ಈ ದೇಶದ ಮಗಳಿಗೆ ನ್ಯಾಯ ಸಿಗಲೇಬೇಕು; ಕೊಲೆಯಾದ ದೆಹಲಿ ಬಾಲಕಿಯ ಕುಟುಂಬದ ಪರ ನಿಂತ ರಾಹುಲ್ ಗಾಂಧಿ

| Updated By: ಸುಷ್ಮಾ ಚಕ್ರೆ

Updated on: Aug 04, 2021 | 1:21 PM

Delhi Girl Rape and Murder Case | ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ 9 ವರ್ಷದ ದಲಿತ ಬಾಲಕಿಯ ಮನೆಯವರನ್ನು ಭೇಟಿ ಮಾಡಿರುವ ರಾಹುಲ್ ಗಾಂಧಿ ಈ ದುರಂತ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಸಿಗುವವರೆಗೂ ಹೋರಾಡುತ್ತೇನೆ ಎಂದಿದ್ದಾರೆ.

ಈ ದೇಶದ ಮಗಳಿಗೆ ನ್ಯಾಯ ಸಿಗಲೇಬೇಕು; ಕೊಲೆಯಾದ ದೆಹಲಿ ಬಾಲಕಿಯ ಕುಟುಂಬದ ಪರ ನಿಂತ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟುಹಾಕಿದ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಅಮಾನುಷ ಕೃತ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಶುರುವಾಗಿದೆ. ದಿನದಿಂದ ದಿನಕ್ಕೆ ಮಹಿಳೆ, ಮಕ್ಕಳ ಪಾಲಿಗೆ ಭಾರತದಲ್ಲಿ ಅಸುರಕ್ಷತಾ ವಾತಾವರಣ ಸೃಷ್ಟಿಯಾಗುತ್ತಿರುವುದಕ್ಕೆ ವಿರೋಧ ಪಕ್ಷಗಳು ಕೂಡ ಅಸಮಾಧಾನ ಹೊರಹಾಕಿವೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮೃತ ಬಾಲಕಿಯ ಮನೆಗೆ ಭೇಟಿ ನೀಡಿ, ಆಕೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ದೇಶದ ಮಗಳಿಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕು ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ನಾನು ಮೃತ ಬಾಲಕಿಯ ಮನೆಯವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಯಾರ ಹಣ ಸಹಾಯವಾಗಲಿ, ಅನುಕಂಪವಾಗಲಿ ಬೇಕಾಗಿಲ್ಲ. ಅವರ ಮಗಳ ದುರಂತ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬುದಷ್ಟೇ ಅವರ ಬೇಡಿಕೆ. ಆ ಬೇಡಿಕೆಯನ್ನು ಈಡೇರಿಸುವ ಮೂಲಕ ಭಾರತದ ಮಗಳಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಲೇಬೇಕಾಗಿದೆ. ನಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಿದರೆ ಅದೇ ನಮಗೆ ಮಾಡುವ ಸಹಾಯ ಎಂದು ಮೃತ ಬಾಲಕಿಯ ಕುಟುಂಬಸ್ಥರು ಮನವಿ ಮಾಡಿದ್ದಾರೆ. ನಾನು ಆ ಕುಟುಂಬದ ಜೊತೆಗೆ ನಿಂತು, ಅವರಿಗೆ ನ್ಯಾಯ ಕೊಡಿಸಲು ಬದ್ಧನಾಗಿದ್ದೇನೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದಲಿತ ಬಾಲಕಿಯ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದು ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಬಾಲಕಿಯ ಸಾವಿಗೆ ಕಾರಣರಾದವರಿಗೆ ಅತ್ಯಂತ ಶೀಘ್ರದಲ್ಲೇ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ.

