ಬಾಂಗ್ಲಾ ಪ್ರಜೆಗಳ ಅಕ್ರಮ ಮಾನವ ಕಳ್ಳಸಾಗಣೆ: ಇಬ್ಬರನ್ನು ಬಂಧಿಸಿದ ಎನ್​ಐಎ

| Updated By: Rakesh Nayak Manchi

Updated on: Feb 23, 2024 | 9:11 PM

ಬಾಂಗ್ಲಾ ಪ್ರಜೆಗಳ ಅಕ್ರಮ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ 2023 ರ ನವೆಂಬರ್ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಅಖಾಡಕ್ಕಿಳಿದಿದ್ದ ಎನ್​ಐಎ ಅಧಿಕಾರಿಗಳು ಈಗಾಗಲೇ ಹಲವರನ್ನು ಬಂಧಿಸಿದ್ದು, ಇದೀಗ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲದ ದಿನದಿಂದ ಬಂಧಿತರು ತಲೆಮರೆಸಿಕೊಂಡಿದ್ದರು. ಆರೋಪಿಗಳು 20ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಿದ್ದರು.

ಬಾಂಗ್ಲಾ ಪ್ರಜೆಗಳ ಅಕ್ರಮ ಮಾನವ ಕಳ್ಳಸಾಗಣೆ: ಇಬ್ಬರನ್ನು ಬಂಧಿಸಿದ ಎನ್​ಐಎ
ಎನ್​ಐಎ
Follow us on

ಬೆಂಗಳೂರು, ಫೆ.23: ಬಾಂಗ್ಲಾ ಪ್ರಜೆಗಳ ಅಕ್ರಮ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇದೀಗ ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಸಜ್ಜಿದ್ ಹಲ್ದಾರ್‌ ಹಾಗೂ ಇದ್ರಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಐಎಸ್​ಡಿ ಹಾಗೂ ಎನ್ಐಎ ಜಂಟಿ ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ 2023 ರ ನವೆಂಬರ್ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದರು. ಇವರು 20 ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಬೆಂಗಳೂರಿಗೆ ಕರೆತಂದಿದ್ದರು. ಆರೋಪಿ ಹಲ್ದಾರ್ ರಾಮಮೂರ್ತಿನಗರದ ಕೆ ಚನ್ನಸಂದ್ರದಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದನು. ಮತ್ತೊಬ್ಬ ಆರೋಪಿ ಇದ್ರಿಸ್ ಅನಂದಪುರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವ ಘಟಕವನ್ನು ತೆರೆದಿದ್ದ.

ಬಾಂಗ್ಲಾದೇಶದ 20 ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಮಿ ಗುತ್ತಿಗೆ ನೀಡಿದ್ದ ಇದ್ರಿಸ್, ನಕಲಿ ಆಧಾರ್ ಕಾರ್ಡ್ ಒದಗಿಸಿ ವಾಸಿಸಲು ವ್ಯವಸ್ಥೆಯೂ ಮಾಡಿಕೊಟ್ಟಿದ್ದ. ಸದ್ಯ ಹಲ್ದಾರ್ ಮತ್ತು ಇದ್ರಿಸ್ ಇಬ್ಬರನ್ನೂ ಬಂಧಿಸಿರುವ ಎನ್​ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ಬಾಂಗ್ಲಾ ವಲಸಿಗರ ಮನೆಗಳ ಮೇಲೆ ಎನ್​ಐಎ ದಾಳಿ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಮನೆಗಳ ಮೇಲೆ 2023ರ ನವೆಂಬರ್ 8 ರಂದು ಎನ್​ಐಎ ದಾಳಿ ನಡೆಸಿತ್ತು. ಸೋಲದೇವನಹಳ್ಳಿ, ಕೆ.ಆರ್.ಪುರಂ, ಬೆಳ್ಳಂದೂರು ಸೇರಿದಂತೆ 15ಕ್ಕೂ ಅಧಿಕ ಕಡೆ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳ ಮೇಲೆ ಎನ್​ಐಎ ತಂಡ ದಾಳಿ ಮಾಡಲಾಗಿತ್ತು. ಈ ವೇಳೆ 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿತ್ತು.

