ದೀಪಾವಳಿ ನೆಪದಲ್ಲಿ ಜೂಜಾಟ: ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿ ಹಣ ಜಪ್ತಿ ಮಾಡಿದ ಪೊಲೀಸರು

| Updated By: Rakesh Nayak Manchi

Updated on: Oct 26, 2022 | 9:38 AM

ಪೊಲೀಸರು ಡಂಗೂರ ಸಾರಿಸಿ ಜನರಲ್ಲಿ ಜಾಗೃತಿ ಮೂಡಿಸಿದರೂ ಕ್ಯಾರೇ ಎನ್ನದೆ ದೀಪಾವಳಿ ನೆಪ ಮಾಡಿಕೊಂಡು ಇಸ್ಪೀಟ್ ಆಡುತ್ತಿದ್ದ ಅನೇಕರ ವಿರುದ್ಧ ಪ್ರಕರಣ ದಾಖಲಾಗಿದೆ.

ದೀಪಾವಳಿ ನೆಪದಲ್ಲಿ ಜೂಜಾಟ: ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿ ಹಣ ಜಪ್ತಿ ಮಾಡಿದ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಕೊಪ್ಪಳ: ಜಿಲ್ಲೆಯ ಹಲವೆಡೆ ದೀಪಾವಳಿಯಂದು ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಆಡುತ್ತಾರೆ. ಕಾನೂನು ಪ್ರಕಾರ ಇಸ್ಪೀಟ್ ಆಡುವುದು ಅಪರಾಧವಾಗಿದೆ. ಹೀಗಾಗಿ ಯಾರು ಕೂಡ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆಯು ಡಂಗೂರ ಸಾರಿಸಿ, ಸಿಬ್ಬಂದಿಯೂ ಮೈಕ್ ಮೂಲಕ ತಿಳಿ ಹೇಳಿ ಹಾಗೂ ವಾಹನಗಳಲ್ಲಿ ಘೋಷಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ದೀಪಾವಳಿಯಂದು ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.

ಪೊಲೀಸರ ಸೂಚನೆಯ ನಂತರವೂ ದೀಪಾವಳಿ ನೆಪದಲ್ಲಿ ಕೊಪ್ಪಳದಲ್ಲಿ ಇಸ್ಪೀಟ್ ಹಾವಳಿ ಮಿತಿ ಮೀರಿದ ಹಿನ್ನೆಲೆ ಅಖಾಡಕ್ಕಿಳಿದ ಪೊಲೀಸರು, ಒಂದೇ ದಿನ ಹಲವೆಡೆ ದಾಳಿ ನಡೆಸಿ 30ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ ಒಟ್ಟು 228 ಜನರ ಮೇಲೆ ಪ್ರಕರಣ ದಾಖಲಾದಂತಾಗಿದೆ. ಜೂಜಿಗೆ ಇಟ್ಟ ಒಟ್ಟು 2.56 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದೀಪಾವಳಿ ಹಬ್ಬದಂದು ದೀಪ ಕಾಯುವ ನೆಪದಲ್ಲಿ ಒಂದಷ್ಟು ಮಂದಿ ಇಸ್ಪೀಟ್ ಆಡುತ್ತಾರೆ. ಅದರಂತೆ ಹಬ್ಬದ ನೆಪದಲ್ಲಿ ಇಸ್ಪೀಟ್ ಆಟವಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಾಮೂಹಿಕ ಇಸ್ಪೀಟ್ ಆಡುವ ಜಾಗದಲ್ಲಿ ಡಂಗೂರ ಸೇರಿದಂತೆ ಧ್ವನಿವರ್ಧಕಗಳ ಮೂಲಕ ಪೊಲೀಸರು ಸೂಚನೆ ನೀಡಿದ್ದರು. ಕೊಪ್ಪಳ, ಗಂಗಾವತಿ, ಮುನಿರಾಬಾದ್ ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಕೂಡ ಮೈಕ್ ಮೂಲಕ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿದ್ದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Wed, 26 October 22