ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ರಿತುಪರ್ಣಾ!

ಸಣ್ಣ ಸೋಲಿಗೇ ಹತಾಶರಾಗಿ, ಹೆತ್ತವರ ನಿರೀಕ್ಷೆ ಹುಸಿಯಾದಾಗ ಹೆದರಿ ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂದಿನ ವಿದ್ಯಾರ್ಥಿಗಳಿಗೆ ಋತುಪರ್ಣ ಎಂಬ ಹೆಣ್ಣು ಮಗಳ ಯಶೋಗಾಥೆ ಒಂದು ಕಣ್ತೆರೆಸುವ ಪಾಠವಾಗಿದೆ. ನೀಟ್ ಪರೀಕ್ಷೆಯಲ್ಲಿ ಅಂದುಕೊಂಡ ರ್ಯಾಂಕ್​ ಸಿಗದೇ ವೈದ್ಯಕೀಯ ಸೀಟಿನಿಂದ ವಂಚಿತರಾಗಿದ್ದ ಋತುಪರ್ಣ ಕೆ.ಎಸ್., ರೋಬೋಟಿಕ್ಸ್ ಎಂಜಿನಿಯರಿಂಗ್‌ಗೆ ಸೇರಿ ಹೊಸ ಹಾದಿ ಕಂಡುಕೊಂಡರು. ಜಗತ್ತಿನ ಪ್ರತಿಷ್ಠಿತ 'ರೋಲ್ಸ್ ರಾಯ್ಸ್' ನಲ್ಲಿ ವಾರ್ಷಿಕ 72.3 ಲಕ್ಷ ರೂ. ಭಾರಿ ಪ್ಯಾಕೇಜ್‌ನೊಂದಿಗೆ ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ರಿತುಪರ್ಣಾ!
ರಿತುಪರ್ಣಾ ಕೆ.ಎಸ್.
Image Credit source: Twitter

Updated on: Jun 26, 2026 | 4:16 PM

ಪ್ರತಿ ವರ್ಷ ದೇಶದಲ್ಲಿ ನೀಟ್ (NEET) ಅಥವಾ ಜೆಇಇ (JEE) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿಗಳಲ್ಲಿ ಆತಂಕದ ದೊಡ್ಡ ಅಲೆಯೇ ಎದ್ದಿರುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗದೇ ಹೋದಾಗ ತಮ್ಮ ಕನಸೆಲ್ಲ ಮುಗಿದುಹೋಯಿತು ಎಂದೆನಿಸುತ್ತದೆ. ದುರದೃಷ್ಟವಶಾತ್, ಸಮಾಜ ಮತ್ತು ಕುಟುಂಬದ ನಿರೀಕ್ಷೆ ಹುಸಿಯಾಗಿ, ನೋವು  ತಾಳಲಾರದೆ ಕೆಲವರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಕೈಹಾಕುತ್ತಿದ್ದಾರೆ. ಆದರೆ, ಕೇವಲ 20 ವರ್ಷದ ರಿತುಪರ್ಣಾ ಕೆ.ಎಸ್. ಇಡೀ ದೇಶವೇ ತಿರುಗಿ ನೋಡುವಂತಹ ಹೊಸ ಇತಿಹಾಸ ಬರೆದಿದ್ದಾರೆ. ಒಂದು ಪರೀಕ್ಷೆಯ ಅಂಕಗಳು ನಮ್ಮ ಇಡೀ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇವರೇ ಜೀವಂತ ಉದಾಹರಣೆ.

ನೀಟ್ ಪರೀಕ್ಷೆಯಲ್ಲಿ ಅಂದುಕೊಂಡ ರ್ಯಾಂಕ್ ಸಿಗದೇ ವೈದ್ಯಕೀಯ ಸೀಟಿನಿಂದ ವಂಚಿತರಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಡೂರು ಗ್ರಾಮದ ಈ ಹೆಣ್ಣುಮಗಳು, ಇಂದು ಯಾವುದೇ ಐಐಟಿ (IIT) ಅಥವಾ ದೇಶದ ದೊಡ್ಡ ಹೆಸರಾಂತ ಕಾಲೇಜಿನ ಹಣೆಪಟ್ಟಿ ಇಲ್ಲದೆಯೇ ಜಗತ್ತಿನ ಪ್ರತಿಷ್ಠಿತ ಏರೋಸ್ಪೇಸ್ ಕಂಪನಿ ‘ರೋಲ್ಸ್ ರಾಯ್ಸ್’ (Rolls-Royce) ನಲ್ಲಿ ವಾರ್ಷಿಕ 72.3 ಲಕ್ಷ ರೂ. ಭಾರಿ ಪ್ಯಾಕೇಜ್‌ನೊಂದಿಗೆ ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ವೈದ್ಯಕೀಯದ ಕನಸು ಭಗ್ನಗೊಂಡಾಗ ಧೃತಿಗೆಡದ ಛಲಗಾರ್ತಿ:

