Kerala Woman’s Murder: ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು

ಕೇರಳದಲ್ಲಿ ಮಹಿಳೆಯ ನಿಗೂಢ ಕೊಲೆಗೆ ಸಂಬಂಧಿಸಿದಂತೆ ಗೂಗಲ್​ ಸರ್ಚ್​ ಹಿಸ್ಟರಿಯಿಂದ ಕೊಲೆಗಾರ ಯಾರೆಂಬುದು ಗೊತ್ತಾಗಿದೆ. ಕೇರಳದ ಕೊಲ್ಲಂ ಕೋರ್ಟ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Kerala Woman’s Murder: ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು
ಪ್ರಶಾಂತ್ ನಂಬಿಯಾರ್
Image Credit source: Indian Express

Updated on: May 17, 2023 | 8:36 AM

ಕೇರಳದಲ್ಲಿ ಮಹಿಳೆಯ ನಿಗೂಢ ಕೊಲೆಗೆ ಸಂಬಂಧಿಸಿದಂತೆ ಗೂಗಲ್​ ಸರ್ಚ್​ ಹಿಸ್ಟರಿಯಿಂದ ಕೊಲೆಗಾರ ಯಾರೆಂಬುದು ಗೊತ್ತಾಗಿದೆ. ಕೇರಳದ ಕೊಲ್ಲಂ ಕೋರ್ಟ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 33 ವರ್ಷದ ಸಂಗೀತ ಶಿಕ್ಷಕ ಪ್ರಶಾಂತ್ ನಂಬಿಯಾರ್ ತನ್ನ ಸ್ನೇಹಿತೆ ಸುಚಿತ್ರಾ ಪಿಳ್ಳೈ(42)ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಮಾರ್ಚ್​ 20, 2020ರಂದು ಪಾಲಕ್ಕಾಡ್ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಯನ್ನು ಕೊಲ್ಲುವುದು ಹೇಗೆ ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದರು, ಅಷ್ಟೇ ಅಲ್ಲದೆ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕೂಡ ಸರ್ಚ್​ ಮಾಡಿ, ಹಲವು ಅಂತಹ ಸಿನಿಮಾಗಳನ್ನು ವೀಕ್ಷಿಸಿದ್ದರು. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಭಾಗ ಗುಂಡಿ ತೋಟಿ ಅದರಲ್ಲಿ ಹೂತು ಹಾಕಿದ್ದರು.

ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ -1 ಸೋಮವಾರ ಅದೇ ಜಿಲ್ಲೆಯ ನಡುವಿಲಕ್ಕರ ಗ್ರಾಮದ ಸುಚಿತ್ರಾ ಕೊಲೆ ಪ್ರಕರಣದಲ್ಲಿ ಪ್ರಶಾಂತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಶಾಂತ್​ಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು 2.5 ಲಕ್ಷ ರೂ. ದಂಡ ವಿಧಿಸಿದೆ. ಇಬ್ಬರ ನಡುವೆ 2019ರಿಂದ ಸಂಬಂಧವಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: ಕಲಬುರಗಿ: ಜಮೀನಿಗೆ ಹೋದ ಮಹಿಳೆಯ ಬರ್ಬರ ಹತ್ಯೆ; ಅರ್ಧಂಬರ್ಧ ಮಣ್ಣು ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಯಿತು ಮಹಿಳೆ ಶವ

ಕೊಲೆಯ ಹಿಂದಿರುವ ಕಾರಣ
ಎರಡು ಬಾರಿ ವಿಚ್ಛೇದನ ಪಡೆದಿದ್ದ ಸುಚಿತ್ರಾ ಪ್ರಶಾಂತ್ ಅವರೊಂದಿಗೆ ಮಗುವನ್ನು ಹೊಂದಲು ಬಯಸಿದ್ದಳು, ಪದೇ ಪದೇ ಇದೇ ವಿಚಾರವನ್ನು ಕೇಳುತ್ತಿದ್ದಳು, ವೃತ್ತಿಯಲ್ಲಿ ಬ್ಯೂಟಿಷಿಯನ್ ಟ್ರೈನರ್ ಆಗಿರುವ ಸುಚಿತ್ರಾ, ಪ್ರಶಾಂತ್ ಪತ್ನಿಗೆ ದೂರದ ಸಂಬಂಧಿಯಾಗಿದ್ದರು. 2019 ರಲ್ಲಿ ತಮ್ಮ ಮಗುವಿಗೆ ನಾಮಕರಣ ಸಮಾರಂಭದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು.

