ಲಂಡನ್​ನಲ್ಲಿ ಓದಲು ಹೋಗೋರು ಗಮನಿಸಿ, ಮಾಸಿಕ ಮೈಂಟೆನೆನ್ಸ್ ಫಂಡ್ 1.63 ಲಕ್ಷ ರೂಗೆ ಏರಿಕೆ

UK raises maintenance fund for foreign students: ಯುಕೆಯಲ್ಲಿ ನೀವು ಕೋರ್ಸ್ ಮಾಡಲು ಹೋಗುವುದಾದರೆ ಸಾಕಷ್ಟು ಹಣ ಲಭ್ಯ ಇರುವುದನ್ನು ತೋರಿಸಬೇಕು. ಅಲ್ಲಿನ ಸರ್ಕಾರ ವಿದೇಶೀ ವಿದ್ಯಾರ್ಥಿಗಳಿಗೆ ಮಾಸಿಕ ಮೈಂಟೆನೆನ್ಸ್ ಫಂಡ್ ಅನ್ನು ಹೆಚ್ಚಿಸಿದೆ. ಲಂಡನ್ ನಗರದಲ್ಲಿ ಇದು 1.63 ಲಕ್ಷ ರೂಗೆ ಏರಿದೆ. ಇತರೆಡೆ ಇದು 1.25 ಲಕ್ಷ ರೂಗೆ ಹೋಗಿದೆ. ಜೀವನ ನಡೆಸಲು ತಿಂಗಳಿಗೆ ಬೇಕಾದ ಹಣ ಇದು. ವಿದ್ಯಾರ್ಥಿಗಳು ಕೋರ್ಸ್ ಅವಧಿಯಲ್ಲಿ ಹೊಂದಿರಬೇಕಾದ ಕನಿಷ್ಠ ಹಣ ಇದು.

ಲಂಡನ್​ನಲ್ಲಿ ಓದಲು ಹೋಗೋರು ಗಮನಿಸಿ, ಮಾಸಿಕ ಮೈಂಟೆನೆನ್ಸ್ ಫಂಡ್ 1.63 ಲಕ್ಷ ರೂಗೆ ಏರಿಕೆ
ವಿದ್ಯಾರ್ಥಿಗಳು

Updated on: Sep 13, 2024 | 4:27 PM

ನವದೆಹಲಿ, ಸೆಪ್ಟೆಂಬರ್ 13: ನೀವು ಇಂಗ್ಲೆಂಡ್ ಸೇರಿದಂತೆ ಯುನೈಟೆಡ್ ಕಿಂಗ್​ಡಂನಲ್ಲಿ ವಿದ್ಯಾಭ್ಯಾಸಕ್ಕೆ ಹೋಗಬೇಕೆಂದಿದ್ದೀರಾ? ಅಲ್ಲಿನ ಜೀವನ ವೆಚ್ಚಕ್ಕೆ ತಕ್ಕಷ್ಟು ಹಣ ನಿಮ್ಮ ಬಳಿ ಇರುಬೇಕು. ಇಂಗ್ಲೆಂಡ್ ಮಾತ್ರ ಅಲ್ಲ ಬಹುತೇಕ ಯಾವ ದೇಶಕ್ಕೆ ಓದಲು ಹೋಗುತ್ತಿದ್ದರೆ ಆ ದೇಶದಲ್ಲಿ ನಿರ್ದಿಷ್ಟ ದಿನಗಳವರೆಗೆ ಜೀವನ ನಡೆಸಲು ಬೇಕಾದ ಅವಶ್ಯಕ ಫಂಡ್ ನಿಮ್ಮಲ್ಲಿ ಇದೆ ಎಂಬುದನ್ನು ತೋರಿಸಬೇಕು. ಯುಕೆ ವಿಷಯದಲ್ಲೂ ಆ ನಿಯಮ ಇದೆ. ಈ ಮಾಸಿಕ ಮೈಂಟೆನೆನ್ಸ್ ಫಂಡ್ ಅನ್ನು ಇದೀಗ ಏರಿಕೆ ಮಾಡಲಾಗಿದೆ. 2025ರ ಜನವರಿ 2ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

