Aravind Limbavali: ಉದ್ಯಮಿ ಪ್ರದೀಪ್ ಆತ್ಮಹತ್ಯೆ -ಪ್ರಭಾವಿ ಶಾಸಕ ಲಿಂಬಾವಳಿ ವಿರುದ್ಧ ಎಫ್​ಐಆರ್ ದಾಖಲು, ಇನ್​​ಸೈಡ್​​ ಸ್ಟೋರಿ ಹೀಗಿದೆ

Businessman Suicide: ಮೈಸೂರಿನ ಮನೆ ಮಾರಾಟ ಮಾಡಿ 40 ಲಕ್ಷ ರೂ ಅವರಿಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಲಾಭ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ...

Aravind Limbavali: ಉದ್ಯಮಿ ಪ್ರದೀಪ್ ಆತ್ಮಹತ್ಯೆ -ಪ್ರಭಾವಿ ಶಾಸಕ ಲಿಂಬಾವಳಿ ವಿರುದ್ಧ ಎಫ್​ಐಆರ್ ದಾಖಲು, ಇನ್​​ಸೈಡ್​​ ಸ್ಟೋರಿ ಹೀಗಿದೆ
ಉದ್ಯಮಿ ಪ್ರದೀಪ್ ಆತ್ಮಹತ್ಯೆ
Edited By: ಸಾಧು ಶ್ರೀನಾಥ್​

Updated on: Jan 02, 2023 | 10:15 AM

ಅದು ದೇವಸ್ಥಾನ ಪಕ್ಕದ ರಸ್ತೆ. ಅಲ್ಲಿ ನೆತ್ತರು ಹರಿದಿತ್ತು. ತಲೆ ಮೇಲೆ ಪಿಸ್ತೂಲ್ ಇಟ್ಟುಕೊಂಡಿದ್ದ ವ್ಯಕ್ತಿ ಟ್ರಿಗರ್ ಒತ್ತೇಬಿಟ್ಟಿದ್ದ. ಬಂದ ಕಾರಿನಲ್ಲೆ ಹೆಣವಾಗಿದ್ದ. ಸಾಯುವ ಮುನ್ನ ಬರೆದ ಡೆತ್ ನೋಟ್ ನಲ್ಲಿ ಪ್ರಭಾವಿಗಳ ಹೆಸರು ಉಲ್ಲೇಖಿಸಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದಲ್ಲಿ ಇಂಚಿಂಚು ಶೋಧ ನಡೆಸಲಾಗಿದೆ. ಎಫ್ಎಸ್ಎಲ್ ತಂಡವೇ ಬಂದು ಸಾಕ್ಷ್ಯ ಕಲೆ ಹಾಕಿದೆ. ತಲೆ ಮೇಲಿಟ್ಟುಕೊಂಡು ಟ್ರಿಗರ್ ಒತ್ತಿಕೊಂಡಿದ್ದ ಪಿಸ್ತೂಲ್ ಪಕ್ಕದಲ್ಲೆ ಬಿದ್ದಿತ್ತು. ಕಾರಿನಲ್ಲಿದ್ದ ಕಾಗದಗಳಿಗೆಲ್ಲ ರಕ್ತದ ಕಲೆ ಅಂಟಿಕೊಂಡಿತ್ತು. ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ ಬರೆದಿರುವ ಡೆತ್ ನೋಟ್ ಪ್ರಭಾವಿಗಳಿಗೆ ಉರುಳಾಗುವ ಸಾಧ್ಯತೆ ಇದೆ. ಈ ಮಧ್ಯೆ ಬಿಜೆಪಿ ಶಾಸಕ ಅರವಿಂದ್​ ಲಿಂಬಾವಳಿ (Aravind Limbavali) ವಿರುದ್ಧ ಈಗಾಗಲೇ ಎಫ್​ಐಆರ್ (FIR) ದಾಖಲಾಗಿದೆ.​

ಡೆತ್ ನೋಟ್ ನಲ್ಲಿ ಕೋಟಿ ಕೋಟಿಯ ಲೆಕ್ಕ.. ಪ್ರಭಾವಿಗಳ ಹೆಸರು ಉಲ್ಲೇಖ!

ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿರೊ ವ್ಯಕ್ತಿಯ ಹೆಸರು ಪ್ರದೀಪ್. 47 ವರ್ಷ ವಯಸ್ಸು. ಬೆಂಗಳೂರಿನ ಬೆಳ್ಳಂದೂರು (Bellandur) ಬಳಿಯ ಅಂಬಲಿಪುರ ನಿವಾಸಿ. ಮೊನ್ನೆ ಇಡೀ ಕುಟುಂಬದ ಜೊತೆಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಟ್ಟಿಗೆರೆಯಲ್ಲಿರುವ ವೂಡ್ಸ್ ರೆಸಾರ್ಟ್ ಗೆ ಹೊಸ ವರ್ಷಾಚರಣೆಗಾಗಿ ಬಂದಿದ್ದ. ಆದ್ರೆ ಅದೇನಾಯ್ತೋ ಏನೋ ಶನಿವಾರ ರಾತ್ರಿ ಪತ್ನಿ ಜೊತೆಗೆ ಜಗಳ ಮಾಡಿಕೊಂಡು ವಾಪಸ್ಸು ಬೆಂಗಳೂರಿಗೆ ಹೊರಟವನು, ಮತ್ತೆ ಭಾನುವಾರ ರೆಸಾರ್ಟ್ ಬಳಿ ಬಂದಿದ್ದ. ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಮುಂದೆ ಮುಂದೆ ಕಾರಿನಲ್ಲಿ ಸಾಗ್ತಿದ್ದರು.. ಹಿಂದೆ ಇದ್ದ ಕಾರಿನಲ್ಲಿ ಪ್ರದೀಪ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ (Pradeep Suicide). ಶಬ್ದ ಕೇಳಿ ವಾಪಸ್ಸು ಬಂದ ಪತ್ನಿಗೆ ಘೋರ ದೃಶ್ಯ ಕಂಡಿದೆ.