ಬಾಲ್ಯದಿಂದಲೂ ವೈದ್ಯೆಯಾಗಬೇಕೆಂದು ಕನಸು ಕಂಡಿದ್ದ ರಿತುಪರ್ಣಾ, ಪಿಯುಸಿ ನಂತರ ನೀಟ್ ಪರೀಕ್ಷೆಗಾಗಿ ಹಗಲಿರುಳು ಶ್ರಮಿಸಿದ್ದರು. ಆದರೆ ಫಲಿತಾಂಶ ಬಂದಾಗ ಸರ್ಕಾರಿ ವೈದ್ಯಕೀಯ ಸೀಟು ಕೈತಪ್ಪಿತ್ತು. ಆರಂಭದಲ್ಲಿ ತೀವ್ರ ನಿರಾಶೆಯಾದರೂ ಅವರು ಅಲ್ಲಿಗೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಹಾದಿಯನ್ನು ಬದಲಾಯಿಸಿದ ಅವರು, 2022ರ ಸಿಇಟಿ ಕೌನ್ಸೆಲಿಂಗ್ ಮೂಲಕ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ‘ರೊಬೊಟಿಕ್ಸ್ ಮತ್ತು ಆಟೊಮೇಷನ್’ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು. ಐಐಟಿ ಬ್ರ್ಯಾಂಡ್ ಇಲ್ಲದಿದ್ದರೂ, ಹೊಸದನ್ನು ಸಾಧಿಸಬೇಕೆಂಬ ಜಲವಂತಿಕೆ ಅವರಲ್ಲಿತ್ತು.

ರೈತರ ಸಂಕಷ್ಟಕ್ಕೆ ರೊಬೊಟಿಕ್ಸ್ ಪರಿಹಾರ:

ಗ್ರಾಮೀಣ ಭಾಗದಿಂದ ಬಂದ ರಿತುಪರ್ಣಾ ಅವರಿಗೆ ರೈತರ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಕಾಲೇಜು ಸೇರಿದ ಕೆಲವೇ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಸೇರಿ ಅಡಿಕೆ ತೋಟಗಳಲ್ಲಿ ಕೊಯ್ಲು ಮಾಡಲು ಮತ್ತು ಕೀಟನಾಶಕ ಸಿಂಪಡಿಸಲು ನೆರವಾಗುವ ‘ಸ್ವಯಂಚಾಲಿತ ರೊಬೊಟಿಕ್ ವ್ಯವಸ್ಥೆ’ (Automated Robotic System) ಯನ್ನು ಅಭಿವೃದ್ಧಿಪಡಿಸಿದರು. ಈ ಆವಿಷ್ಕಾರವು ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ INEX ಸ್ಪರ್ಧೆಯಲ್ಲಿ ಪ್ರಸ್ತುತಗೊಂಡು, ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿತು. ಈ ಅದ್ಭುತ ಪ್ರತಿಭೆಯನ್ನು ಗುರುತಿಸಿದ ಎನ್‌ಐಟಿಕೆ (NITK) ಸುರತ್ಕಲ್‌ನ ಸಂಶೋಧನಾ ತಂಡವು, ‘ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆ’ಯಂತಹ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಅವಕಾಶ ನೀಡಿತು.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ತಿರಸ್ಕಾರದಿಂದ ಜಾಗತಿಕ ಮನ್ನಣೆಯವರೆಗೆ, ರೋಲ್ಸ್ ರಾಯ್ಸ್ ಜರ್ನಿ:

