Kalaburagi: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚನೆ; ಕೊಟ್ಟ ದುಡ್ಡು ವಾಪಾಸ್​ ಕೇಳಲು ಬಂದಾಕೆಯನ್ನೇ ಕಿಡ್ನಾಪ್​ಗೆ​ ಯತ್ನ

ಶೇರ್ ಮಾರ್ಕೆಟ್​ನಲ್ಲಿ ಹಣ ಹಾಕಿ ಮೂರೇ ತಿಂಗಳಿಗೆ ಡಬಲ್ ಮಾಡಿ ಕೊಡುತ್ತೇವೆ ಎಂದು ಹೇಳಿ‌ ಅನೇಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್​ನ್ನ ಪೊಲೀಸರು ಬಂಧಿಸಿದ್ದು, ಕೊಟ್ಟ ದುಡ್ಡು ವಾಪಾಸ್​ ಕೇಳಲು ಬಂದಾಕೆಯನ್ನೇ ಕಿಡ್ನಾಪ್​ ಮಾಡಲು ಯತ್ನಿಸಿದ್ದಾರೆ.

Kalaburagi: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚನೆ; ಕೊಟ್ಟ ದುಡ್ಡು ವಾಪಾಸ್​ ಕೇಳಲು ಬಂದಾಕೆಯನ್ನೇ ಕಿಡ್ನಾಪ್​ಗೆ​ ಯತ್ನ
ಆರೋಪಿಗಳು
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2023 | 7:39 AM

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಶೇರ್ ಮಾರ್ಕೆಟ್ ದಂಧೆ ಜೋರಾಗಿ ನಡೆಯುತ್ತಿದೆ. ಶೇರ್ ಮಾರ್ಕೆಟ್​(Share Market)ನಲ್ಲಿ ದುಡ್ಡು ಹಾಕಿ, ಮೂರೇ ತಿಂಗಳಿಗೆ ಡಬಲ್ ಮಾಡಿ ಕೊಡುತ್ತೇವೆ ಎಂದು ಹೇಳಿ‌ ಅನೇಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್​ನ್ನ ಪೊಲೀಸರು ಬಂಧಿಸಿದ್ದಾರೆ. ಹೌದು ಜಿಲ್ಲೆಯ ಅಫಜಲಪುರ (Afzalpur)
ತಾಲೂಕಿನ ಗೌಡಗಾಂವ್ ಗ್ರಾಮದ ನಿವಾಸಿಗಳಾದ ಮಂಗಳಾ ಮತ್ತು ಮಹೇಶ್ ಎನ್ನುವ ದಂಪತಿಯಿಂದ‌ ವಂಚನೆ ಆರೋಪ ಕೇಳಿಬಂದಿದೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎಫ್​ಡಿ‌ಎ ಆಗಿ ಮಂಗಳಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಶೇರ್ ಮಾರ್ಕೆಟ್ ದಂಧೆಯನ್ನು ಮಾಡುತ್ತಾ ಜನರಿಗೆ ವಂಚಿಸುತ್ತಿದ್ದರು.

ಹಣ ಕೇಳಲು ಹೋಗಿದ್ದ ಮಹಿಳೆಯನ್ನೇ ಅಪಹರಿಸಿಕೊಂಡು ಹೋಗಲು ಮುಂದಾಗಿದ್ದ ಮಂಗಳಾ

ಇನ್ನು ನಿನ್ನೆ(ಜೂ.26) ಸಂಜೆ ಕಲಬುರಗಿ ನಗರದ ಸಾವಿತ್ರಿ ಎನ್ನುವ ಮಹಿಳೆ, ಆರೋಪಿ ಮಂಗಳಾಗೆ 21 ಲಕ್ಷ ‌ಹಣವನ್ನ ಕೊಟ್ಟಿದ್ದರಂತೆ. ಅನೇಕ ತಿಂಗಳಾದರೂ ಕೂಡ ಹಣ ಮರಳಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ, ಮಂಗಳಾ ಕೆಲಸ ನಿರ್ವಹಿಸುವ ಶಾಲೆ ಬಳಿ ಹೋಗಿದ್ದಾಳೆ. ಈ ವೇಳೆ ಏಕಾಎಕಿ ಮಂಗಳಾ ಮತ್ತು ಆಕೆಯ ಗ್ಯಾಂಗ್ ಸಾವಿತ್ರಿಯನ್ನೇ ಅಪಹರಣ ಮಾಡಿಕೊಂಡು ಹೋಗಲು ಮುಂದಾಗಿದ್ದರು. ತಾವು ಪೊಲೀಸರು ಎಂದು ಹೇಳಿ ಆರೋಪಿಗಳಾದ ರಾಜಕುಮಾರ್​ ಮತ್ತು ದಯಾನಂದ್ ಇಬ್ಬರು ಸಾವಿತ್ರಿಗೆ ಬೆದರಿಸಿದ್ದರು. ತನ್ನ ಬಳಿಯಿದ್ದ ಲೈಸೆನ್ಸ್ ಪಿಸ್ತೂಲ್​ನಿಂದ ದಯಾನಂದ್ ಬೆದರಿಕೆ ಹಾಕಿದ್ದ.

ಇದನ್ನೂ ಓದಿ:ಕಾಗಿನೆಲೆ ಮಠದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ: ಆರೋಪಿಗಳು ಅರೆಸ್ಟ್​

ಆರೋಪಿಗಳು ಅರೆಸ್ಟ್​

ಈ ವಿಷಯ ತಿಳಿಯುತ್ತಿದ್ದಂತೆ ಸಾವಿತ್ರಿ ಪುತ್ರ ಆಗಮಿಸಿ, ಮಂಗಳಾ ಮತ್ತು ಸಾವಿತ್ರಿಯಿದ್ದ ಕಾರ್​ನ್ನು ಕಲಬುರಗಿ ನಗರದ ಹೈಕೋರ್ಟ್ ಬಳಿ ಅಡ್ಡಗಟ್ಟಿ ತಡೆದಿದ್ದ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಂಗಳಾ, ರಾಜಕುಮಾರ, ದಯಾನಂದ್, ನಭಿಸಾಬ್​ರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:30 am, Tue, 27 June 23

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us