ಸಾವನ್ನಪ್ಪಿದ್ದ ಪ್ರದೀಪ್ ಸಾವಿಗೂ ಮುನ್ನ ಶಾಸಕ ಅರವಿಂದ ಲೊಂಬಾವಳಿ, ಗೋಪಿ.ಕೆ, ಸೋಮಯ್ಯ, ಜಿ.ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರುಗಳನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಹಾಗಾದ್ರೆ ಪ್ರಭಾವಿಗಳ ಹೆಸರನ್ನ ಪ್ರದೀಪ್ ಉಲ್ಲೇಖ ಮಾಡಿದ್ದೇಕೆ..? ಆ ಇನ್​​ಸೈಡ್​​ ಸ್ಟೋರಿ ಹೀಗಿದೆ.

 ಪ್ರದೀಪ್ ಸೂಸೈಡ್ ನೋಟ್ ಪ್ರಕಾರ… ಇನ್​​ಸೈಡ್​​ ಸ್ಟೋರಿ ಹೀಗಿದೆ:

HSR ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶಕ್ಕೆ ಕೆ. ಗೋಪಿ ಮತ್ತು ಸೋಮಯ್ಯ ಬಳಿ 2018 ರಲ್ಲಿ ಚರ್ಚೆ ಮಾಡಿದ್ದೆ, ರೆಸಾರ್ಟ್ ನಡೆಸಲು ಇವರಿಬ್ಬರು ಒಪ್ಪಿಕೊಂಡು ಪ್ರತಿತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದ್ರೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಕೊಡುವುದಾಗಿ ಹೇಳಿದ್ರು. ಅದಕ್ಕೆ ಒಪ್ಪಿಕೊಂಡು 2018 ರ ಮೇ ಯಿಂದ ಡಿಸೆಂಬರ್ ವರೆಗೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಬ್ಯಾಂಕ್‌ಗೆ ಜಮೆ ಮಾಡಿದ್ದೇನೆ.

ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರೂಪಾಯಿ ನಗದು ರೂಪದಲ್ಲಿ ಈ ಇಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಲಾಭ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ ರಾಜಿ ಸಂಧಾನ ನೆಪದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಲೆಕ್ಕದಲ್ಲಿ… 9 ತಿಂಗಳು ನನ್ನ ಬಳಿ ಹಣ ಪಡೆದರು. ಆನಂತರ 90 ಲಕ್ಷ ರೂ. ವಾಪಸ್ ಕೊಡುತ್ತಾರೆ ಎಂದು ಹೇಳಿದರು.

ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಶಾಸಕ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ. ರಮೇಶ್ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೇನೆ. ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ರಾಘವ ಭಟ್ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ನನಗೆ 2 ಕೋಟಿ 20 ಲಕ್ಷ ಬರಬೇಕಿತ್ತು. ಶಾಸಕರು ರಾಜಿ ಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷದ 9 ಚೆಕ್ ಕೊಡಿಸಿದ್ದರು.

Also read:

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್​​ಐಆರ್

ಪ್ರತಿ ತಿಂಗಳು ಅಕೌಂಟ್ ಗೆ ಜಮೆ ಮಾಡಿಸಿಕೊಳ್ಳುವಂತೆ ಹೇಳಿದ್ರು. ಡೆತ್‌ನೋಟ್ ನಲ್ಲಿನ ಪ್ರಕಾರ 2 ಕೋಟಿ 20 ಲಕ್ಷ ಬರಬೇಕಿದೆ. ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲ ಅದಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಸಹ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು ಎಂದು ಸೂಸೈಡ್​ ಮಾಡಿಕೊಂಡ ಪ್ರದೀಪ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಘಟನೆ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇಷ್ಟೆ ಅಲ್ಲದೆ ಪ್ರದೀಪ್‌ ಮತ್ತು ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಕೂಡ ಇದ್ದು, ಪ್ರಕರಣ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರೊ ಪೊಲೀಸರು ಪ್ರದೀಪ್ ಸಾವಿನ ಕೇಸ್ ನಲ್ಲಿ ಪ್ರಭಾವಿಗಳ ಪಾತ್ರ ಏನು ಅನ್ನೋದನ್ನ ಪತ್ತೆ ಹಚ್ಚಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us