ಆರೋಪಿಗಳ ವಿರುದ್ಧ ಎನ್​ಐಎ ಚಾರ್ಜ್​ಶೀಟ್

ಬೃಹತ್ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎನ್ಐಎ ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಎಂ.ಡಿ.ಪಿರ್ದೌಸ್ ಬಾಪಾರಿ, ಮುಹಮ್ಮದ್ ಒಲಿ ಉಲ್ಲಾ, ಅಮೋಲ್ ದಾಸ್, ಮಸೂಲ್ ಸರ್ದಾರ್, ಎಂಡಿ ಸೋಹಾಗ್ ಗಾಜಿ,ಸುಮನ್ ಶೇಕ್, ಎಸ್ಕೆ, ಎಂಡಿ ಬೆಳ್ಳಾಲ್, ಎಂಡಿ ಮಿರಾಝಲ್ ಇಸ್ಲಾಂ, ಜಾಕಿರ್ ಖಾನ್, ಎಂಡಿ ಬಾದಲ್ ಹೌಲಾದರ್, ಎಂಡಿ ಕಬೀರ್ ತಾಲೂಕ್ದರ್, ಘರಾಮಿ ಮೊಹಮ್ಮದ್, ಬಶೀರ್ ಹೊಸನ್, ಸೌದಿ ಜಾಕಿರ್ ಸೇರಿ 12 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಬಾಗಲಕೋಟೆಗೆ ಬಾಂಗ್ಲಾ ನುಸುಳುಕೋರರು ಪ್ರವೇಶ ಮಾಡ್ತಿದ್ದಾರೆ -ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ

ಬಾಂಗ್ಲಾ ಗಡಿಯ ಮೂಲಕ ವಿದೇಶ ಪ್ರಜೆಗಳನ್ನು ಅಕ್ರಮವಾಗಿ ಒಳನುಸುಳಿದ್ದ 12 ಬಾಂಗ್ಲಾ ದೇಶಿಗರ ವಿರುದ್ಧ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಸ್ಫೋಟಕ ವಿಚಾರ ಉಲ್ಲೇಖಿಸಲಾಗಿದೆ. ಆರೋಪಿಗಳು ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದರು. ಬಂಗಾಳದ ಬೆನಾಪೋಲ್ ಮತ್ತು ಜಶೋರ್​ನಲ್ಲಿರುವ ಇಂಡೋ-ಬಾಂಗ್ಲಾ ಗಡಿ ಬಿಂದುಗಳು, ತ್ರಿಪುರಾ ಬಳಿಯ ಅಖೌರಾ ಮೂಲಕ ಗಡಿಯ ಎರಡು ಬದಿ ಕಾರ್ಯನಿರ್ವಹಿಸುವ ಟೌಟ್​ಗಳ ಸಹಾಯದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನುವ ವಿಚಾರ ಚಾರ್ಜ್​ಶೀಟ್​ನಿಂದ ಬೆಳಕಿಗೆ ಬಂದಿತ್ತು.

ಎಂಟು ಜನ ಆರೋಪಿಗಳು‌ ಮೊದಲಿಗೆ ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು. 22 ಜನರನ್ನು ಉದ್ಯೋಗ ಮತ್ತು ಉತ್ತಮ‌ ಜೀವನೋಪಾಯದ ಭರವಸೆ ಮೇಲೆ ಆಮಿಷವೊಡ್ಡಿ ಕಳ್ಳಸಾಗಣೆ ಮಾಡಿ ಬೆಂಗಳೂರಿನ ತ್ಯಾಜ್ಯ ವಿಂಗಡಣಾ ಗೋದಾಮಿನಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು ಎನ್ನುವ ಸ್ಫೋಟಕ ವಿಚಾರ ಬಯಲಿಗೆ ಬಂದಿತ್ತು.

ವಿವಿಧ ಶೆಡ್​ಗಳಲ್ಲಿ ಬಂಧಿಸಿ ಅಲ್ಪವೇತನಕ್ಕಾಗಿ ಬಲವಂತದಿಂದ ದುಡಿಸಿಕೊಳ್ಳಲಾಗಿತ್ತು. ಅಲ್ಲದೆ, ಪ್ರತಿಭಟಿಸಿದರೆ ಅಕ್ರಮ ವಲಸಿಗರೆಂದು ಜೈಲಿಗೆ ಹಾಕಿಸುವುದಾಗಿ ಕಳ್ಳಸಾಗಣೆದಾರರು ಹೆಸರಿಸಿರುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. 12 ಆರೋಪಿಗಳ ಬಳಿ 61 ಆಧಾರ್ ಕಾರ್ಡ್​ಗಳು ಮತ್ತು ಇತರೆ ಭಾರತೀಯ ಗುರುತಿನ ದಾಖಲೆಗಳು ಪತ್ತೆಯಾಗಿದ್ದು, ಎನ್​ಐಎ ವಶಕ್ಕೆ ಪಡೆದುಕೊಂಡಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