GATE 2022: ಮುಂದೂಡಿಕೆ ಅರ್ಜಿ ತಿರಸ್ಕೃತಗೊಳಿಸಿದ ಸುಪ್ರೀಂಕೋರ್ಟ್​; ಗೇಟ್​ ಪರೀಕ್ಷೆ ಇಂದಿನಿಂದಲೇ ಪ್ರಾರಂಭ

| Updated By: Lakshmi Hegde

Updated on: Feb 05, 2022 | 10:21 AM

ಗೇಟ್​ ಎಂಬುದು, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮತ್ತು ಕೆಲವು ಸಾರ್ವಜನಿಕ ವಲಯದ ಕಂಪನಿಗಳ ನೇಮಕಾತಿಗಾಗಿ ಅವಶ್ಯಕವಾಗಿರುವ ಪ್ರಾಥಮಿಕ ಹಂತದ ಪರೀಕ್ಷೆಯಾಗಿದೆ.

GATE 2022: ಮುಂದೂಡಿಕೆ ಅರ್ಜಿ ತಿರಸ್ಕೃತಗೊಳಿಸಿದ ಸುಪ್ರೀಂಕೋರ್ಟ್​; ಗೇಟ್​ ಪರೀಕ್ಷೆ ಇಂದಿನಿಂದಲೇ ಪ್ರಾರಂಭ
ಸಾಂಕೇತಿಕ ಚಿತ್ರ
Follow us on

ಇಂಜಿನಿಯರಿಂಗ್​ ಓದಿದವರಿಗೆ ಅತಿ ಮುಖ್ಯ ಪರೀಕ್ಷೆಯಾಗಿರುವ ಗೇಟ್​ (ಗ್ರಾಜ್ಯುವೇಟ್​​ ಆಪ್ಟಿಟ್ಯೂಡ್​ ಟೆಸ್ಟ್​ ಇನ್​ ಇಂಜಿನಿಯರಿಂಗ್​ ಎಕ್ಸಾಮ್-Graduate Aptitude Test in Engineering Exam, 2022​) -2022 ಇಂದಿನಿಂದ  (ಫೆ.5) ಪ್ರಾರಂಭವಾಗಲಿದೆ. ಗೇಟ್​ (GATE) ಪರೀಕ್ಷೆಯನ್ನು ಮುಂದೂಡಬೇಕು ಎಂದು ಸುಪ್ರೀಂಕೋರ್ಟ್​ಗೆ (Supreme Court) ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಇಂದಿನಿಂದ ಪರೀಕ್ಷೆ ನಡೆಯಲಿದೆ. ಇದು ರಾಷ್ಟ್ರ ಮಟ್ಟದ ಪರೀಕ್ಷೆಯಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದಡಿಯಲ್ಲಿ ಬರುವ ರಾಷ್ಟ್ರೀಯ ಸಮನ್ವಯ ಮಂಡಳಿ ಪರವಾಗಿ, ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್​(IISc) ಮತ್ತು ಬಾಂಬೆ, ದೆಹಲಿ, ಗುವಾಹಟಿ, ಕಾನ್ಪುರ, ಖರಗ್‌ಪುರ, ಮದ್ರಾಸ್ ಮತ್ತು ರೂರ್ಕಿಯ ಇಂಡಿಯನ್​ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ (IITs) ಜಂಟಿಯಾಗಿ ಈ ಪರೀಕ್ಷೆಯನ್ನು ನಡೆಸುತ್ತವೆ.  ಅಂದಹಾಗೇ ಗೇಟ್ ಪರೀಕ್ಷೆ ಫೆ.5, 6, 12 ಮತ್ತು 13ರಂದು ನಡೆಯಲಿದೆ. 

