AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

19ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ!

ಪ್ರೇಮ ವಿವಾಹ ಭೀಕರ ಕಗ್ಗೊಲೆಯಾಗಿದೆ. 19ರ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ 40 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೋಷಕರು ಕರೆ ಮಾಡಿ ಪ್ರೀಯಕರನ ಜೊತೆ ಅದ್ಧೂರಿ ಮದ್ವೆ ಮಾಡಿಕೊಡುವುದಾಗಿ ಆಫರ್ ನೀಡಿ ಮನೆಗೆ ಕರೆಯಿಸಿಕೊಂಡಿದ್ದಾರೆ. ಮಗಳು ಮನೆ ಸೇರಿದ ಬಳಿಕ ಪೋಷಕರು, ಯುವತಿಯನ್ನು ಮದ್ವೆಯಾಗಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ರಕ್ತಪಾತದ ಸಂಪೂರ್ಣ ವಿವರ ಇಲ್ಲಿದೆ.

19ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ!
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Nov 28, 2024 | 5:23 PM

Share

ಚಿತ್ರದುರ್ಗ, (ನವೆಂಬರ್ 28): ಆತ ಮದ್ವೆಯಾಗಿ (Marriage) ಸುಖಿ ಸಂಸಾರ ನಡೆಸಬೇಕೆಂಬ ಕನಸು ಕಂಡವನು. ಆದ್ರೆ ಎರಡು ಮದ್ವೆಯಾದ್ರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಇಲ್ಲದೇ ಕೊಲೆಯಾಗಿದ್ದಾನೆ. ಪ್ರೀತಿ ಮದುವೆಯಾಗಿದ್ದ 46 ವರ್ಷದ ಮಂಜುನಾಥನನ್ನು ಯುವತಿಯ ಪೋಷಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚಿತ್ರದುರ್ಗ (Chitradurga) ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮನೆಯ ಯುವತಿ (ರಕ್ಷಿತಾ-19) ಪ್ರೀತಿಯ ಬಲೆಗೆ ಬಿದ್ದಿದ್ದ ಮಂಜುನಾಥ್​, ಓಡಿ ಹೋಗಿ ಆಕೆಯೊಂದಿಗೆ ಮದುವೆ ಮಾಡಿಕೊಂಡಿದ್ದ. ಆದ್ರೆ, ಯುವತಿ ಪೋಷಕರು ಕರೆ ಮಾಡಿ ಎಲ್ಲರ ಸಮ್ಮುಖದಲ್ಲೇ ಮದ್ವೆ ಮಾಡಿಕೊಡುವುದಾಗಿ ಯುವತಿಯನ್ನು ಪುಸಲಾಯಿಷಿ ಮನೆಗೆ ಕರೆಯಿಸಿದ್ದಾರೆ. ಬಳಿಕ ಯುವತಿಯ ಪೋಷಕರು, ಮಂಜುನಾಥನ ಜೀವ ತೆಗೆದಿದ್ದಾರೆ.

46 ವರ್ಷ ವ್ಯಕ್ತಿ ಮೇಲೆ 19 ವರ್ಷದ ಯುವತಿಗೆ ಪ್ರೇಮಾಂಕುರ

ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದ ಮಂಜುನಾಥ್ ನಿಗೆ ಸುಮಾರು 46 ವರ್ಷ ವಯಸ್ಸು. ಆರೇಳು ವರ್ಷಗಳ ಹಿಂದೆ ಶಿಲ್ಪಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಆದ್ರೆ, ಮಂಜುನಾಥನ ಹೆಸರು ಬರೆದಿಟ್ಟು ದಾವಣಗೆರೆಯ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಹಿನ್ನೆಲೆಯಲ್ಲಿ ಮಂಜುನಾಥನಿಗೆ ಆರು ವರ್ಷ ಶಿಕ್ಷೆ ಆಗಿತ್ತು. ಬಳಿಕ ಮಂಜುನಾಥ್​, ಹೈಕೋರ್ಟ್ ನಲ್ಲಿ ಜಾಮೀನು ಪಡೆದು ಹೊರ ಬಂದು ಕೃಷಿ ಮಾಡಿಕೊಂಡಿದ್ದ. ಈ ನಡುವೆ ಕಳೆದೊಂದು ವರ್ಷದಿಂದ ಪಕ್ಕದ ಮನೆಯ ಯುವತಿ (ರಕ್ಷಿತಾ-19) ಜತೆ ಪ್ರೇಮಾಂಕುರ ಆಗಿದೆ. ಆದ್ರೆ, ಯುವತಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ದಂಪತಿ ಹತ್ಯೆ ಕೇಸ್ ಬೇಧಿಸಿದ ಪೊಲೀಸರು: ಅಳಿಯ ಮನೆ ತೊಳಿಯ ಲಾಕ್