ಸುಚಿತ್ರಾ ಎರಡು ಬಾರಿ ವಿಚ್ಛೇದನ ಪಡೆದಿದ್ದರು, ಅದಕ್ಕಾಗಿಯೇ ಅವರು ಮತ್ತೆ ಮದುವೆಯಾಗಲು ಸಿದ್ಧರಿರಲಿಲ್ಲ, ಆದರೆ ತಾಯಿಯಾಗಲು ಬಯಸಿದ್ದರು ಎಂದು ಹೇಳಲಾಗುತ್ತಿದೆ. ಆಕೆ ಪ್ರಶಾಂತ್‌ನನ್ನು ತನ್ನ ಮಗುವಿಗೆ ತಂದೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದರೆ ಮಗುವಾದರೆ ತಮ್ಮ ವಿಚಾರ ಬಯಲಿಗೆ ಬರುತ್ತದೆ ಎಂದು ಆತ ಭಯಗೊಂಡಿದ್ದ.

ಇದರಿಂದ ಬೇಸತ್ತು ಕೊನೆಗೆ ಸುಚಿತ್ರಾಳನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದ, ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಕೆಲವು ದಿನಗಳ ಕಾಲ ಒಟ್ಟಿಗೆ ಇರೋಣ ಎಂದು ಹೇಳಿದ್ದ, ಹೆಂಡತಿ ಮಗುವನ್ನು ಕೊಲ್ಲಂನಲ್ಲಿರುವ ಮನೆ ಹಾಗೂ ತಂದೆ-ತಾಯಿಯನ್ನು ಕೋಯಿಕ್ಕೋಡ್​ಗೆ ಕಳುಹಿಸಿದ್ದ. ಇಬ್ಬರ ವಾಟ್ಸಾಪ್ ಸಂದೇಶಗಳು ಕೂಡ ಪೊಲೀಸರಿಗೆ ಸಿಕ್ಕಿದೆ.

ತರಗತಿಗೆ ಹಾಜರಾಗಲು ಕೊಚ್ಚಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿದ್ದಾಳೆ. ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಯನ್ನು ಭೇಟಿ ಮಾಡಲು ಅಲಪ್ಪುಳಕ್ಕೆ ಹೋಗುವುದಾಗಿ ಹೇಳಿ ಅಕಾಡೆಮಿಯಿಂದ ಹೊರಟರು. ಅಂದು ಸಂಜೆ ಕೊಲ್ಲಂನ ನಿರ್ಜನ ಹೆದ್ದಾರಿಯಿಂದ ಪ್ರಶಾಂತ್ ಅವಳನ್ನು ಕರೆದುಕೊಂಡು 270 ಕಿಮೀ ದೂರದ ಪಾಲಕ್ಕಾಡ್‌ಗೆ ಕರೆದೊಯ್ದಿದ್ದ, ನಂತರ ಇಬ್ಬರೂ ಮಾರ್ಚ್ 20 ರವರೆಗೆ ಪ್ರಶಾಂತ್ ಮನೆಯಲ್ಲಿಯೇ ಇದ್ದರು.

