Reliance Focus: ಯುವಕರು, ಡಾಟಾ, ಎಐ: ರಿಲಾಯನ್ಸ್​ನ ಭವಿಷ್ಯದ ಆದ್ಯತೆಗಳ ಸುಳಿವು ಬಿಚ್ಚಿಟ್ಟ ಮುಕೇಶ್ ಅಂಬಾನಿ

|

Updated on: Dec 29, 2023 | 1:17 PM

Mukesh Ambani Speaks: ಕುಟುಂಬ ಎಷ್ಟೇ ದೊಡ್ಡದಾಗಿ ಬೆಳೆದರೂ ಅದು ಧೀರೂಭಾಯ್ ಫ್ಯಾಮಿಲಿಯಾಗಿಯೇ ಸದಾ ಉಳಿಯುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ರಿಲಾಯನ್ಸ್ ಫ್ಯಾಮಿಲಿ ಡೇ ಸೆಲಬ್ರೇಶನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಕೇಶ್ ಅಂಬಾನಿ ಯುವಕರಿಗೆ ಸಾಕಷ್ಟು ಟಿಪ್ಸ್ ನೀಡಿದ್ದಾರೆ. ಯುವಕರು ತಪ್ಪು ಮಾಡುತ್ತಾರೆ. ಆದರೆ, ಆ ತಪ್ಪನ್ನು ಅವಲೋಕಿಸಲು ಕಾರಣಹರಣ ಮಾಡುವ ಬದಲು ಮುಂದೆ ಆ ತಪ್ಪಾಗದಂತೆ ಮುಂದುವರಿಯಬೇಕು ಎಂಬುದು ಅಂಬಾನಿ ಸಲಹೆ.

Reliance Focus: ಯುವಕರು, ಡಾಟಾ, ಎಐ: ರಿಲಾಯನ್ಸ್​ನ ಭವಿಷ್ಯದ ಆದ್ಯತೆಗಳ ಸುಳಿವು ಬಿಚ್ಚಿಟ್ಟ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
Follow us on

ಮುಂಬೈ, ಡಿಸೆಂಬರ್ 29: ವಿಶ್ವದ ಟಾಪ್ 10 ಬಿಸಿನೆಸ್ ಸಂಸ್ಥೆಯಾಗಿ ರಿಲಾಯನ್ಸ್ ಬೆಳೆಯಬಲ್ಲುದು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ನಿನ್ನೆ (ಡಿ. 28) ನಡೆದ ರಿಲಾಯನ್ಸ್ ಫ್ಯಾಮಿಲಿ ಡೇ ಸೆಲಬ್ರೇಶನ್ ಕಾರ್ಯಕ್ರಮದಲ್ಲಿ (Reliance Family Day Celebrations) ಮಾತನಾಡುತ್ತಿದ್ದ ಅವರು ತಮ್ಮ ಸಂಸ್ಥೆಯ ಭವಿಷ್ಯದ ಹಾದಿ, ಯುವ ನಾಯಕತ್ವಕ್ಕೆ ಮಾರ್ಗದರ್ಶನಗಳನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ಕುಟುಂಬ ದೊಡ್ಡದಾಗುತ್ತಾ ಹೋದರೂ ಧೀರೂಭಾಯ್ ಫ್ಯಾಮಿಲಿಯಾಗಿಯೇ ಸದಾ ಉಳಿಯುತ್ತದೆ. ತಮ್ಮ ಸಂಸ್ಥೆ ಈ ಭೂಮಿ ಮತ್ತು ಮಾನವ ಕುಲಕ್ಕೆ ಸ್ಪಂದಿಸುತ್ತದೆ. ಭಾರತ ಮಾತೆ ಹಾಗೂ ಪ್ರತಿಯೊಬ್ಬ ಭಾರತೀಯರಿಗೂ ಸ್ಪಂದಿಸುತ್ತದೆ ಎಂದು ಅಂಬಾನಿ ತಮ್ಮ ಮನಕಲಕುವ ಭಾಷಣದಲ್ಲಿ ತಿಳಿಸಿದ್ದಾರೆ.