9 ವರ್ಷದ ದಲಿತ ಬಾಲಕಿಯ ಮೇಲೆ ದಾರುಣವಾಗಿ ಅತ್ಯಾಚಾರವೆಸಗಿ, ಆಕೆಯ ದೇಹವನ್ನು ಸುಟ್ಟುಹಾಕಿರುವ ಘಟನೆ ಭಾನುವಾರ ನಡೆದಿತ್ತು. ಸ್ಮಶಾನ ಮೈದಾನದಿಂದ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯನ್ನು ಅರ್ಚಕ ಸೇರಿದಂತೆ ಹಲವು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಅರ್ಚಕ ರಾಧೇಶ್ಯಾಮ್, ಸಲೀಂ, ಲಕ್ಷ್ಮೀನಾರಾಯಣ, ಕುಲದೀಪ್ ಹೀಗೆ ನಾಲ್ವರು ಆರೋಪಿಗಳನ್ನು ಐಪಿಸಿ 304, 342, 201 ಮತ್ತು ಎಸ್ಸಿ / ಎಸ್ಟಿ ಕಾಯ್ದೆಯಡಿ ಬಂಧಿಸಿದ್ದಾರೆ. ವಾಟರ್ ಕೂಲರ್ ನಿಂದ ವಿದ್ಯುತ್ ಸ್ಪರ್ಶವಾಗಿದೆ ಎಂದು ಬಾಲಕಿಯ ತಾಯಿಯನ್ನು ಸ್ಮಶಾನಕ್ಕೆ ಕರೆಸಲಾಗಿತ್ತು. ಅಲ್ಲದೇ ಪೋಲಿಸರಿಗೆ ಕರೆ ಮಾಡಿದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಅಂಗಾಂಗಗಳನ್ನು ಹೊರತೆಗೆಯಲಾಗುತ್ತದೆ ಎಂದು ಅವರು ಹೆದರಿಸಿದ್ದರು. ಹೀಗಾಗಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ, ಬೇರೆಯವರಿಗೆ ಗೊತ್ತಾಗುವ ಮೊದಲೇ ಅಂತಿಮ ಸಂಸ್ಕಾರ ನಡೆಸಲಾಗಿತ್ತು.

‘ನನ್ನ ಮಗಳ ಮುಖವನ್ನೂ ಸರಿಯಾಗಿ ನೋಡಲು ಬಿಡದೆ ನಮ್ಮನ್ನು ಕೇಳದೆ ಅರ್ಚಕರು ಆಕೆಯ ಶವಕ್ಕೆ ಬೆಂಕಿ ಹಚ್ಚಿದ್ದಾರೆ. ನಾನು ನೋಡಿದಾಗ ಆಕೆಯ ತುಟಿ ನೀಲಿಗಟ್ಟಿತ್ತು. ಸ್ಮಶಾನದಲ್ಲಿ ಬೆಂಕಿಯನ್ನು ನೋಡಿ ಸುತ್ತಮುತ್ತಲಿನವರು ಸ್ಥಳಕ್ಕೆ ಬಂದಾಗ ವಿಷಯ ತಿಳಿದು ಬೆಂಕಿ ಆರಿಸಲು ಪ್ರಯತ್ನಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಹೋದಾಗ ಅಲ್ಲಿ ಅರೆಬರೆ ಬೆಂದಿದ್ದ ಬಾಲಕಿಯ ಕಾಲುಗಳು ಮಾತ್ರ ಸಿಕ್ಕಿವೆ’ ಎಂದು ಮೃತ ಬಾಲಕಿಯ ತಾಯಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ #JusticeForDelhiGirl ಹ್ಯಾಷ್‌ ಟ್ಯಾಗ್‌ನಡಿ ಟ್ವಿಟರ್‌ನಲ್ಲಿ ಅಭಿಯಾನ ಆರಂಭವಾಗಿದೆ.

ಇದನ್ನೂ ಓದಿ:  ‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ

Rape Case: ಸಂತ್ರಸ್ತೆಯೇ ಮುಂದೆ ಬಂದರೂ ಅತ್ಯಾಚಾರಿ ಜೊತೆ ಮದುವೆಗೆ ಒಪ್ಪಿಗೆ ನೀಡದ ಸುಪ್ರೀಂ ಕೋರ್ಟ್

(Delhi Girl Rape and Murder Case | Rahul Gandhi meets parents of 9 year old rape victim in Delhi)

 

Published On - 12:56 pm, Wed, 4 August 21