ಆತ ಹತ್ಯೆ ಮಾಡಿದ ಬಳಿಕ ಪ್ರಶಾಂತ್ ಸುಚಿತ್ರಾಳ ದೇಹದಲ್ಲಿರುವ ಚಿನ್ನಾಭರಣಗಳನ್ನು ತೆಗೆದಿದ್ದಾನೆ. ಪೊಲೀಸರ ಪ್ರಕಾರ, ಅವನು ಅವಳ ಕಾಲುಗಳನ್ನು ಮೊಣಕಾಲುಗಳ ಕೆಳಗೆ ಕತ್ತರಿಸಿ ಮನೆಯ ಹಿಂದೆ ಹೊಂಡವನ್ನು ತೆಗೆದು, ಅಲ್ಲಿ ಆಕೆಯ ದೇಹದ ಭಾಗಗಳನ್ನು ಹೂತಿದ್ದ.

ಅಲ್ಲದೆ ನಾಯಿಗಳು ಮೃತದೇಹವನ್ನು ಅಗೆಯಲು ಸಾಧ್ಯವಾಗದಂತೆ ಗುಂಡಿಯನ್ನು ಕಲ್ಲು, ಸಿಮೆಂಟ್ ಕಲ್ಲುಗಳಿಂದ ಮುಚ್ಚಲಾಗಿದೆ. ಅದರ ನಂತರ ಅವನು ಅವಳ ಬಟ್ಟೆಗಳನ್ನು ಮತ್ತು ರಕ್ತದಿಂದ ಕಲೆಯಾಗಿದ್ದ ಎಲ್ಲಾ ವಸ್ತುಗಳನ್ನು ಸುಟ್ಟುಹಾಕಿದ್ದ.

ಸುಚಿತ್ರಾ ಕುಟುಂಬದವರು ಮಗಳಿಗಾಗಿ ಕಾಯುತ್ತಿದ್ದರು, ಬ್ಯೂಟಿಷಿಯನ್ ಅಕಾಡೆಮಿಯಲ್ಲಿ ವಿಚಾರಿಸಿದಾಗ ಆಕೆ ಸುಳ್ಳು ಹೇಳಿ ಹೋಗಿರುವುದು ತಿಳಿದಿತ್ತು ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಪ್ರಶಾಂತ್ ಅವರ ಕಾಲ್ ಹಿಸ್ಟರಿ ನೋಡಿ ಬಂಧಿಸಿದ್ದಾರೆ. ಆರೋಪಿ ಸಾಮಾಜಿಕ ಮಾಧ್ಯಮದ ಎಲ್ಲಾ ಖಾತೆಗಳಿಂದ ತನ್ನ ಚಾಟ್ ಅಳಿಸಿದ್ದ, ಆದರೂ ಸೈಬರ್ ಪೊಲೀಸರ ಸಹಾಯದಿಂದ ಸಂಭಾಷಣೆಯನ್ನು ಪೊಲೀಸರು ಹಿಂಪಡೆದಿದ್ದಾರೆ.

ಸುಚಿತ್ರಾಗೆ ಮಹಾರಾಷ್ಟ್ರದಲ್ಲಿ ಸ್ನೇಹಿತೆಯೊಬ್ಬಳಿದ್ದು, ಆಕೆ ಅಲ್ಲಿಗೆ ತೆರಳಿರಬಹುದು ಎಂದು ಹೇಳಿ ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತನಿಖಾಧಿಕಾರಿಗಳು ಕೇವಲ ಕಾಲ್ ಹಿಸ್ಟರ್ ಮಾತ್ರವಲ್ಲ ಇಂಟರ್ನೆಟ್ ವಿವರಗಳನ್ನು ಕೂಡ ಪಡೆದುಕೊಂಡಿದ್ದರು.

ಇದು ಅವರ ಮೊಬೈಲ್ ಟ್ರ್ಯಾಕ್ ಮಾಡಲು ಸಹಾಯ ಮಾಡಿತ್ತು. ಕೊಲೆ ಮಾಡುವುದು ಹೇಗೆ, ಮೃತದೇಹವನ್ನು ಯಾರಿಗೂ ತಿಳಿಯದಂತೆ ಮಣ್ಣು ಮಾಡುವುದು ಹೇಗೆ ಎಲ್ಲವನ್ನೂ ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡಿದ್ದ ಇದೆಲ್ಲವನ್ನೂ ತಿಳಿದ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us