Santro Ravi: ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಜೆಎಂಎಫ್​ಸಿ ಕೋರ್ಟ್​

ಕುಖ್ಯಾತಿ ಕ್ರಿಮಿನಲ್ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜನವರಿ 13ರಂದು ಗುಜರಾತ್​ನಲ್ಲಿ ಬಂಧಿಸಿದ ಪೊಲೀಸರು ಇಂದು ರಾಜ್ಯಕ್ಕೆ ಕರೆತಂದಿದ್ದರು.

Santro Ravi: ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಜೆಎಂಎಫ್​ಸಿ ಕೋರ್ಟ್​
ಸ್ಯಾಂಟ್ರೋ ರವಿ
Edited By: Rakesh Nayak Manchi

Updated on: Jan 14, 2023 | 7:58 PM

ಮೈಸೂರು: ಕುಖ್ಯಾತ ಕ್ರಿಮಿನಲ್ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿಯನ್ನು (Santro Ravi) 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮೈಸೂರಿನ ಜೆಎಂಎಫ್​ಸಿ ಕೋರ್ಟ್ (JMFC Court Mysore) ಆದೇಶ ಹೊರಡಿಸಿದೆ. ಇಂದು (ಜ.14) ಎರಡನೇ ಶನಿವಾರ ಆಗಿದ್ದರಿಂದ ನ್ಯಾಯಾಲಕ್ಕೆ ರಜೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸರು ರವಿಯ್ನನ್ನು ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಿಗಿ ಭದ್ರತೆ ಮೂಲಕ ಮೈಸೂರಿನ ವಿಜಯನಗರ ಠಾಣೆಯಿಂದ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಡ್ಜ್​ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರಾದ ಗುರುರಾಜ್‌ ಸೋಮಕ್ಕಲವರ್ ಅವರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರ ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಬ್ಬರು ಇನ್ಸ್​ಪೆಕ್ಟರ್, ಇಬ್ಬರು PSI ಸೇರಿ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್​ನಲ್ಲಿ ನಿನ್ನೆ (ಜ.13) ಬಂಧಿಸಿ ಇಂದು (ಜ.14) ಕರ್ನಾಟಕಕ್ಕೆ ಕರೆತಂದಿದ್ದರು. ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಇದ್ದುದನ್ನು ಪತ್ತೆ ಮಾಡಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ನಂತರ ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ಕರೆದೊಯ್ಯಲಾಯ್ತು ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ಹರಕೆ ಹೊತ್ತ 22 ಗಂಟೆಗಳಲ್ಲಿ ಸ್ಯಾಂಟ್ರೋ ರವಿ ಬಂಧನ: ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ ಅಲೋಕ್ ಕುಮಾರ್

ಸ್ಯಾಂಟ್ರೋ ರವಿ ಗುಜರಾತ್​ನಲ್ಲಿ ಇರಬಹುದು ಎಂಬ ಅನುಮಾನದ ಮೇಲೆ ಕರ್ನಾಟಕ ಪೊಲೀಸರ ತಂಡವನ್ನು ತರಾತುರಿಯಲ್ಲಿ ಅಹಮದಾಬಾದ್​ಗೆ ಕಳಿಸಲಾಗಿತ್ತು. ಈ ಪೈಕಿ ಮೈಸೂರು ಪೊಲೀಸರ ಬಳಿ ಸ್ಯಾಂಟ್ರೋ ರವಿಯ ಹಳೆಯ ಮೂರು ಫೋಟೊಗಳಿದ್ದವು. ಅವನ ತಲೆಯಲ್ಲಿ ಕೂದಲು ಇಲ್ಲ. ಹೀಗಾಗಿ ಟೋಪನ್ ಧರಿಸುತ್ತಾನೆ ಎಂಬ ಮಾಹಿತಿಯಿದ್ದ ಪೊಲೀಸರು ಬೋಳುತಲೆ, ಗಡ್ಡಮೀಸೆ ಇಲ್ಲದ ರೇಖಾಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಲೆಕ್ಕಾಚಾರದಂತೆ ಅವನೂ ಗುರುತು ಬದಲಿಸಿಕೊಂಡಿದ್ದ. ಆದರೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಅವನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಮಂತ್ರಾಲಯಕ್ಕೆ ಬಂದಿದ್ದ ಸ್ಯಾಂಟ್ರೋ ರವಿ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್​ ಎಂಬಾತನನ್ನು ರಾಯಚೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಸ್ಯಾಂಟ್ರೋ ರವಿ ಗುಜರಾತ್​ನಲ್ಲಿ ತಲೆಮರೆಸಿಕೊಂಡಿರುವು ತಿಳಿದುಬಂದಿದೆ. ಅದರಂತೆ ಕಾರ್ಯಾಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Santro Ravi: ಮೈಸೂರಿನ ವಿವಿ ಮೊಹಲ್ಲಾದ ಜಡ್ಜ್​ ನಿವಾಸದಲ್ಲಿ ಹಾಜರು | #TV9D

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Sat, 14 January 23

Follow Us