ಆದರೂ ಸಹ ಯುವತಿ ಪೋಷಕರ ವಿರೋಧ ಕಾರಣಕ್ಕೆ ಮನೆಬಿಟ್ಟು ಹೋಗಿ ಮದುವೆ ಆಗಲು ನಿರ್ಧರಿಸಿದ್ದಳು. ಈ ಹಿನ್ನೆಲೆಯಲ್ಲಿ ಮನೆಯಲ್ಲಿರಲು ಆಗುತ್ತಿಲ್ಲ ನಿನ್ನ ಬಿಟ್ಟು ಬದುಕಲಾಗದು. ನನ್ನ ಕರೆದುಕೊಂಡು ಹೋಗು ಎಂದು ಯುವತಿ ಮಂಜುನಾಥ್ ಗೆ ಕರೆ ಮಾಡಿ ಹೇಳಿದ್ದಳು. ಅದರಂತೆ ಅಕ್ಟೋಬರ್ 7ರಂದು ಮಂಜುನಾಥ್​. ಯುವತಿಯನ್ನು ಕರೆದುಕೊಂಡು ಊರು ಬಿಟ್ಟು ಓಡಿ ಹೋಗಿದ್ದ. ಬಳಿಕ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿಯ ಹೊಸಗುಡ್ಡದ ದೇಗುಲದಲ್ಲಿ ಮದುವೆ ಆಗಿದ್ದರು.

