ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

Dhobi gets tax notice over Rs 598 crore diamond deals: ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಏನು ಅನಾಹುತವಾಗಬಹುದು ಎಂಬುದಕ್ಕೆ ಇನ್ನೊಂದು ನಿದರ್ಶನ ಸಿಕ್ಕಿದೆ. ರಾಜಸ್ಥಾನದ ಅಜ್ಮೇರ್​ನ ನಿವಾಸಿಯಾದ ಮತ್ತು ಧೋಬಿ ಕೆಲಸ ಮಾಡುವ ವ್ಯಕ್ತಿಯ ಹೆಸರಿನಲ್ಲಿ ನೂರಾರು ಕೋಟಿ ರೂ ವಹಿವವಾಟು ಆಗಿದೆ. ಆದಾಯ ತೆರಿಗೆ ಇಲಾಖೆ ಈತನ ಮೇಲೆ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಕೊಟ್ಟಿದೆ.

ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?
ಆದಾಯ ತೆರಿಗೆ ಇಲಾಖೆ
Image Credit source: Shutterstock

Updated on: Apr 09, 2026 | 12:13 PM

ಅಜ್ಮೇರ್, ಏಪ್ರಿಲ್ 9: ಬಟ್ಟೆ ಒಗೆಯುವ ಕಾಯದ ಧೋಬಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ಬರೋಬ್ಬರಿ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಬಂದಿದೆ. ಧೋಬಿ ಹೆಸರಲ್ಲಿ ದೊಡ್ಡ ಪ್ರಮಾಣದ ಡೈಮಂಡ್ ವ್ಯಾಪಾರ ನಡೆದಿದ್ದ ಹಿನ್ನೆಲೆಯಲ್ಲಿ ಇನ್ಕಮ್ ಟ್ಯಾಕ್ಸ್ ಇಲಾಖೆಯು ಆತನ ಬೆನ್ನು ಬಿದ್ದಿದೆ. ರಾಜಸ್ಥಾನದ ಅಜ್ಮೇರ್ ನಗರದ ರಾಮಗಂಜ್ ಎಂಬಲ್ಲಿನ ರಸ್ತೆಬದಿಯಲ್ಲಿ ಬಟ್ಟೆ ಒಗೆಯುವ ಮತ್ತು ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ ಕುಮಾರ್ ಎನ್ನುವ ಈ ಅಮಾಯಕ ವ್ಯಕ್ತಿ ಈಗ ನೂರಾರು ಕೋಟಿ ರೂ ಮಾತುಗಳನ್ನು ಕೇಳಿ ದಿಕ್ಕು ತೋಚದಂತಾಗಿದ್ದಾನೆ.

ಬ್ಯಾಂಕ್ ಅಕೌಂಟ್ ಇವನದ್ದಲ್ಲ… ಆದರೆ, ನೋಟೀಸ್ ಯಾಕೆ?

ಜಿತೇಂದ್ರ ಕುಮಾರ್ ಅವರ ಹೆಸರಿನಲ್ಲಿ ಇರುವ ಬ್ಯಾಂಕ್ ಅಕೌಂಟ್​ನಿಂದ ನೂರಾರು ಕೋಟಿ ರೂ ಮೊತ್ತದ ವಹಿವಾಟು ನಡೆದಿದೆ. ಆದರೆ, ಇವರನ್ನು ಕೇಳಿದಾಗ, ಆ ಬ್ಯಾಂಕ್ ಅಕೌಂಟ್ ತನ್ನದಲ್ಲ. ತನಗೇನೂ ಗೊತ್ತಿಲ್ಲ ಎಂದಿದ್ದಾನೆ. ಆದರೆ, ಎರಡು ವರ್ಷದ ಹಿಂದೆ ಪಾಲಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದಾಗಿ ಒಂದು ಮಾಹಿತಿ ನೀಡುತ್ತಾನೆ.

ಇದನ್ನೂ ಓದಿ: ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಜಿತೇಂದ್ರ ಕುಮಾರ್ ಅವರು ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಕೀಲ ರಾಕೇಶ್ ತಾಡ ಅವರು ಪಾಲಿಯಲ್ಲಿರುವ ಯಾರೂ ವ್ಯಾಪಾರಿಯು ಜಿತೇಂದ್ರನ ಅಕೌಂಟ್ ಅನ್ನು ನಿಭಾಯಿಸುತ್ತಿರಬಹುದು ಎಂದು ಅನುಮಾನಿಸಿದ್ದಾರೆ. ಬ್ಯಾಂಕ್ ಹಾಗೂ ಅಕೌಂಟ್ ನಿಭಾಯಿಸುತ್ತಿರುವ ವ್ಯಕ್ತಿಯ ವಿರುದ್ಧ ಎಫ್​ಐಆರ್ ಸಲ್ಲಿಸಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.

‘598 ಕೋಟಿ ರೂ ವಹಿವಾಟು ನಡೆಸಲಾಗಿರುವುದರ ವಿವರ ಕೇಳಿ ಐಟಿ ಇಲಾಖೆ ಶೋಕಾಸ್ ನೋಟೀಸ್ ಕೊಟ್ಟಿದೆ. ನಾವು ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇವೆ’ ಎಂದು ರಾಕೇಸ್ ತಾಡ ಮಾಹಿತಿ ನೀಡಿದ್ದಾರೆ.

ಪ್ಯಾನ್ ಕಾರ್ಡ್ ಕಳುವಾದರೆ ಏನು ಮಾಡಬೇಕು?

ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಗುರುತಿನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ಅದಕ್ಕೆ ನಿಮ್ಮ ಪ್ಯಾನ್ ಅನ್ನು ನೀಡಲಾಗುತ್ತದೆ. ಆ ಅಕೌಂಟ್​ನಲ್ಲಿ ಏನೇ ವಹಿವಾಟು ಆದರೂ ಪ್ಯಾನ್​ನಲ್ಲಿ ದಾಖಲಾಗುತ್ತದೆ. ಇದರಿಂದ ವಂಚಕರು ಸಿಕ್ಕಿಬೀಳುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಇಂಥ ದುರ್ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿತರಿಗೆ ಮೊಬೈಲ್ ಒಟಿಪಿ ನೀಡಬಾರದು. ಆಗಾಗ್ಗೆ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕು. ಕ್ರೆಡಿಟ್ ರಿಪೋರ್ಟ್ ಕೂಡ ತೆಗೆಸುತ್ತಿರಬೇಕು. ಅದರಲ್ಲಿ ಪ್ಯಾನ್ ಅಡಿಯಲ್ಲಿ ಏನೇನು ವಹಿವಾಟು ನಡೆದಿದೆ ಎಲ್ಲವೂ ದಾಖಲಾಗಿರುತ್ತದೆ. ನಿಮ್ಮ ಸಮ್ಮತಿ ಇಲ್ಲದೆ ಯಾವುದಾದರೂ ವಹಿವಾಟು ನಡೆದಿದ್ದರೆ ದೂರು ಕೊಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us