SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ

ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆಯನ್ನು ಮಹಾವೀರ ಜಯಂತಿ ಹಿನ್ನೆಲೆ ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಈ ನಡುವೆ, ಕನ್ನಡ ಸಂಘಟನೆಗಳು ತ್ರಿಭಾಷಾ ಸೂತ್ರ ವಿರೋಧಿಸಿ ಹಿಂದಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿವೆ. ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ಕೂಡ ನೀಡಿದೆ.

SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ
ಕನ್ನಡ ಸಂಘಟನೆ ಕಾರ್ಯಕರ್ತರು
Image Credit source: tv9 kannada
Edited By:

Updated on: Mar 27, 2026 | 4:29 PM

ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ ಎಸ್​​ಎಸ್​ಎಲ್​ಸಿ (SSLC) ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್​​ 31ಕ್ಕೆ ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶಿಸಿದೆ. ಇನ್ನೊಂದೆಡೆ ಹಿಂದಿ ಪರೀಕ್ಷಾ ವಿಚಾರವಾಗಿ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ಬರೆಯದೇ ಇದ್ದರೂ ಪಾಸ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಒಂದು ವೇಳೆ ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿದೆ ಎಚ್ಚರಿಕೆ ನೀಡಲಾಗಿದೆ.

ಮಹಾವೀರ ಜಯಂತಿಯ ಪ್ರಯುಕ್ತ, ಮಾರ್ಚ್ 30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಆದರೆ ಈ ಮಧ್ಯೆ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದು, ಜೊತೆಗೆ ಹಿಂದಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ: ಹಿಂದಿ ಅಂಕಕ್ಕೆ ಕೋಕ್

ಇನ್ನು ಈ ವಿಚಾರವಾಗಿ ಸಾರಾ ಗೋವಿಂದು, ಶಿವರಾಮೇಗೌಡ, ಮಂಜು ಸೇರಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಸಚಿವ ಮಧು ಬಂಗಾರಪ್ಪರನ್ನು ಭೇಟಿ ಮಾಡಲಾಗಿದ್ದು, ಹಿಂದಿ ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಪಾಸ್ ವಿತೌಟ್ ಹಿಂದಿ ಎಂಬ ನಿಯಮ‌ ಜಾರಿ ಮಾಡಿ. ಹಿಂದಿ ಪರೀಕ್ಷೆ ರದ್ದು ಮಾಡಿ, ಹಿಂದಿ ಹೇರಿಕೆ ಮಾಡಬೇಡಿ. ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಸಂಘಟನೆಗಳ ಎಚ್ಚರಿಕೆ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಲರ್ಟ್

ಕನ್ನಡ ಸಂಘಟನೆಗಳ ಎಚ್ಚರಿಕೆ ಹಿನ್ನೆಲೆ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಪರೀಕ್ಷೆ ದಿನ ಪೊಲೀಸ್ ಭದ್ರತೆ ಪಡೆಯಲು ಮುಂದಾಗಿದೆ. ಪರೀಕ್ಷೆ ಸಮಯದಲ್ಲಿ ತೊಂದರೆಯಾಗದಂತೆ ಭದ್ರತೆ ಒದಗಿಸುವಂತೆ ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪೊಲೀಸ್ ಭದ್ರತೆಗೆ ಮನವಿ ಮಾಡಲಾಗಿದೆ.

ಸಾರಾ ಗೋವಿಂದು ಹೇಳಿದ್ದಿಷ್ಟು 

ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿದ್ದು, ಸಿಎಂ, ಡಿಸಿಎಂ ಮತ್ತು ಶಿಕ್ಷಣ ಸಚಿವರಿಗೆ ಮೊದಲು ಧನ್ಯವಾದಗಳನ್ನು ತಿಳಿಸುತ್ತೇವೆ. ಹಲವು ವರ್ಷದಿಂದ ನಾವು ಹಿಂದಿ ಹೇರಿಕೆ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಕಳೆದ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದಾರೆ. ಅದಕ್ಕೂ ಮುಂಚೆಯೇ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದರು. ಇದೇ ವಿಚಾರವನ್ನಿಟ್ಟು ಸಿಎಂಗೂ ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸಹ ದ್ವಿಭಾಷಾ ನೀತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ಅದು ನೆರವೇರಿದೆ ಎಂದರು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us