ಇನ್ಮುಂದೆ 5, 8ನೇ ಕ್ಲಾಸ್ ಮಕ್ಕಳನ್ನು ಫೇಲ್ ಮಾಡಬಹುದು; ಕೇಂದ್ರ ಸರ್ಕಾರದ ಹೊಸ ನಿರ್ಧಾರ

ವರ್ಷಾಂತ್ಯದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ 'ಅನುತ್ತೀರ್ಣರಹಿತ ನೀತಿ'ಯನ್ನು ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿರಲಿಲ್ಲ. ಆದರೆ, ಇದೀಗ ಆ ನೀತಿಯನ್ನು ಕೇಂದ್ರ ರದ್ದುಗೊಳಿಸುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಇನ್ಮುಂದೆ 5, 8ನೇ ಕ್ಲಾಸ್ ಮಕ್ಕಳನ್ನು ಫೇಲ್ ಮಾಡಬಹುದು; ಕೇಂದ್ರ ಸರ್ಕಾರದ ಹೊಸ ನಿರ್ಧಾರ
School Students

Updated on: Dec 23, 2024 | 7:09 PM

ನವದೆಹಲಿ: 5 ಮತ್ತು 8ನೇ ತರಗತಿ ಮಕ್ಕಳಿಗೆ ಈ ಮೊದಲು ಜಾರಿಯಲ್ಲಿದ್ದ ಕೇಂದ್ರ ಸರ್ಕಾರದ ಅನುತ್ತೀರ್ಣ ರಹಿತ ನೀತಿಯನ್ನು ರದ್ದುಗೊಳಿಸಲಾಗಿದೆ. ಇನ್ನುಮುಂದೆ ಸರ್ಕಾರಿ ಶಾಲೆಗಳು 5, 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಹುದು. ಕೇಂದ್ರ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಶನ್ ನೀತಿ’ಯನ್ನು ರದ್ದುಗೊಳಿಸಿದೆ. ಪರೀಕ್ಷೆಯಲ್ಲಿ ಫೇಲ್ ಆದವರು ಎರಡನೇ ಬಾರಿಗೆ ಉತ್ತೀರ್ಣರಾಗಲು ಮತ್ತೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತದೆ. ಮರು ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಮಕ್ಕಳು ಮತ್ತೆ ಪಾಸ್ ಆಗಲು ಸಾಧ್ಯವಾಗದಿದ್ದರೆ ಹೊಸ ನೀತಿಯ ಪ್ರಕಾರ, ಅವರನ್ನು 5ನೇ ತರಗತಿ ಅಥವಾ 8ನೇ ತರಗತಿಯಲ್ಲಿಯೇ ಉಳಿಸಲಾಗುತ್ತದೆ.

ಕೇಂದ್ರ ಸರ್ಕಾರದ ಈ ಹೊಸ ನೀತಿಯ ಪ್ರಕಾರ, ವರ್ಷಾಂತ್ಯದ ಪರೀಕ್ಷೆಗಳಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಶಾಲೆಗಳಿಗೆ ಅವಕಾಶ ನೀಡಲಾಗುತ್ತದೆ. 2019ರಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ತಿದ್ದುಪಡಿಯ ನಂತರ, 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಈ 2 ತರಗತಿಗಳಲ್ಲಿ ‘ನೋ-ಡಿಟೆನ್ಷನ್ ನೀತಿ’ಯನ್ನು ತೆಗೆದುಹಾಕಿವೆ.

ಇದನ್ನೂ ಓದಿ: ಸರ್ಕಾರದ ಶ್ರಮಕ್ಕೆ ಸಿಕ್ಕಿತು ಫಲ: ದೇಶದ 2.14 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್ ತಲುಪಿದ್ದು ಹೀಗೆ ಗೊತ್ತೇ?

ಮಕ್ಕಳು ಫೇಲ್ ಆದಾಗ ತರಗತಿಯ ಶಿಕ್ಷಕರು ಮಗುವಿಗೆ ಮತ್ತು ಮಗುವಿನ ಪೋಷಕರಿಗೆ ಅಗತ್ಯವಿದ್ದಲ್ಲಿ ಮಾರ್ಗದರ್ಶನ ನೀಡುತ್ತಾರೆ. ಅವರಿಗೆ ಬೇಕಾದ ಕಲಿಕೆಯ ಸಹಕಾರ ನೀಡುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗಂತ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಯಾವುದೇ ಮಗುವನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


ಅಧಿಕಾರಿಗಳ ಪ್ರಕಾರ, ಈ ಅಧಿಸೂಚನೆಯು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ 3,000 ಶಾಲೆಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಪೌರತ್ವ ರದ್ದಾಗುತ್ತಾ? ದ್ವಿಪೌರತ್ವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟ ಕೋರ್ಟ್​

ಶಾಲಾ ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ಮಾಡಬಹುದು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಈಗಾಗಲೇ ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈ ಎರಡು ವರ್ಗಗಳಿಗೆ ನೋ ಡಿಟೆನ್ಷನ್ ನೀತಿಯನ್ನು ತೆಗೆದುಹಾಕಿವೆ. ಹರಿಯಾಣ ಮತ್ತು ಪುದುಚೇರಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us