ಡ್ರಗ್ ಮಾಫಿಯಾಗೆ ಖಾಕಿ ಲಿಂಕ್: ಪೆಡ್ಲರ್​ಗಳೊಂದಿಗೆ ಕೈಜೋಡಿಸಿದ್ದ ಇನ್ಸ್‌ಪೆಕ್ಟರ್‌ ಸೇರಿ 11 ಸಿಬ್ಬಂದಿ ಸಸ್ಪೆಂಡ್!

ಡ್ರಗ್ ಮಾಫಿಯಾ ಕಂಟ್ರೋಲ್​​ಗಾಗಿ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಾಜ್ಯಾದ್ಯಂತ ಡ್ರಗ್ಸ್ ಮುಕ್ತವಾಗಿಸಲು ಕರೆನೀಡಿರುವ ಗೃಹ ಸಚಿವರು, ಆದ್ಯತೆ ಮೇರಗೆ ಡ್ರಗ್ಸ್ ಕಂಟ್ರೋಲ್​​ಗೆ ಪಣತೊಟ್ಟಿರುವುದಾಗಿ ಹೇಳುತ್ತಲೇ ಇರ್ತಾರೆ. ಆದರೆ ಡ್ರಗ್ಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರೇ ಡ್ರಗ್ಸ್​ ಡೀಲ್​ನಲ್ಲಿ ಪೆಡ್ಲರ್​ಗಳ ಜೊತೆ ಕೈಜೋಡಿಸಿರುವುದು ಬಟಾಬಯಲಾಗಿದೆ.

ಡ್ರಗ್ ಮಾಫಿಯಾಗೆ ಖಾಕಿ ಲಿಂಕ್: ಪೆಡ್ಲರ್​ಗಳೊಂದಿಗೆ ಕೈಜೋಡಿಸಿದ್ದ ಇನ್ಸ್‌ಪೆಕ್ಟರ್‌ ಸೇರಿ 11 ಸಿಬ್ಬಂದಿ ಸಸ್ಪೆಂಡ್!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2025 | 7:57 AM

ಬೆಂಗಳೂರು, ಸೆಪ್ಟೆಂಬರ್​ 14: ಕರ್ನಾಟಕದಾದ್ಯಂತ (Karnataka) ಡ್ರಗ್ಸ್ (Drugs) ಮುಕ್ತ ಮಾಡಲೆಂದು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತಂದಿದೆ‌. ಆದರೆ ಈ ಅಭಿಯಾನಗಳನ್ನು ಜಾರಿ ಮಾಡಿ ಜನರಲ್ಲಿ ಅರಿವು ಮೂಡಿಸಬೇಕಾದ ಪೊಲೀಸರೇ ಪೆಡ್ಲರ್​ಗಳೊಂದಿಗೆ ಕೈಜೋಡಿಸಿರುವ ಕಳವಳಕಾರಿ ಸಂಗತಿ ಬಹಿರಂಗ ಆಗಿದೆ‌. ಅಷ್ಟೇ ಅಲ್ಲದೆ ಡೀಲ್​​ನಲ್ಲಿ ಕೈಜೋಡಿಸಿದ್ದ ಇನ್ಸ್‌ಪೆಕ್ಟರ್‌ ಸೇರಿ 11 ಸಿಬ್ಬಂದಿಗಳ ತಲೆದಂಡವಾಗಿದೆ.

ಡ್ರಗ್ ಮಾಫಿಯಾಗೆ ಖಾಕಿ ಲಿಂಕ್: ಹಫ್ತಾ ವಸೂಲಿ!

ಆರೋಪಿಗಳ ಜೊತೆ ಸೇರಿ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿದ್ದ, ಡ್ರಗ್ಸ್ ಪೆಡ್ಲರ್ಸ್ ಜೊತೆಗೆ ನಂಟು ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್‌ ಟಿ.ಮಂಜಣ್ಣ ಸೇರಿ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಯ 10 ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ವಾರ್ಡನ್​ನಿಂದಲೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ: ಬಂಧನ

