ರಾಮನಗರ: ಸ್ವೀಟಿಯ ಅಕ್ರಮ ಸಂಬಂಧಕ್ಕೆ ಅಡ್ಡಿ, ಮಕ್ಕಳು ಬಲಿ

| Updated By: ವಿವೇಕ ಬಿರಾದಾರ

Updated on: Oct 13, 2024 | 12:09 PM

ರಾಮನಗರ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ತಾಯಿ ಮಕ್ಕಳನ್ನೇ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಮಗು ಖಾಯಿಲೆಯಿಂದ ಸತ್ತಿದೆ ಎಂದು ಸುಳು ಹೇಳಿದ್ದಾಳೆ. ಆದರೆ ಸ್ಮಶಾನದ ಸಿಬ್ಬಂದಿಯಿಂದ ಸತ್ಯ ಬೆಳಕಿಗೆ ಬಂದಿದೆ.

ರಾಮನಗರ: ಸ್ವೀಟಿಯ ಅಕ್ರಮ ಸಂಬಂಧಕ್ಕೆ ಅಡ್ಡಿ, ಮಕ್ಕಳು ಬಲಿ
ಆರೋಪಿಗಳಾದ ಗ್ರಗೋರಿ ಫ್ರಾನ್ಸೀಸ್, ಸ್ವೀಟಿ
Follow us on

ರಾಮನಗರ, ಅಕ್ಟೋಬರ್​ 13: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದರೆಂದು ಹೆತ್ತ ಮಕ್ಕಳನ್ನೇ ತಾಯಿ ಕೊಲೆ ಮಾಡಿರುವ ಘಟನೆ ರಾಮನಗರ (Ramnagar) ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿ ಇರುವ ಮನೆಯೊಂದರಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಗಳಾದ ಗ್ರಗೋರಿ ಫ್ರಾನ್ಸೀಸ್ (30), ಸ್ವೀಟಿ (21)ಯನ್ನು ಪೊಲೀಸರು ಬಂಧಿಸಿದ್ದಾರೆ. 3 ವರ್ಷ ಕಬಿಲ್ ಮತ್ತು 11 ತಿಂಗಳ ಕಬೀಲನ್ ಮೃತ ಮಕ್ಕಳು.

ಆರೋಪಿ ಸ್ವೀಟಿಗೆ ಶಿವು ಎಂಬುವವರ ಜೊತೆ ಮದುವೆ ಆಗಿದೆ. ಆದರೆ ಸ್ವೀಟಿ ಪತಿ ಶಿವು ಅವರನ್ನು ಬಿಟ್ಟು ಕಳೆದ ಕೆಲವು ದಿನಗಳಿಂದ ಫ್ರಾನ್ಸೀಸ್ ಎಂಬಾತನ ಜೊತೆ ರಾಮನಗರದಲ್ಲಿ ನೆಲಸಿದ್ದಾಳೆ. ಶುಕ್ರವಾರ ರಾತ್ರಿ ಸಂಭೋಗದ ವೇಳೆ ಮಗು ಕಬೀಲನ್ ಅತ್ತಿದೆ. ಇದರಿಂದ ಸಿಟ್ಟಿಗೆದ್ದ ಸ್ವೀಟಿ, ಮಗು ಕಬೀಲನ್​ನ​ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಸ್ಮಶಾನದ ಸಿಬ್ಬಂದಿಯಿಂದ ಕೃತ್ಯ ಬಯಲಿಗೆ!

ಇಂದು (ಅ.13) ಬೆಳಗ್ಗೆ ಸ್ವೀಟಿ ಮತ್ತು ಫ್ರಾನ್ಸಿಸ್, ಮಗು ಶವ ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದಾರೆ. ಸ್ಮಶಾನದ ಸಿಬ್ಬಂದಿ ಮಗು ದೇಹದ ಮೇಲಿನ ಗಾಯದ ಗುರುತುಗಳನ್ನು ಕಂಡಿದ್ದಾರೆ. ಆಗ, ಸಿಬ್ಬಂದಿ ಮಗುವಿಗೆ‌ ಏನಗಿತ್ತು ಅಂತ ಸ್ವೀಟಿ ಮತ್ತು ಫ್ರಾನ್ಸಿಸ್​ಗೆ ಕೇಳಿದ್ದಾರೆ.

ಇದನ್ನೂ ಓದಿ: ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆ ಆತ್ಮಹತ್ಯೆ

ಇದಕ್ಕೆ ಸ್ವೀಟಿ, ಮಗುವಿಗೆ ಖಾಯಿಲೆ ಇತ್ತು, ಜ್ವರದಿಂದ ಬಳಲಿ ಸತ್ತು ಹೋಗಿದೆ ಅಂತ ಹೇಳಿದ್ದಾಳೆ. ಆದರೂ ಅನುಮಾನಗೊಂಡ ಸ್ಮಶಾನದ ಸಿಬ್ಬಂದಿ, ಮೊಬೈಲ್​ನಲ್ಲಿ ಮಗುವಿನ ದೇಹದ ಫೋಟೊ ತೆಗೆದಿದ್ದಾರೆ. ಬಳಿಕ ಪೊಲೀಸರಿಗೆ ಫೋಟೋ ನೀಡಿದ್ದಾರೆ.

ಐಜೂರು ಪೊಲೀಸರು ಸ್ವೀಟಿ ಮತ್ತು ಫ್ರಾನ್ಸಿಸ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಾಯಿಬಿಟ್ಟಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:06 pm, Sun, 13 October 24