ಕೇರಳ: ಸಿನಿಮಾ ಶೈಲಿಯಲ್ಲಿ ಕಾರು ಸುತ್ತುವರಿದು 2.5 ಕೆಜಿ ಚಿನ್ನಾಭರಣ ದರೋಡೆ; ವಿಡಿಯೊ ವೈರಲ್

ಈ ಕೃತ್ಯವು ಖಾಸಗಿ ಬಸ್ಸೊಂದರ ಡ್ಯಾಶ್‌ಕ್ಯಾಮ್ ನಲ್ಲಿ ಸೆರೆಯಾಗಿದ್ದು,  ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಬದಿಯಲ್ಲಿ ಹೆದ್ದಾರಿ ಕಿರಿದಾದಾಗ ಕನಿಷ್ಠ ಮೂರು ಎಸ್‌ಯುವಿಗಳು ವಾಹನವೊಂದನ್ನು ಸುತ್ತುವರಿದು ದರೋಡೆ ನಡೆಸುತ್ತಿರುವುದು ವಿಡಿಯೊದಲ್ಲಿದೆ.

ಕೇರಳ: ಸಿನಿಮಾ ಶೈಲಿಯಲ್ಲಿ ಕಾರು ಸುತ್ತುವರಿದು 2.5 ಕೆಜಿ ಚಿನ್ನಾಭರಣ ದರೋಡೆ; ವಿಡಿಯೊ ವೈರಲ್
ಹಾಡಹಗಲೇ ರಸ್ತೆಯಲ್ಲಿ ಚಿನ್ನ ದೋಚಿ ದರೋಡೆ
ರಶ್ಮಿ ಕಲ್ಲಕಟ್ಟ

Updated on: Sep 27, 2024 | 6:18 PM

ತಿರುವನಂತಪುರಂ ಸೆಪ್ಟೆಂಬರ್ 27: ಕೇರಳದ ಪೀಚಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ಸದಸ್ಯರ ತಂಡವೊಂದು ಹಗಲು ದರೋಡೆ ನಡೆಸಿದ್ದು, ಕಾರನ್ನು ಅಡ್ಡಗಟ್ಟಿ ಇಬ್ಬರನ್ನು ಅಪಹರಿಸಿ ಸುಮಾರು 2.5 ಕೆಜಿ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಕೃತ್ಯವು ಖಾಸಗಿ ಬಸ್ಸೊಂದರ ಡ್ಯಾಶ್‌ಕ್ಯಾಮ್ ನಲ್ಲಿ ಸೆರೆಯಾಗಿದ್ದು,  ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಬದಿಯಲ್ಲಿ ಹೆದ್ದಾರಿ ಕಿರಿದಾದಾಗ ಕನಿಷ್ಠ ಮೂರು ಎಸ್‌ಯುವಿಗಳು ವಾಹನವೊಂದನ್ನು ಸುತ್ತುವರಿದು ದರೋಡೆ ನಡೆಸುತ್ತಿರುವುದು ವಿಡಿಯೊದಲ್ಲಿದೆ.

ಬುಧವಾರ ಕೊಯಮತ್ತೂರಿನ ಆಭರಣ ತಯಾರಿಕಾ ಕೇಂದ್ರದಿಂದ ತ್ರಿಶೂರ್‌ಗೆ ಬಂದಿದ್ದ ಚಿನ್ನದ ವ್ಯಾಪಾರಿ ಅರುಣ್‌ ಸನ್ನಿ ಮತ್ತು ಆತನ ಸ್ನೇಹಿತ ರೆಜಿ ಥಾಮಸ್‌ ಅವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಎಸ್ ಯುವಿಯಲ್ಲಿ ಬಂದ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದರು. ಬಳಿಕ ಅರುಣ್ ಸನ್ನಿ ಅವರ ಕಾರನ್ನು ಗ್ಯಾಂಗ್ ಹೈಜಾಕ್ ಮಾಡಿ ಪರಾರಿಯಾಗಿದ್ದಾರೆ.