ಯುವಕರಿಗೆ ಅಂಬಾನಿ ಕಿವಿಮಾತು

‘ಯುವ ನಾಯಕರು ತಪ್ಪುಗಳನ್ನು ಮಾಡುವುದು ಖಂಡಿತ. ಆದರೆ, ಅವರಿಗೆ ನನ್ನ ಸಲಹೆ ಬಹಳ ಸರಳ: ಹಿಂದೆ ಮಾಡಿದ ತಪ್ಪುಗಳನ್ನು ಅವಲೋಕಿಸಲು ನಿಮ್ಮ ಶ್ರಮ ವ್ಯಯಿಸಬೇಡಿ. ಅದರ ಬದಲು ಅಂಥದ್ದೇ ತಪ್ಪುಗಳನ್ನು ಮತ್ತೆ ಮಾಡಲು ಹೋಗಬೇಡಿ.

‘ನಿಮ್ಮ ಇವತ್ತಿನ ಮತ್ತು ಭವಿಷ್ಯದ ಗುರಿಗಳನ್ನು ಈಡೇರಿಸಲು ಯಾವಾಗಲೂ ಧೈರ್ಯವಾಗಿ ಮುನ್ನುಗ್ಗಬೇಕು. ಈ ದಾರಿಯಲ್ಲಿ ಒಬ್ಬರಿಗೊಬ್ಬರು ನೆರವಾಗಬೇಕು. ವೈಯಕ್ತಿಕವಾಗಿ ಸಾಧಿಸುವುದಕ್ಕಿಂತ ಬಹಳ ಹೆಚ್ಚಿನದನ್ನು ಸಾಮೂಹಿಕವಾಗಿ ಸಾಧಿಸಬಹುದು. ಸಾಮೂಹಿಕವಾಗಿ ಕೆಲಸ ಮಾಡುವಾಗ ತಪ್ಪುಗಳಾಗುವುದು ಕಡಿಮೆ,’ ಎಂದು ಮುಕೇಶ್ ಅಂಬಾನಿ ತಮ್ಮ ಫ್ಯಾಮಿಲಿ ಡೇ ಸೆಲಬ್ರೇಶನ್ ಕಾರ್ಯಕ್ರಮದಲ್ಲಿ ಯುವಕರಿಗೆ ತಿಳಿ ಹೇಳಿದ್ದಾರೆ.

ಇದನ್ನೂ ಓದಿ: ಹೈಡ್ರೋಜನ್ ಉತ್ಪಾದನೆಗೆ ಬೇಕಾದ ಎಲೆಕ್ಟ್ರೋಲೈಸರ್ ಘಟಕಕ್ಕೆ 21 ಕಂಪನಿಗಳಿಂದ ಬಿಡ್; ಪೈಪೋಟಿಯಲ್ಲಿ ಅಂಬಾನಿ, ಅದಾನಿ, ಜಿಂದಾಲ್

ಅಂದಹಾಗೆ, ಮುಕೇಶ್ ಅಂಬಾನಿ ತಮ್ಮ ಮೂವರು ಮಕ್ಕಳಿಗೆ ರಿಲಾಯನ್ಸ್​ನ ವಿವಿಧ ಕಂಪನಿಗಳ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಬೇರೆ ಬೇರೆ ರಿಲಾಯನ್ಸ್ ಉದ್ದಿಮೆಗಳನ್ನು ನಿಭಾಯಿಸುತ್ತಿದ್ದಾರೆ.

‘ರಿಲಾಯನ್ಸ್ ಸದಾ ಯುವ ಶಕ್ತಿಯಾಗಿಯೇ ಉಳಿಯಬೇಕು. ನಮ್ಮ ಎಲ್ಲಾ ಪ್ರತಿಭಾನ್ವಿತ ತಂಡಗಳ ಸರಾಸರಿ ವಯಸ್ಸು 30 ವರ್ಷದಷ್ಟಿರಬೇಕು. ರಿಲಾಯನ್ಸ್​ನ ಭವಿಷ್ಯವು ಆಕಾಶ್, ಇಶಾ, ಅನಂತ್ ಮತ್ತವರ ತಲೆಮಾರಿಗೆ ಸೇರಿದೆ’ ಎಂದು ಭಾರತದ ನಂಬರ್ ಒನ್ ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ.

