ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ತಾಯಿ

ಪ್ರತ್ಯೇಕ ಘಟನೆ: ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಗರದ ಜಾಲಹಳ್ಳಿಯಲ್ಲಿ ನಡೆದಿದೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ.

ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ತಾಯಿ
ಅಪರಾಧ
Edited By:

Updated on: Apr 10, 2024 | 10:42 AM

ಬೆಂಗಳೂರು, ಏಪ್ರಿಲ್​ 10: ತಾಯಿಯೇ ತನ್ನ ಇಬ್ಬರು ಮಕ್ಕಳನ್ನು (Children) ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಗರದ ಜಾಲಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀ (9), ಗೌತಮ್ (7) ಕೊಲೆಯಾದ ಮಕ್ಕಳು. ಕೊಲೆ ಮಾಡಿದ ಆರೋಪಿ ಗಂಗಾದೇವಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಮೂಲತಃ ಆಂಧ್ರ ಮೂಲದವರಾದ ಗಂಗಾದೇವಿ ಕುಟುಂಬ, ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿದ್ದರು. ಗಂಗಾದೇವಿ ಪತಿ ಪೊಕ್ಸೊ ಕೇಸ್​ನಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಪತಿ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪತ್ನಿ ಗಂಗಾದೇವಿ ಖುದ್ದು ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಇನ್ನು ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಾಳೆ.

ಹಳೇ ದ್ವೇಷ ಹಿನ್ನೆಲೆ ಯುವಕನ ಬರ್ಬರ ಕೊಲೆ

ಮಂಡ್ಯ: ಹಳೇ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ. ಅಕ್ಷಯ್​ (24) ಕೊಲೆಯಾದ ಯುವಕ. ಕರೆ ಮಾಡಿ ಅಕ್ಷಯನನ್ನು ಕರೆಸಿಕೊಂಡು ನಡು ಬೀದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಂಡ್ಯ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿ ಹೋಗಲು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಮಹಿಳೆಯ ಬಂಧನ

ತಂದೆಯ ದುಡಿಮೆ ಹಣ ಕೇಳಿದ್ದಕ್ಕೆ ಮಗಳ ಮೇಲೆ‌ ಹಲ್ಲೆ

ಬೆಳಗಾವಿ: ತಂದೆಯ ದುಡಿಮೆ ಹಣ ಕೇಳಿದ್ದಕ್ಕೆ ಮಗಳ ಮೇಲೆ‌ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ನಡೆದಿದೆ. ಅರ್ಜುನ್​ ಎಂಬುವರು ಜೈ ಹನುಮಾನ್ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಅರ್ಜುನ ಅವರ ಪುತ್ರಿ (17 ವರ್ಷ) ಮೂರು ದಿನದ ದುಡಿಮೆ‌ಯ ಕೇಳಿದ್ದಾರೆ. ಈ ವೇಳೆ ಕಂಪನಿಯ ಮಾಲಿಕರಾದ ಅಶೋಕ್​ ಭಜಂತ್ರಿ, ಕರೆಪ್ಪ ಭಜಂತ್ರಿ ಅವಾಚ್ಯವಾಗಿ ಬೈದು ತಂದೆ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಗಾಯಾಳು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪ್ರಕರಣ ಸಂಬಂಧ ಕಾಕತಿ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಬಾಲಕಿ ಕುಟುಂಬಸ್ಥರು ಕಮಿಷನರ್​ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