ಮದ್ವೆ ಮಾಡಿಕೊಡುವುದಾಗಿ ಕರೆಯಿಸಿ ಹತ್ಯೆ

ಇತ್ತ ಯುವತಿ (ರಕ್ಷಿತಾ) ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಠಾಣೆಗೆ ಆಗಮಿಸಿದ ವೇಳೆ ಪೋಷಕರು ಇಪ್ಪತ್ತು ದಿನದಲ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿದ್ದರು. ರಾಜಿ ಪಂಚಾಯತಿ ಮಾಡಿ ಯುವತಿಯನ್ನು (ರಕ್ಷಿತಾ) ಮನೆಗೆ ಕರೆದುಕೊಂಡು ಹೋಗಿದ್ದರು. ಕೆಲ ದಿನ ಚಿತ್ರದುರ್ಗದಲ್ಲೇ ಇರಲು ನಿರ್ಧರಿಸಿದ ಮಂಜುನಾಥ್, ಮಲ್ಲಾಪುರ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದನು. ಆದ್ರೆ, ಯುವತಿ ಕಡೆಯಿಂದ ಪೋಷಕರು ಮಂಜುನಾಥ್ ಗೆ ಕರೆ ಮಾಡಿ ಊರಿಗೆ ಬರುವಂತೆ ಹೇಳಿಸಿದ್ದರು. ಮತ್ತೊಂದು ಕಡೆ ಮಂಜುನಾಥ್ ಗೆ ಬೆದರಿಸುವ ಕೆಲಸವೂ ನಡೆಸಿದ್ದರು. ಕೊನೆಗೂ ನಿನ್ನೆ(ನವೆಂಬರ್ 28) ಸಂಜೆ ವೇಳೆ ಮಂಜುನಾಥ್ ಊರಿಗೆ ಬಂದಿದ್ದಾನೆ. ಇದನ್ನು ತಿಳಿದ ಯುವತಿ ಪೋಷಕರು ಮನೆಗೆ ನುಗ್ಗಿ ಮಂಜುನಾಥನ ಮೇಲೆ ಆಯುಧಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಮಂಜುನಾಥ ಮನೆಗೆ ಬಂದು ತಂದೆ, ತಾಯಿ ಭೇಟಿಯಾಗಿ ಮಾತಾಡುವಷ್ಟರಲ್ಲೇ ಯುವತಿ (ರಕ್ಷಿತಾ) ತಂದೆ ಜಗಧೀಶ್ ಮತ್ತು ಇಪ್ಪತ್ತು ಜನ ಸಂಬಂಧಿಕರ ಗುಂಪು ಕಣಿಗೆ, ಸಲಾಕೆ, ಹಾರಿ ಕೈಲಿಡಿದು ಮನೆಗೆ ನುಗ್ಗಿ ದಾಂಧಲೆ ಮಾಡಿದೆ. ಮನೆಯಿಂದ ಹೊರಗೆಳೆದು ಮನಸೋ ಇಚ್ಛೆ ಹಲ್ಲೆ ನಡೆ ನಡೆಸಿದೆ. ಪರಿಣಾಮ ತೀವ್ರ ಗಾಯಗೊಂಡ ಮಂಜುನಾಥ್ ನನ್ನು ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಅಸುನೀಗಿದ್ದಾನೆ. ಇನ್ನು ಮಗ ರಕ್ಷಣೆಗೆ ಹೋಗಿದ್ದ ತಂದೆ ಚಂದ್ರಪ್ಪ, ತಾಯಿ ಅನಸೂಯಮ್ಮ ಮೇಲೂ ಕಲ್ಲು, ಕಣಿಗೆಗಳಿಂದ ಭೀಕರ ಹಲ್ಲೆ ಮಾಡಿ ಕಟ್ಟಿ ಹಾಕಲು ಯತ್ನಿಸಿದ್ದಾರೆ.

ಕೊಲೆಗೆ ಕಾರಣವೇನು?

ತಂದೆ ಚಂದ್ರಪ್ಪ, ತಾಯಿ ಅನಸೂಯಮ್ಮ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ ಅಕ್ಕಪಕ್ಕದ ಮನೆಯವರು. ಆದ್ರೆ, ಯುವತಿಗೆ 19ವರ್ಷ , ಮದುವೆಯಾದ ವ್ಯಕ್ತಿಗೆ 46 ವರ್ಷ. ಅಲ್ಲದೆ ಮೊದಲು ಪ್ರೀತಿಸಿ ಮದುವೆಯಾದವಳು ಆತ್ಮಹತ್ಯೆಗೆ ಶರಣಾಗಿದ್ದು ಮಂಜುನಾಥ್ ವಿರುದ್ಧ ಕೇಸ್ ನಡೆಯುತ್ತಿದೆ. ಈ ಎಲ್ಲಾ ಕಾರಣಕ್ಕೆ ಯುವತಿಯ ಪೋಷಕರ ವಿರೋಧ ಇತ್ತು. ಹೀಗಾಗಿ, ದ್ವೇಷದಿಂದ ಯುವತಿ(ರಕ್ಷಿತಾ) ಕುಟುಂಬಸ್ಥರು ಮಂಜುನಾಥ್ ನ ಹತ್ಯೆ ಮಾಡಿದ್ದಾರೆ. ಅಲ್ಲದೇ ತಂದೆ , ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

6 ಆರೋಪಿಗಳ ಬಂಧನ

ಇನ್ನು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಜಗಧೀಶ್ ಮತ್ತು ಇಪ್ಪತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಈಗಾಗಲೇ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಸವರಾಜಪ್ಪ, ಶಂಕರಮ್ಮ, ಕಾವ್ಯ, ದಿವ್ಯ, ಪ್ರಸನ್ನ, ಹರ್ಷ ಬಂಧಿತರಾಗಿದ್ದು, ಇನ್ನುಳಿದ ಪ್ರಮುಖ ಆರೋಪಿ ಜಗಧೀಶ್ ಮತ್ತಿತರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More