ಪ್ರತಿಯೊಬ್ಬ ಉದ್ಯೋಗಿಯೂ ಮಾಲೀಕನ ಮನೋಭಾವದಲ್ಲಿ ಕೆಲಸ ಮಾಡಬೇಕು: ಅಂಬಾನಿ

ಮುಕೇಶ್ ಅಂಬಾನಿ ಕಿರಿಯ ಉದ್ಯೋಗಿಗಳಿಗೆ ಇನ್ನೊಂದು ಮಹತ್ವದ ಕಿವಿಮಾತು ಹೇಳಿದ್ದಾರೆ. ‘ರಿಲಾಯನ್ಸ್​ನ ಸಾಂಸ್ಥಿಕ ಸಂಸ್ಕೃತಿಯ ಒಂದು ಮುಖ್ಯ ಅಂಶ ಎಂದರೆ ಮಾಲಕತ್ವದ ಮನೋಭಾವದಲ್ಲಿ ಕೆಲಸ ಮಾಡುವುದು. ಈ ಸಂಸ್ಥೆಯ ಸಂಸ್ಥಾಪಕರ ಉದ್ದೇಶ ಮತ್ತು ಅನುಭಾವವನ್ನು ನಿಮ್ಮದಾಗಿಸಿಕೊಂಡರೆ ನೀವು ಪ್ರತಿಯೊಬ್ಬರೂ ಕೂಡ ರಿಲಾಯನ್ಸ್​ನ ಮಾಲೀಕರಾಗುತ್ತೀರಿ. 30 ವರ್ಷ ವಯಸ್ಸಿನ ನಮ್ಮ ಯುವ ಉದ್ಯೋಗಿಗಳು ಇದೇ ಉತ್ಸಾಹದಲ್ಲಿ ಕೆಲಸ ಮಾಡುವುದನ್ನು ಕಂಡಾಗ ಖುಷಿ ಆಗುತ್ತದೆ,’ ಎಂದು ಅಂಬಾನಿ ತಿಳಿಸಿದ್ದಾರೆ.

ರಿಲಾಯನ್ಸ್ ಭವಿಷ್ಯದ ಹೆಜ್ಜೆಗಳು…

‘ದೇಶೀಯ ಮತ್ತು ಜಾಗತಿಕ ವ್ಯವಹಾರ ಪರಿಸರ ಬಹಳ ಬೇಗ ಬದಲಾಗುತ್ತಿದೆ. ಆರಾಮವಾಗಿರಲು ಅವಕಾಶವೇ ಇಲ್ಲ. ರಿಲಾಯನ್ಸ್ ಈ ಹಿಂದೆಯೂ ಜಡವಾಗಿ ಉಳಿಯಲಿಲ್ಲ. ಮುಂದೆಯೂ ಹಾಗೇ ಇರುವುದಿಲ್ಲ. ಹೊಸತನದ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಾ ಬಂದಿದ್ದೇವೆ.

ಇದನ್ನೂ ಓದಿ: ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ… ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ

‘ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುತ್ತಿದೆ. ರಿಲಾಯನ್ಸ್​ಗೆ ಅದ್ಭುತ ಅವಕಾಶ ಇದೆ. ವಿಶ್ವದ ಟಾಪ್ 10 ಉದ್ಯಮ ಸಂಸ್ಥೆಯಾಗಿ ರಿಲಾಯನ್ಸ್ ಬೆಳೆಯಬಲ್ಲುದು’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ಅಂಬಾನಿ ಹೇಳಿದ್ದಾರೆ.

ಹೊಸ ವರ್ಷಕ್ಕೆ ಮೂರು ಸಂಕಲ್ಪ…

ಮುಕೇಶ್ ಅಂಬಾನಿ ಈ ವೇಳೆ ಹೊಸ ವರ್ಷಕ್ಕೆ ಮೂರು ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

  1. ಡಿಜಿಟಲ್ ಪ್ಲಾಟ್​ಫಾರ್ಮ್ಸ್, ಡಾಟಾ ಮತ್ತು ಎಐ ಅಳವಡಿಕೆಯಲ್ಲಿ ರಿಲಾಯನ್ಸ್ ಜಾಗತಿಕ ನಾಯಕರ ಸಾಲಿನಲ್ಲಿ ಇರಬೇಕು.
  2. ಪ್ರತಿಭೆ ಪೋಷಣೆಯಲ್ಲಿ ರಿಲಾಯನ್ಸ್ ಮುಂಚೂಣಿಯಲ್ಲಿ ಇರಬೇಕು.
  3. ಸಾಂಸ್ಥಿಕ ಸಂಸ್ಕೃತಿಯಲ್ಲಿ ರಿಲಾಯನ್ಸ್ ಮುಂಚೂಣಿಯಲ್ಲಿರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