ವಿಷ ಸೇವಿಸಿದ್ದ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು

|

Updated on: Feb 24, 2023 | 10:30 PM

ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಮುಷ್ಕರದಲ್ಲಿ ಭಾಗಿಯಾಗಿದ್ದ ನಿವೃತ್ತ ಶಿಕ್ಷಕರಿಬ್ಬರು ನಿನ್ನೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಆ ಪೈಕಿ ಒಬ್ಬ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ಇಂದು (ಫೆ. 24) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ವಿಷ ಸೇವಿಸಿದ್ದ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು
ಮೃತ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ
Follow us on

ಬೆಂಗಳೂರು: ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ (teachers) ಸಂಘದಿಂದ ಮುಷ್ಕರದಲ್ಲಿ ಭಾಗಿಯಾಗಿದ್ದ ನಿವೃತ್ತ ಶಿಕ್ಷಕರಿಬ್ಬರು ನಿನ್ನೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಆ ಪೈಕಿ ಒಬ್ಬ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ಇಂದು (ಫೆ. 24) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿದ್ದಯ್ಯ ಹಿರೇಮಠ (65) ಮೃತ ನಿವೃತ್ತ ಶಿಕ್ಷಕ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ನಿವಾಸಿ. ಆಮರಣ, ಅರೆಬೆತ್ತಲೆ, ಭಿಕ್ಷಾಟನೆ ಎಲ್ಲ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 1990 ರಿಂದ ಅನುದಾನರಹಿತ ಶಾಲೆಯಲ್ಲಿ ಶಿಕ್ಷಕರಾಗಿದ್ದು, 2008ರಲ್ಲಿ ಸೇವೆ ಸಲ್ಲಿಸುತ್ತಿದ್ದ ಶಾಲೆ ಅನುದಾನಕ್ಕೆ ಒಳಪಟ್ಟಿತ್ತು. ಬಳಿಕ 2012ರಲ್ಲಿ ನಿವೃತ್ತಿ ಹೊಂದಿದ್ದರು. 9 ವರ್ಷ ಮಾತ್ರ ಸರಕಾರಿ ವೇತನ ಪಡೆದಿದ್ದರು. ನಿವೃತ್ತಿ ನಂತರ ಯಾವುದೇ ಪಿಂಚಣಿಗೆ ಅರ್ಹತೆಯಾಗಲಿಲ್ಲ. ಸದ್ಯ ಪತ್ನಿ, ನಾಲ್ಕು ಜನ ಹೆಣ್ಣುಮಕ್ಕಳು ಒಬ್ಬ ಮಗನನ್ನು ಅಗಲಿದ್ದಾರೆ.

ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಪಿಂಚಣಿಗಾಗಿ 141 ದಿನಗಳಿಂದ ಶಿಕ್ಷಕರು ಮುಷ್ಕರ ನಡೆಸುತ್ತಿದ್ದರು. ಶಾಲಾ ಶಿಕ್ಷಕರ ಈ ಹೋರಾಟಕ್ಕೆ ಸರ್ಕಾರ ಕೇರ್ ಮಾಡದಿದ್ದಾಗ ನಿನ್ನೆ ಫ್ರೀಡಂಪಾರ್ಕ್‌ನಲ್ಲಿ ಮುಷ್ಕರದಲ್ಲಿ ಭಾಗಿಯಾದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರ ಜೊತೆಗೆ ನಿವೃತ್ತ ಶಿಕ್ಷಕ ವೆಂಕಟರಾಜು ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: 81 ವರ್ಷದ ವೃದ್ಧ ಅಪರಾಧಿಗೆ 1 ವರ್ಷ ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ವಿಭಿನ್ನ ಶಿಕ್ಷೆ ವಿಧಿಸಿದ ಕರ್ನಾಟಕ ಹೈಕೋರ್ಟ್

ಕೌಟುಂಬಿಕ ಕಲಹ ಹಿನ್ನೆಲೆ ತಾಯಿ-ಮಗ ನೇಣಿಗೆ ಶರಣು

ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ-ಮಗ ನೇಣಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ತಿಪಟೂರಿನ ಶಾರದಾನಗರದಲ್ಲಿ ನಡೆದಿದೆ. ತಾಯಿ ಸೌರಭಾ(33), ಮಗ ಆರ್ಯ(7) ಮೃತರು. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ, ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು

ಬೆಂಗಳೂರಿನ ಮಹಿಳೆಗೆ 5 ಲಕ್ಷ ವಂಚಿಸಿದ ಸೈಬರ್ ಚೋರರು

ಬೆಂಗಳೂರು: ದೆಹಲಿ ಪೊಲೀಸರ ಹೆಸರಿನಲ್ಲಿ ಬೆಂಗಳೂರು ಮಹಿಳೆಯೊಬ್ಬರಿಗೆ ವಂಚನೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಮ್ಮ ಹೆಸರಿನಲ್ಲಿ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್ ಹಾಗೂ ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಂಬಿಸಿ ಮಹಿಳೆಯ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ. ಸದ್ಯ ವಂಚನೆಗೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 pm, Fri, 24 February 23