ಕಾಗಿನೆಲೆ ಮಠದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ: ಆರೋಪಿಗಳು ಅರೆಸ್ಟ್​

ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದಲ್ಲಿ ಸೋಲಾರ್ ಪ್ರಾಜೆಕ್ಟ್ ಕೆಲಸ ಕೊಡಿಸುವುದಾಗಿ ನಂಬಿಸಿ 21 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಗಿನೆಲೆ ಮಠದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ: ಆರೋಪಿಗಳು ಅರೆಸ್ಟ್​
ಬಂಧಿತ ಆರೋಪಿಗಳು
Follow us
| Updated By: ವಿವೇಕ ಬಿರಾದಾರ

Updated on:Feb 15, 2023 | 1:09 PM

ಹಾಸನ: ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದಲ್ಲಿ ಸೋಲಾರ್ ಪ್ರಾಜೆಕ್ಟ್ ವರ್ಕ್ ಕೊಡಿಸುವುದಗಿ ನಂಬಿಸಿ 21 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೆ.ಲಕ್ಕಿಹಳ್ಳಿ ಗ್ರಾಮದ ರಘು, ಚಿಕ್ಕಮಗಳೂರು ಜಿಲ್ಲೆಯ ಬಿ.ಕೋಡಿಹಳ್ಳಿ ಗ್ರಾಮದ ಶ್ರೀಧರ್ ಅಲಿಯಾಸ್ ಸಿದ್ದಪ್ಪ ಬಂಧಿತ ಆರೋಪಿಗಳು. ಬಂಧಿತರಿಂದ 9.19 ಲಕ್ಷ ನಗದು ಮತ್ತು ಮೂರು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ ?

ಆರೋಪಿಗಳು ಬೆಂಗಳೂರಿನ ವಿಜಯ ಟೆಕ್ ಸೋಲಾರ್ ಕಂಪನಿ ಮಾಲೀಕ ಜಯಕುಮಾರ್ ಎಂಬುವವರಿಗೆ ನವೆಂಬರ್​ 28 2022 ರಂದು ಕರೆ ಮಾಡಿದ್ದರು. ನಾವು 3 ವರ್ಷಗಳ ಹಿಂದೆ ಬೆಂಗಳೂರಿನ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ನಿಮ್ಮ ಕಂಪನಿ ಬಗ್ಗೆ ಸಂಪೂರ್ಣ ವಿಚಾರ ತಿಳಿದುಕೊಂಡಿದ್ದೇವೆ. ಹಾಲಿ ಕಾಗಿನೆಲೆ ಮಠದಲ್ಲಿ ಮ್ಯಾನೇಜರ್​ಆಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದರು.

ನಂತರ ನಮ್ಮ ಮಠದಲ್ಲಿ ಒಂದೂವರೆ ಕೋಟಿ ಮೊತ್ತದ ಸೋಲಾರ್ ಪ್ರಾಜೆಕ್ಟ್ ವರ್ಕ್‌ನ್ನು ನಿಮ್ಮ (ವಿಜಯ ಕಂಪನಿ)ಗೆ ಕೊಡುವುದಾಗಿ ಹೇಳಿದ್ದರು. ಖದೀಮರ ಬಣ್ಣದ ಮಾತಿಗೆ ಮರುಳಾದ ಜಯಕುಮಾರ್, ಸ್ನೇಹಿತರಾದ ಕಾರ್ತಿಕ್ ಚಂದರ್ ಮತ್ತು ಮಂಜುನಾಥ್.ಎಸ್ ಮೂವರು ಸ್ನೇಹಿತರು ಡಿಸೆಂಬರ್​ 4 2022 ರಂದು ಮುಂಗಡ ಹಣ ಕೊಡಲು ನಿರ್ಧರಿಸಿದ್ದರು.

ಇದರಂತೆ ಡಿಸೆಂಬರ್​ 4 2022 ರಂದು ಬೆಳಿಗ್ಗೆ 10.30 ರ ಸುಮಾರಿಗೆ ವಂಚಕರಿಗೆ ಕರೆ ಮಾಡಿ ಹಣ ಕೊಡುವುದಾಗಿ ಜಯಕುಮಾರ್ ಹೇಳಿದ್ದರು. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿ ಹೆಚ್.ಹೊನ್ನೇನಹಳ್ಳಿ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ರಘು ಮತ್ತು ಸಿದ್ದಪ್ಪ ವಂಚಕರು 21 ಲಕ್ಷ ರೂ. ಹಣ ಪಡೆದು, ಜಯಕುಮಾರ್‌ಗೆ ಒಂದು ರಟ್ಟಿನ ಬಾಕ್ಸ್ ನೀಡಿ ಪ್ರಾಜೆಕ್ಟ್‌ಗೆ ಸಂಬಂಧಿಸಿದ ದಾಖಲಾತಿ ಇರುವುದಾಗಿ ತಿಳಿಸಿ ಹೋಗಿದ್ದರು.

ಜಯಕುಮಾರ್ ಅವರು ಬಾಕ್ಸ್ ಓಪನ್ ಮಾಡಿ ನೋಡಿದಾಗ ತಾವು ಮೋಸ ಹೋಗಿರೋದು ಖಾತ್ರಿಯಾಗಿದೆ. ಬಾಕ್ಸ್‌ನೊಳಗೆ ಖದೀಮರು ಬರೀ ನ್ಯೂಸ್ ಪೇಪರ್ ತುಂಬಿದ್ದರು. ಹಣ ಪಡೆದ ನಂತರ ಎಷ್ಟೇ ಬಾರಿ ಕರೆ ಮಾಡಿದರೂ, ಆರೋಪಿಗಳು ಫೋನ್ ರಿಸೀವ್ ಮಾಡಿರಲಿಲ್ಲ. ವಂಚಿಸಿರುವುದು ಖಾತ್ರಿಯಾಗುತ್ತಿದ್ದಂತೆಯೇ ಕಳೆದ ಜನೆವರಿ 20 2023 ರಂದು ಹಿರೀಸಾವೆ ಪೊಲೀಸರಿಗೆ ಜಯಕುಮಾರ್ ದೂರು ನೀಡಿದ್ದರು. ಪ್ರಕರಣ ಭೇದಿಸಲು ಎಸ್ಪಿ ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿದ್ದರು. ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅರಸೀಕೆರೆ ಬಸ್ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:09 pm, Wed, 15 February 23