Crime News: ರಾತ್ರಿ ಬಸ್​ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್​ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ

| Updated By: ಸುಷ್ಮಾ ಚಕ್ರೆ

Updated on: Apr 05, 2022 | 1:34 PM

ರಾಘವ್ ಎಂಬ ಆ ವ್ಯಕ್ತಿ ಆಕೆಯ ಮೈಯನ್ನೆಲ್ಲ ಮುಟ್ಟಿ, ಅನುಚಿತವಾಗಿ ವರ್ತಿಸಿದ್ದ. ಆರಂಭದಲ್ಲಿ ಮಹಿಳೆ ಅವನ ಕೈಯನ್ನು ತಳ್ಳಲು ಪ್ರಯತ್ನಿಸಿದರು. ಆದರೆ ಅವನು ಮತ್ತೆ ಆಕೆಯ ಮೇಲೆ ಕೈ ಹಾಕತೊಡಗಿದ. ಇದರಿಂದ ಆಕೆ ಆತನ ಕೈಗೆ ಪಿನ್​ನಿಂದ ಚುಚ್ಚಿ, ಎಲ್ಲರೆದುರು ಕೂಗಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Crime News: ರಾತ್ರಿ ಬಸ್​ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್​ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಚೆನ್ನೈ: ರಾತ್ರಿ ವೇಳೆ ಹೊರಗೆ ಓಡಾಡುವ ಮಹಿಳೆಯರು ಒಂದಲ್ಲಾ ಒಂದು ರೀತಿಯ ಅಹಿತಕರ ಘಟನೆ, ಕಿರುಕುಳವನ್ನು ಅನುಭವಿಸಿಯೇ ಇರುತ್ತಾರೆ. ಅದೇ ಕಾರಣಕ್ಕೆ ಮಹಿಳೆಯರಿಗೆ ರಾತ್ರಿ ಸಂಚಾರ ಇಂದಿನ ಕಾಲದಲ್ಲೂ ಸುರಕ್ಷಿತವಲ್ಲ. ಆದರೆ, ಚಲಿಸುತ್ತಿದ್ದ ಬಸ್​ನಲ್ಲಿ ಕಿರುಕುಳವನ್ನು ಅನುಭವಿಸಿದ ಮಹಿಳೆಯೊಬ್ಬರು ಸರಗಳ್ಳನಿಗೆ ಸೇಫ್ಟಿ ಪಿನ್​ನಿಂದ ಚುಚ್ಚಿ, ಪೊಲೀಸರಿಗೆ ಒಪ್ಪಿಸಿದ ಘಟನೆ ತಮಿಳುನಾಡಿನಲ್ಲಿ (Tamil Nadu Crime) ನಡೆದಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಮದ್ರಾಸ್ ಹೈಕೋರ್ಟ್‌ನ ಮಹಿಳಾ ವಕೀಲರು ಏಪ್ರಿಲ್ 1ರಂದು ರಾತ್ರಿ 10 ಗಂಟೆಗೆ ಚೆನ್ನೈನಿಂದ ವೆಲ್ಲೂರ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬಸ್​ನ ಸೀಟ್​ಗಳ ನಡುವಿನಿಂದ ಕೈ ಹಾಕಿದ್ದ. ನಂತರ ರಾಘವ್ ಎಂಬ ಆ ವ್ಯಕ್ತಿ ಆಕೆಯ ಮೈಯನ್ನೆಲ್ಲ ಮುಟ್ಟಿ, ಅನುಚಿತವಾಗಿ ವರ್ತಿಸಿದ್ದ. ಆರಂಭದಲ್ಲಿ ಮಹಿಳೆ ಅವನ ಕೈಯನ್ನು ತಳ್ಳಲು ಪ್ರಯತ್ನಿಸಿದಳು. ಆದರೆ ಅವನು ಮತ್ತೆ ಆಕೆಯ ಮೇಲೆ ಕೈ ಹಾಕತೊಡಗಿದ.

ಅದರಿಂದ ವಿಚಲಿತರಾದ ಮಹಿಳೆ ತಕ್ಷಣ ಆ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ನಂತರ ಆತನ ಕೈಗೆ ಪಿನ್‌ನಿಂದ ಚುಚ್ಚಿದ್ದಾರೆ. ನಂತರ ಅವಳು ಅವನ ವಿರುದ್ಧ ಗಲಾಟೆ ಮಾಡಿದಾಗ ಆ ವ್ಯಕ್ತಿ ಆಕೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.

ಉಳಿದ ಪ್ರಯಾಣಿಕರು ಮಹಿಳೆಗೆ ಆತನನ್ನು ಬಸ್‌ನಿಂದ ಕೆಳಗಿಳಿಸಿ ಪ್ರಯಾಣ ಮುಂದುವರಿಸುವಂತೆ ಸೂಚಿಸಿದರು. ಆದರೆ, ಕೆಲವು ನಿಮಿಷಗಳ ವಿಳಂಬದಿಂದ ಯಾವುದೇ ನಷ್ಟವಾಗುವುದಿಲ್ಲ ಎಂದು ಮಹಿಳೆ ಹೇಳಿದರು. ನಂತರ ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಲು ತನ್ನೊಂದಿಗೆ ಬರುವಂತೆ ಪ್ರಯಾಣಿಕರನ್ನು ಒತ್ತಾಯಿಸಿದರು.

ನಂತರ ಆ ಮಹಿಳೆ ಆತನನ್ನು ಪೊಲೀಸ್ ಸ್ಟೇಷನ್​ಗೆ ಕರೆದೊಯ್ದಿದ್ದಾಳೆ. ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯಡಿಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಅಥವಾ ಕ್ರಿಮಿನಲ್ ಬಲ ಸೇರಿದಂತೆ ಸೆಕ್ಷನ್‌ಗಳ ಅಡಿಯಲ್ಲಿ ಕೃಷ್ಣಗಿರಿಯ ರಾಘವನ್‌ನನ್ನು ಬಂಧಿಸಲಾಗಿದೆ ಎಂದು ಕೋಯಂಬೇಡು ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಬಾಬು ತಿಳಿಸಿದ್ದಾರೆ. ಆರೋಪಿಯನ್ನು ಏಪ್ರಿಲ್ 2ರವರೆಗೆ ಕಸ್ಟಡಿಗೆ ನೀಡಲಾಗಿದೆ.

ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ಪಾಯಿಂಟ್-ಟು-ಪಾಯಿಂಟ್ ಬಸ್‌ಗಳಲ್ಲಿ ಕಂಡಕ್ಟರ್‌ಗಳನ್ನು ನೇಮಿಸಬೇಕೆಂದು ಮಹಿಳಾ ವಕೀಲರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗೇ, ಮಹಿಳೆಯರು ಮುಂದೆ ಬಂದು ದೌರ್ಜನ್ಯ ಎಸಗುವವರ ವಿರುದ್ಧ ವರದಿ ಮಾಡಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bengaluru Gang Rape: ಬೆಂಗಳೂರಿನ ನರ್ಸ್​ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ರಾಷ್ಟ್ರೀಯ ಮಟ್ಟದ ಈಜುಗಾರರ ಬಂಧನ

Rape: ಗಂಡನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತರು ಸೇರಿ 10 ಮಂದಿ ಬಂಧನ