ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ: ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್
ಮದುವೆಯಾಗೋದಾಗಿ ನಂಬಿಸಿ ಯುವತಿಯ ಜೊತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದು ವಂಚಿಸಿದ್ದಲ್ಲದೆ, ಆಕೆಯ ಅಪ್ರಾಪ್ತ ಸಹೋದರಿ ಮೇಲೂ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಬಳಿ ಲಕ್ಷಾಂತರ ರೂ. ಹಣ ಕಿತ್ತುಕೊಂಡಿರುವ ಆರೋಪಿ, ಆಕೆಯ ಮನೆಯಲ್ಲಿ ಬಂಗಾರವನ್ನೂ ಕದ್ದಿದ್ದ. ಮದುವೆ ಆಗಿದ್ದರೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿದ್ದ ಎಂದು ದೂರಲಾಗಿದೆ.

ನೆಲಮಂಗಲ, ಡಿಸೆಂಬರ್ 28: ರಾಜ್ಯದಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಆರೋಪ ಪ್ರಕರಣ ಸದ್ದು ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯಿಂದ ಲಕ್ಷಾಂತರ ಹಣ ಬೆದರಿಸಿ ಪಡೆದಿರುವ ಜೊತೆಗೆ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಕದ್ದಿದ್ದ. ಅಲ್ಲದೆ, ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎನ್ನಲಾಗಿದೆ.
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶುಭಾಂಶು ಶುಕ್ಲಾ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ ಈತ, ಮಾಸ್ಟರ್ ಪ್ಲ್ಯಾನ್ ಮಾಡಿ ಆಕೆಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ತನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದ ಸಂತ್ರಸ್ತೆ, ಈತನನನ್ನು ನಂಬಿ ಜೊತೆಗೆ ತೆರಳಿದ್ದಳು. ನಂತರ ಫ್ಲ್ಯಾಟ್ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ; ಪಾದಚಾರಿ ಸಾವು
ಇನ್ನು ಸಮಯ ಕಳೆದಂತೆ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯ ಜೊತೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆತ ಹೇಳಿದ್ದ. ಶುಭಾಂಶು ಪತ್ನಿಯೂ ಸಂತ್ರಸ್ತೆ ಜೊತೆ ಮಾತಾಡಿದ್ದು ತಾನು ಆತನಿಗೆ ಡಿವೋರ್ಸ್ ನೀಡೋದಾಗಿ ತಿಳಿಸಿದ್ದಳು. ಹೀಗಾಗಿ ಶುಭಾಂಶು ಮೇಲೆ ಭರವಸೆ ಇಟ್ಟು ಸಂತ್ರಸ್ತೆ ಸಂಬಂಧ ಮುಂದುವರಿಸಿದ್ದಳು. ಆದರೆ, ಮತ್ತೊಂದು ಅಪ್ರಾಪ್ತ ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರೋದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು. ಆ ಬಳಿಕ ಶುಭಾಂಶು ಚಿತ್ರಹಿಂಸೆ ಆರಂಭವಾಗಿತ್ತು ಎಂದು ದೂರಲಾಗಿದೆ.
ಸಂತ್ರಸ್ತ ಯುವತಿ ಬಳಿ 37 ಲಕ್ಷ ಹಣವನ್ನೂ ಪಡೆದಿದ್ದ ಆರೋಪಿ ಶುಭಾಂಶು, ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಸಹ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದ. ಆ ಬಳಿಕ ಸಂತ್ರಸ್ತೆ ಚಿತ್ರಹಿಂಸೆ ತಾಳಲಾರದೆ ಶುಭಾಂಶುನನ್ನು ಬಿಟ್ಟು ಬಂದಿದ್ದಳು. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಗ್ರೂಪ್ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ ಆತ, ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡೋದಾಗಿ ಹೆದರಿಸಿದ್ದ ಎಂದು ಅಪ್ರಾಪ್ತೆಯೂ ದೂರಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:17 am, Sun, 28 December 25