ಯುಕೆ ಗೃಹ ಸಚಿವಾಲಯ ಹೊರಡಿಸಿರುವ ಅಪ್​ಡೇಟೆಡ್ ರೂಲ್ಸ್ ಪ್ರಕಾರ ಲಂಡನ್​ನಲ್ಲಿ ನೀವು ಓದಲು ಹೋಗುತ್ತಿದ್ದರೆ ಕೋರ್ಸ್ ಫೀಸ್ ಜೊತೆಗೆ ಜೀವನ ವೆಚ್ಚಕ್ಕೆ ತಿಂಗಳಿಗೆ 1,483 ಬ್ರಿಟಿಷ್ ಪೌಂಡ್ ಅಥವಾ 1.63 ಲಕ್ಷ ರುಪಾಯಿ ಹಣ ಲಭ್ಯ ಇರುವುದನ್ನು ತೋರಿಸಬೇಕು. ಅದೇ ಲಂಡನ್ ಅಲ್ಲದೆ ಬೇರೆ ಯುಕೆ ನಗರಗಳಲ್ಲಿ ನೀವು ಕೋರ್ಸ್ ಆಡುತ್ತಿದ್ದರೆ ತಿಂಗಳಿಗೆ ಕನಿಷ್ಠ 1.25 ಲಕ್ಷ ರೂ ಸೇವಿಂಗ್ಸ್ ತೋರಿಸಬೇಕು. ಸದ್ಯಕ್ಕೆ ಇರುವ ನಿಯಮ ಪ್ರಕಾರ ಈ ಕನಿಷ್ಠ ಮೈಂಟೆನೆನ್ಸ್ ಫಂಡ್ ಲಂಡನ್​ಗೆ 1.47 ಲಕ್ಷ ರೂ, ಇತರ ನಗರಗಳಿಗೆ 1.23 ಲಕ್ಷ ರೂ ಇದೆ.

ಹಣದುಬ್ಬರ ಏರಿಕೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಈ ಕನಿಷ್ಠ ಮೈಂಟೆನೆನ್ಸ್ ಫಂಡ್ ಅನ್ನು ಅಲ್ಲಿನ ಸರ್ಕಾರ ಏರಿಸುತ್ತಿರುತ್ತದೆ. ಒಂಬತ್ತು ತಿಂಗಳ ಕೋರ್ಸ್ ಅವಧಿಗೆ ಈ ನಿಯಮ ಇದೆ. ವಿದ್ಯಾರ್ಥಿಗಳು ಕೋರ್ಸ್ ಅವಧಿಯಾದ 9 ತಿಂಗಳು ಯುಕೆನಲ್ಲಿ ಇದ್ದರೆ ಆ 9 ತಿಂಗಳಿಗಾಗುವಷ್ಟು ಮೈಂಟೆನೆನ್ಸ್ ಫಂಡ್ ಹೊಂದಿರಬೇಕು. ವೀಸಾಗೆ ಅರ್ಜಿ ಸಲ್ಲಿಸುವಾಗಲೇ ಅದಕ್ಕೆ ಬೇಕಾದ ದಾಖಲೆ ಪ್ರಸ್ತುತಪಡಿಸಬೇಕಾಗಿರುತ್ತದೆ.

ಇದನ್ನೂ ಓದಿ: ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್​ಎಎಲ್

ಭಾರತೀಯ ವಿದ್ಯಾರ್ಥಿಗಳಿಗೆ ಈ ಹೊಸ ರೂಲ್ಸ್ ತೊಂದರೆ ಆಗುತ್ತಾ?

ಯುಕೆಗೆ ಓದಲು ಹೋಗುವ ಭಾರತೀಯ ವಿದ್ಯಾರ್ಥಿಗಳು ಒಂದು ಕೋರ್ಸ್​ಗೆ ವರ್ಷಕ್ಕೆ ಸರಾಸರಿಯಾಗಿ 25 ಲಕ್ಷ ರೂ ವ್ಯಯಿಸುತ್ತಾರಂತೆ. ಆದ್ದರಿಂದ ಬ್ರಿಟನ್ ಸರ್ಕಾರ ನಿಗದಿ ಮಾಡಿರುವ 1.63 ಲಕ್ಷ ಮಾಸಿಕ ಮೈಂಟೆನೆನ್ಸ್ ನಿಧಿಯ ಮೊತ್ತ ಭಾರತೀಯರ ಮೇಲೆ ಪರಿಣಾಮ ಬೀರುವುದು ಅನುಮಾನ ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us