ಇತ್ತೀಚೆಗೆ ಆರ್​ಆರ್ ನಗರ ಠಾಣೆ ಪೊಲೀಸರು ಒಂದು ಕಾರ್ಯಾಚರಣೆ ಮಾಡಿದ್ದರು. ಟೈಡಲ್ ಟ್ಯಾಬ್ಲೆಟ್ ಪೆಡ್ಲಿಂಗ್ ಕೇಸ್​ನಲ್ಲಿ ಸಲ್ಮಾನ್ ಅಲಿಯಾಸ್​ ಪಾಪ, ಸಲ್ಮಾನ್​ ಅಲಿಯಾಸ್​​ ಪುಟಾಟ್, ನಯಾಜ್, ನವಾಜ್ ರೇಷ್ಮಾ ಎಂಬುವರು ಸೇರಿ ಆರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರಿಂದ 4 ಲಕ್ಷ ರೂ. ನಗದು ಹಾಗೂ ನಾಲ್ಕು ಲಕ್ಷ ರೂ. ಮೌಲ್ಯ 1000 ಟೈಡಾಲ್ ಮಾತ್ರೆಗಳನ್ನ ಸೀಜ್ ಮಾಡಿದ್ದರು.

1 ರಿಂದ 1.5 ಲಕ್ಷ ರೂ ಪ್ರತಿ ತಿಂಗಳು ಕಮಿಷನ್

ತನಿಖೆ ಮುಂದುವರೆಸಿ, ಪೊಲೀಸರೇ ಇವರಿಗೆ ಶ್ರೀರಕ್ಷೆ ಆಗಿದ್ದರೂ ಎನ್ನುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳು ಚಾಮರಾಜಪೇಟೆ ಮತ್ತು ಜೆಜೆ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೈಡಾಲ್ ಪೆಡ್ಲಿಂಗ್ ಮಾಡಲು ಪೊಲೀಸರಿಗೆ ಒಬ್ಬೊಬ್ಬರು 1 ರಿಂದ 1.5 ಲಕ್ಷ ರೂ ಪ್ರತಿ ತಿಂಗಳು ಕಮಿಷನ್ ಕೊಡುತ್ತಿದ್ದರು ಅನ್ನೋದು ಗೊತ್ತಾಗಿದೆ.

ಪೊಲೀಸರು ಭಾಗಿಯಾಗಿರುವುದು ತಿಳಿದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಎಸಿಪಿ ಚಂದನ್​​ಗೆ ತನಿಖೆ ಜವಾಬ್ದಾರಿ ವಹಿಸಿದ್ದರು. ಎಸಿಪಿ ಚಂದನ್ ತನಿಖೆ ವೇಳೆ ಚಾಮರಾಜಪೇಟೆ ಪೇಟೆ ಇನ್ಸ್‌ಪೆಕ್ಟರ್‌ ಮಂಜಣ್ಣ, ಎಸ್​ಬಿ ಕಾನ್ಸ್‌ಟೇಬಲ್‌ ಶಂಕರ್, ಪ್ರಸನ್ನ, ಶಿವರಾಜ್, ಆನಂದ್, ರಮೇಶ್ ಬಾನೋಂದ್, ಹಾಗೂ ಜೆಜೆ ಆರ್ ನಗರ ಠಾಣೆಯ ಕುಮಾರ್, ಆನಂದ, ಬಸವಣ್ಣ ಮತ್ತು ಮಹೇಶ್ ಎಂಬುವವರು ಭಾಗಿಯಾಗಿರುವುದು ಗೊತ್ತಾಗಿದೆ. ಇವರೇ ಪೆಡ್ಲಿಂಗ್ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದು, ಜೊತೆಗೆ ಕೆಲ ಐಡಿಯಾಗಳನ್ನ ಕೊಟ್ಟಿದ್ದರು ಎಂಬುವುದಕ್ಕೆ ಸಾಕ್ಷ್ಯಗಳು ಲಭ್ಯ ಆಗಿತ್ತು.

ಇದನ್ನೂ ಓದಿ: ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ

ಆರೋಪ ಕಂಡುಬಂದ ಹಿನ್ನಲೆ ಡಿಸಿಪಿ 11 ಜನ ಪೊಲೀಸರನ್ನು ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದರು.  ಡಿಸಿಪಿ ವರದಿ ಆಧರಿಸಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತ್ತು ಮಾಡಿ ಆದೇಶಿಸಿದ್ದಾರೆ. ನಗರದ ಬೇರೆ ಬೇರೆ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ಇದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.