ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು; ಮನೆಗೆ ನುಗ್ಗಿ ಮಹಿಳೆಯನ್ನ ಮಾರಕಾಸ್ತ್ರದಿಂದ ಕೊಂದರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 21, 2024 | 6:45 PM

ಆಕೆ ಸ್ವಾಭಿಮಾನಿ ಮಹಿಳೆ. ಪತಿ ತೀರಿ ಹೋದರು ಧೃತಿಗೆಡದೆ ಬದುಕು ಕಟ್ಟಿಕೊಂಡಿದ್ದಳು. ಆಕೆಯ ಏಳಿಗೆ ದಾಯಾದಿಗಳಿಗೆ ಹೊಟ್ಟೆ ಕಿಚ್ಚು ತರಿಸಿತ್ತು. ಅದೇ ಹೊಟ್ಟೆ ಕಿಚ್ಚು, ಅಸೂಯೆ. ಇದೀಗ ಸ್ವಾಭಿಮಾನಿ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು; ಮನೆಗೆ ನುಗ್ಗಿ ಮಹಿಳೆಯನ್ನ ಮಾರಕಾಸ್ತ್ರದಿಂದ ಕೊಂದರು
ಮೃತ ಮಹಿಳೆ
Follow us on

ಮೈಸೂರು, ಜು.21: ದಿಟ್ಟತನದಿಂದ ಪ್ರಾಮಾಣಿಕವಾಗಿ ಬದುಕಿದ್ದೇ ಮುಳುವಾಗಿದ್ದು, ಮೈಸೂರು(Mysore) ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ಸಂಬಂಧಿಕರೇ ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಭಾಗ್ಯವತಿ(32) ಮೃತ ಮಹಿಳೆ. ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಇವರಿಗೆ ಸಂಪತ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ, 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪತಿ ಕಳೆದುಕೊಂಡ ಭಾಗ್ಯವತಿ ಧೃತಿಗೆಡದೆ ಜೀವನ ಕಟ್ಟಿಕೊಂಡಿದ್ದರು.

ಪತಿ ಸಾವಿನ ಬಳಿಕವೂ ಜೀವನ ಕಟ್ಟಿಕೊಂಡಿದ್ದ ಮಹಿಳೆ

ಇನ್ನು ಮೃತ ಮಹಿಳೆ, ಪತಿ ಇಲ್ಲ ಎಂದು ಯೋಚಿಸುತ್ತಾ ಕುಳಿತುಕೊಳ್ಳದೆ, ದಿಟ್ಡತನದಿಂದ ತನ್ನ ಕಾಲ ಮೇಲೆ ತಾನು ನಿಂತು ಎಲ್ಲರೂ ಹುಬ್ಬೇರಿಸುವಂತೆ ಬದುಕು ಕಟ್ಟಿಕೊಂಡಿದ್ದರು. ಇದ್ದ ಎರಡುವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಯಶಸ್ವಿಯಾಗಿದ್ದರು. ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು ಕುಕ್ಕಿದೆ.

ಇದನ್ನೂ ಓದಿ:ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಹತ್ಯೆ; ಕೊಲೆಗೈದು ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ದುಷ್ಕರ್ಮಿಗಳು

ಸಂಬಂಧಿಕರೇ ಕೊಂದರು

ಹೌದು, ಆಕೆಯ ಸಂಬಂಧಿ ಮುತ್ತುರಾಜ್ ಹಾಗೂ ಇತರರು ಸೇರಿಕೊಂಡು ಭಾಗ್ಯವತಿಯನ್ನು ಬರ್ಬರವಾಗಿ ಕತ್ತರಿಸಿ‌ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುತ್ತುರಾಜ್ ಹಾಗೂ ಇತರ ಸಂಬಂಧಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರವಷ್ಟೇ ಭಾಗ್ಯವತಿ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ. ಇದೆಲ್ಲ, ಏನೇ ಇರಲಿ ದಿಟ್ಟ ಸ್ವಾಭಿಮಾನಿ ಮಹಿಳೆಯನ್ನು ಆಕೆಯ ಏಳಿಗೆ ಸಹಿಸದೆ ಕೊಲೆ ಮಾಡಿರೋದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