ಕುದಿರಾನ್ ಹೆದ್ದಾರಿಯ ಕಲ್ಲಿಡುಕ್ ಎಂಬಲ್ಲಿ ಕಾರನ್ನು ನಿಲ್ಲಿಸಿ ಚಿನ್ನಾಭರಣ ದೋಚಿರುವ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದೆ. ದರೋಡೆಯ ದೃಶ್ಯಗಳು ಖಾಸಗಿ ಬಸ್‌ನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲೂಟಿ ಸಿನಿಮಾ ಶೈಲಿಯಲ್ಲಿತ್ತು. ಮೂರು ಕಾರುಗಳಲ್ಲಿ ಹತ್ತು ಸದಸ್ಯರ ಗುಂಪು ಈ ಕೃತ್ಯವೆಸಗಿತ್ತು. ಬುಧವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಈ ಘಟನೆ ನಡೆದಿದೆ.

ಸಿನಿಮಾ ಶೈಲಿಯಲ್ಲಿ ಲೂಟಿ

ಎರಡು ಇನ್ನೋವಾ ಹಾಗೂ ಇನ್ನೊಂದು ವಾಹನ ಅರುಣ್ ಸನ್ನಿ ಕಾರನ್ನು ಹಿಂಬಾಲಿಸಿದೆ. ಅರುಣ್ ಕಾರಿನ ಮುಂದೆ ಇನ್ನೋವಾ ನಿಂತಿತ್ತು. ಅದರ ಬದಿಯಲ್ಲಿ ಎರಡನೇ ಇನ್ನೋವಾ ಮತ್ತು ಕಾರಿನ ಹಿಂದೆ ಮೂರನೇ ವಾಹನ ನಿಂತಿತ್ತು. ವಾಹನಗಳಿಂದ ಹೊರ ಬಂದ ದುಷ್ಕರ್ಮಿಗಳು ಅರುಣ್ ಸನ್ನಿಯ ಕಾರಿಗೆ ನುಗ್ಗಿದರು. ವಿಡಿಯೊದಲ್ಲಿ, ಅರುಣ್ ಮತ್ತು ರೆಜಿ ಅವರನ್ನು ಚಾಕು ಮತ್ತು ಸುತ್ತಿಗೆಯಿಂದ ಬೆದರಿಸಿ ಇನ್ನೊಂದು ವಾಹನಕ್ಕೆ ಹತ್ತುವಂತೆ ಬಲಪ್ರಯೋಗಿಸುತ್ತಿರುವುದು ವಿಡಿಯೊದಲ್ಲಿದೆ.

ದಾಳಿಕೋರರು ತಮ್ಮ ಮುಖಗಳನ್ನು ಮರೆಮಾಚಿಕೊಂಡು ಅಲಪ್ಪುಳ ಸ್ಥಳೀಯರ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಅರುಣ್ ಹೇಳಿಕೆ ನೀಡಿದ್ದಾರೆ.

ಅಪಹರಣಕ್ಕೊಳಗಾಗಿದ್ದ ಕಾರು ಕುಟ್ಟನೆಲ್ಲೂರು ಪ್ರದೇಶವನ್ನು ಬಿಟ್ಟಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆಗ ಪುಚ್ಚಟ್ಟಿ ಪ್ರದೇಶದ ಖಾಲಿ ಮೈದಾನದಲ್ಲಿ ಕಾರು ಬಿದ್ದಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಒಲ್ಲೂರು ಪೊಲೀಸರು ಹಾಗೂ ಪೀಚಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೀಚಿ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Crime News: 70 ವರ್ಷದ ಅರ್ಚಕನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆಮೇಲೆ ಆತ ಮಾಡಿದ್ದೇನು ಗೊತ್ತಾ?

ಘಟನೆಗೆ ಸಂಬಂಧಿಸಿದಂತೆ ಬುಧವಾರ ದೂರು ಸ್ವೀಕರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎಫ್‌ಐಆರ್‌ನಲ್ಲಿರುವ ದೂರುಗಳು ಅವರನ್ನು ಥಳಿಸಿ ₹ 1.84 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಗ್ಯಾಂಗ್ ದೋಚಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us