ಭೂ ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಜಮೀನು ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ತಂದೆ ಮಾರಿರುವ ಜಮೀನಿನ ಬಗ್ಗೆ ವಿಚಾರಿಸಲು ಹೋದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ.

ಭೂ ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ಬರ್ಬರ ಕೊಲೆ

Updated on: Oct 12, 2025 | 1:31 PM

ರಾಮನಗರ, ಅಕ್ಟೋಬರ್​ 12: ಭೂವಿವಾದ ಹಿನ್ನಲೆ ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಹೊಡೆದು ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ಸುನೀಲ್(30) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಪಾರ್ಥಸಾರಥಿ ಮತ್ತು ಪುತ್ರ ಆಕಾಶ್​ ನನ್ನು ಪೊಲೀಸರು ಬಂಧಿಸಿದ್ದಾರೆ.

ಸುನೀಲ್​ ತಂದೆ ಮುನಿರಾಜು ಪಾರ್ಥಸಾರಥಿಗೆ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿದ್ದರು. ಜಮೀನು ಮಾರಾಟದ ಬಗ್ಗೆ ವಿಚಾರಿಸಲು ಸಹೋದರರಾದ ಸುನೀಲ್​ ಮತ್ತು ಕಿರಣ್​ ತೆರಳಿದ್ದರು. ಈ ವೇಳೆ ಗಲಾಟೆ ನಡೆದಿದ್ದು, ಪಾರ್ಥಸಾರಥಿ ಮತ್ತು ಆಕಾಶ್​ ಸೇರಿ ಸುನೀಲ್ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ತಂದೆಯ ಸಾವಿನ ನೋವಲ್ಲೇ ಮಗಳ ಆತ್ಮಹತ್ಯೆ

ಮತದಾನದ ವೇಳೆ ಹೃದಯಾಘಾತ: ವ್ಯಕ್ತಿ ಸಾವು

ಚುನಾವಣೆಗೆ ಮತದಾನ ಮಾಡಲು ಬಂದಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಾಘಾತವಾಗಿ ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯ ಮಾದರಿ ಕನ್ನಡ ಶಾಲೆಯಲ್ಲಿ ನಡೆದಿದೆ. ಕಣಿಂಬೆಲೆ ಗ್ರಾಮದ ನಿವಾಸಿ ಹೂಗಳ ಸೀನಪ್ಪ(86) ಮೃತ ವ್ಯಕ್ತಿಯಾಗಿದ್ದು, ಬಂಗಾರಪೇಟೆ TAPCMS ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಮತದಾನ ಮಾಡಲು ಅವರು ಬಂದಿದ್ದರು. ಬಿ ವರ್ಗದ 8ರ ಪೈಕಿ 2 ಮತ ಹಾಕಿದ್ದ ಸೀನಪ್ಪ, ಇನ್ನೂ 6 ವೋಟ್ ಹಾಕಲು ಪಕ್ಕದ ಮತಗಟ್ಟೆಗೆ ತೆರಳಿದ್ದರು. ಈ ವೇಳೆ ಮತಗಟ್ಟೆ ಬಳಿಯೇ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ.

ಸಾಲಭಾದೆ: ರೈತ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ವಿಷಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಎನ್. ಗಾದಿಲಿಂಗ (35) ಮೃತ ರೈತನಾಗಿದ್ದು, ಕೀಟನಾಶಕ ಸೇವಿಸಿ ಸೂಸೈಡ್​ ಮಾಡಿಕೊಂಡಿದ್ದಾರೆ. 2‌ ಎಕರೆ 30 ಗುಂಟೆ ಜಮೀನು ಹೊಂದಿದ್ದ ಗಾದಿಲಿಂಗ, ಸಹಕಾರ ಬ್ಯಾಂಕಿನಲ್ಲಿ 1.60 ರೂ. ಲಕ್ಷ ಸಾಲ ಮಾಡಿದ್ದರು. ಜೊತೆಗೆ ಕೆಲವರಿಂದ ಕೈ ಸಾಲವನ್ನೂ ಪಡೆದಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.