ್ ಕಂಪನಿಗಳಿಗೆ 7.41 ಕೋಟಿ ರೂ ಮೊತ್ತದಷ್ಟು ದಂಡ ಹಾಕಿದೆ.

ಸಿಮಿ ಭೌಮಿಕ್, ಮುದಿತ್ ಗೋಯಲ್ ಹಿಮಾಂಶು ಗುಪ್ತಾ, ಆಶೀಶ್ ಕೇಲ್ಕರ್, ಕಿರಣ್ ಜಾಧವ್, ರಾಮಾವತಾರ್ ಲಾಲ್​ಚಂದ್ ಚೋಟಿಯಾ, ಎಸ್​ಎಎಆರ್ ಸೆಕ್ಯೂರಿಟೀಸ್ ಇಂಡಿಯಾ ಪ್ರೈ ಲಿ, ಅಜಯ್​ಕುಮಾರ್ ರಮಾಕಾಂತ್ ಶರ್ಮಾ, ರೂಪೇಶ್ ಕುಮಾರ್ ಮಾಟೋಲಿಯಾ, ನಿತಿನ್ ಛಲಾನಿ, ಕನ್ಹಯಾ ಟ್ರೇಡಿಂಗ್ ಕಂಪನಿ, ಮನನ್ ಶೇರ್​ಕಾಮ್ ಪ್ರೈ ಲಿ, ಎಸ್​ಎಎಆರ್ ಕಮಾಡಿಟೀಸ್ ಪ್ರೈ ಲಿ, ಪಾರ್ಥ ಸಾರಥಿ ಧರ್ ಮತ್ತು ನಿರ್ಮಲ್ ಕುಮಾರ್ ಸೋನಿ ಅವರು ಸೆಬಿಯಿಂದ ಚಾಟಿ ಬೀಸಿಕೊಂಡವರು.

ಇದನ್ನೂ ಓದಿ: ಇಟಿಎಫ್​ನಲ್ಲಿನ ಹೂಡಿಕೆಯಿಂದ ಬಂದ ಶೇ. 50ರಷ್ಟು ಲಾಭದ ಹಣ ಈಕ್ವಿಟಿಗಳಲ್ಲಿ ಮರುಹೂಡಿಕೆ: ಇಪಿಎಫ್​ಒ ಚಿಂತನೆ

ಸೆಬಿ ಇವರನ್ನು ಮೂರು ರೀತಿಯಲ್ಲಿ ವರ್ಗೀಕರಿಸಿದೆ. ಟಿವಿ ವೀಕ್ಷಕರಿಗೆ ಟ್ರೇಡಿಂಗ್ ಸಲಹೆ ನೀಡುವವರದ್ದು ಒಂದು ಗುಂಪು. ಟ್ರೇಡಿಂಗ್ ಮೂಲಕ ಲಾಭ ಮಾಡುವವರದ್ದು ಇನ್ನೊಂದು ಗುಂಪು. ಇವರಿಗೆ ಸಹಾಯವಾಗುವುದು ಮೂರನೇ ಗುಂಪು.

ಇಲ್ಲಿ ಕಿರಣ್ ಜಾಧವ್, ಆಶೀಶ್ ಕೇಲ್ಕರ್, ಹಿಮಾಂಶು ಗುಪ್ತಾ, ಮುದಿತ್ ಗೋಯಲ್ ಮತ್ತು ಸಿಮಿ ಭೌಮಿಕ್ ಅವರು ಟಿವಿ ವಾಹಿನಿಗಳಲ್ಲಿ ತಜ್ಞ ಅತಿಥಿಗಳಾಗಿ ಹೋಗಿ ಸಲಹೆ ನೀಡುತ್ತಿದ್ದರು. ನಿರ್ಮಲ್ ಕುಮಾರ್ ಸೋನಿ, ಪಾರ್ಥ ಸಾರಥಿ ಧರ್, ಎಸ್​ಎಎಆರ್ ಕಮಾಡಿಟೀಸ್, ಮನನ್ ಶೇರ್​ಕಾಮ್ ಮತ್ತು ಕನ್ಹಯಾ ಟ್ರೇಡಿಂಗ್ ಕಂಪನಿ ಇವುಗಳು ಟಿವಿ ಪರಿಣಿತರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us