ಗೇಟ್​ ಪರೀಕ್ಷೆಯಲ್ಲಿ ಕಂಪ್ಯೂಟರ್ ಆಧಾರಿತ ಟೆಸ್ಟ್​ ಎರಡು ಶಿಫ್ಟ್​​ಗಳಲ್ಲಿ ನಡೆಯಲಿದೆ. ಮೊದಲು ಬೆಳಗ್ಗೆ 9 ರಿಂದ ಮಧ್ಯಾಹ್ನ 12ಗಂಟೆವರೆಗೆ ಮತ್ತು ಎರಡನೇ ಶಿಫ್ಟ್​​ನಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಇರಲಿದೆ. ಇನ್ನು ಪರೀಕ್ಷಾರ್ಥಿಗಳು ಪರೀಕ್ಷಾ ಸಮಯಕ್ಕಿಂತಲೂ 90 ನಿಮಿಷ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಲಾಗಿದೆ. ಪ್ರವೇಶ ಪತ್ರ ತರುವುದು ಕಡ್ಡಾಯ. ದೇಶಾದ್ಯಂತ ಕೊರೊನಾ ವೈರಸ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಫೇಸ್​ಮಾಸ್ಕ್​ ಧರಿಸಿಯೇ ಬರಬೇಕು. ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದು ಹೇಳಲಾಗಿದ್ದು, ಪರೀಕ್ಷಾ ಕೇಂದ್ರಗಳನ್ನೂ ಸ್ಯಾನಿಟೈಸ್ ಮಾಡಲಾಗುತ್ತದೆ.

ಗೇಟ್​ ಎಂಬುದು, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮತ್ತು ಕೆಲವು ಸಾರ್ವಜನಿಕ ವಲಯದ ಕಂಪನಿಗಳ ನೇಮಕಾತಿಗಾಗಿ ಅವಶ್ಯಕವಾಗಿರುವ ಪ್ರಾಥಮಿಕ ಹಂತದ ಪರೀಕ್ಷೆಯಾಗಿದೆ. ಇಂಜಿನಿಯರಿಂಗ್ ಮತ್ತು ವಿಜ್ಞಾನದಲ್ಲಿ ಇರುವ ವಿವಿಧ ಪದವಿ ಪೂರ್ವ ವಿಷಯಗಳ ಸಮಗ್ರ ತಿಳುವಳಿಕೆಗೆ ಗೇಟ್ ಸಹಾಯಕ. ಆದರೆ ದೇಶದಲ್ಲೀಗ ಕೊರೊನಾ ಮೂರನೇ ಅಲೆ ಹೆಚ್ಚಳವಾಗಿದೆ. ಈ ಕಾರಣಕ್ಕೆ ಗೇಟ್ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೆಲವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ನೇತೃತ್ವದ ಪೀಠ, ಇದೀಗ ದೇಶದಲ್ಲಿ ಎಲ್ಲ ಕೆಲಸಗಳೂ ಸಹಜವಾಗಿ ಶುರುವಾಗುತ್ತಿವೆ. ವೃತ್ತಿ ಜೀವನದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಸಾಧ್ಯವಿಲ್ಲ. ಇದು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ನೀತಿ, ನಿಯಮವಾಗಿದೆ. ಅಲ್ಲಿನ ತಜ್ಞರು ಸಂಪೂರ್ಣವಾಗಿ ಪರೀಕ್ಷಿಸಿಯೇ ಪರೀಕ್ಷೆ ಆಯೋಜಿಸಿರುತ್ತಾರೆ. ನಾವೀಗ ಇದರಲ್ಲಿ ಹಸ್ತಕ್ಷೇಪ ಮಾಡುವುದು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗಲಿದೆ ಎಂದು ಹೇಳಿದೆ. ಅರ್ಜಿ ತಿರಸ್ಕೃತಗೊಂಡಿದ್ದರಿಂದ ಇಂದಿನಿಂದಲೇ ಗೇಟ್​ ಎಕ್ಸಾಮ್​ ಶುರುವಾಗಿದೆ.

ಇದನ್ನೂ ಓದಿ: ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್​, ಕೀರ್ತಿ; ‘ಸಲಗ’ ಸಕ್ಸಸ್​ ವೇದಿಕೆಯಲ್ಲಿ ‘ಹ್ಯಾಟ್ರಿಕ್​ ಹೀರೋ’

Published On - 9:11 am, Sat, 5 February 22