ರಿತುಪರ್ಣಾ ಅವರ ರೋಲ್ಸ್ ರಾಯ್ಸ್ ಕಂಪನಿಯ ಜರ್ನಿ ಸುಲಭದ್ದಾಗಿರಲಿಲ್ಲ. ಇಂಟರ್ನ್‌ಶಿಪ್‌ಗಾಗಿ ರೋಲ್ಸ್ ರಾಯ್ಸ್‌ಗೆ ಅರ್ಜಿ ಸಲ್ಲಿಸಿದಾಗ, ಟೈರ್-3 (ಸಾಮಾನ್ಯ) ಕಾಲೇಜಿನ ವಿದ್ಯಾರ್ಥಿನಿ ಒಂದು ತಿಂಗಳಲ್ಲಿ ಕೊಟ್ಟ ಪ್ರಾಜೆಕ್ಟ್ ಮುಗಿಸಲು ಸಾಧ್ಯವೇ ಎಂದು ಕಂಪನಿಯ ಪ್ರತಿನಿಧಿಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ ರಿತುಪರ್ಣಾ, ಕಠಿಣವಾದ ಆ ಪ್ರಾಜೆಕ್ಟ್ ಅನ್ನು ಕೇವಲ ಒಂದೇ ವಾರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಕಂಪನಿಯ ಅಧಿಕಾರಿಗಳು ಬೆರಗಾಗುವಂತೆ ಮಾಡಿದರು.

ಮಧ್ಯರಾತ್ರಿಯ ಕಠಿಣ ಪರಿಶ್ರಮ:

ಅವರ ವೇಗ ಮತ್ತು ಪ್ರತಿಭೆಯನ್ನು ಮೆಚ್ಚಿದ ಕಂಪನಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿತು. ಸತತ 8 ತಿಂಗಳ ಕಾಲ ಕಾಲೇಜಿನ ಪಾಠಗಳ ಜೊತೆಗೆ, ದಿನಕ್ಕೆ ಕೇವಲ 4 ಗಂಟೆ ನಿದ್ರಿಸುತ್ತಾ, ಮಧ್ಯರಾತ್ರಿಯಿಂದ ಮುಂಜಾನೆ 6 ಗಂಟೆಯವರೆಗೆ ಶಿಫ್ಟ್‌ಗಳಲ್ಲಿ ಕೆಲಸ ಮಾಡಿ ಹಲವಾರು ಪ್ರಾಜೆಕ್ಟ್‌ಗಳನ್ನು ಮುಗಿಸಿದರು.

ಪ್ರತಿಭೆಗೆ ಸಿಕ್ಕ ಅಪ್ರತಿಮ ಗೌರವ:

ಡಿಸೆಂಬರ್ 2024 ರಲ್ಲಿ ಕಂಪನಿಯು ಆರಂಭದಲ್ಲಿ ಅವರಿಗೆ ವಾರ್ಷಿಕ 39.6 ಲಕ್ಷ ಸಂಬಳದ ಆಫರ್ ನೀಡಿತ್ತು. ಆದರೆ, ರೋಬೋಟ್ ಆಪರೇಟಿಂಗ್ ಸಿಸ್ಟಮ್ (ROS) ಮತ್ತು ಕಂಟ್ರೋಲ್ ಆಲ್ಗಾರಿದಮ್ಸ್‌ನಲ್ಲಿ ಅವರ ಅಸಾಧಾರಣ ಪ್ರತಿಭೆಯನ್ನು ಕಂಡು ಬೆರಗಾದ ರೋಲ್ಸ್ ರಾಯ್ಸ್, ಏಪ್ರಿಲ್ 2025 ರ ವೇಳೆಗೆ ಅವರ ಸಂಬಳವನ್ನು ಬರೋಬ್ಬರಿ 72.3 ಲಕ್ಷಕ್ಕೆ ಹೆಚ್ಚಿಸಿತು!

ಇಂದಿನ ಯುವ ಪೀಳಿಗೆಗೆ ಪ್ರಮುಖ ಸಂದೇಶ:

ಸಣ್ಣ ಸೋಲಿಗೇ ಹತಾಶರಾಗಿ, ಹೆತ್ತವರ ನಿರೀಕ್ಷೆಗಳಿಗೆ ಹೆದರಿ ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂದಿನ ವಿದ್ಯಾರ್ಥಿಗಳಿಗೆ ಋತುಪರ್ಣ ಅವರ ಈ ಯಶೋಗಾಥೆ ಒಂದು ಕಣ್ತೆರೆಸುವ ಪಾಠ.

ಮತ್ತಷ್ಟು ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: 

Published On - 4:06 pm, Fri, 26 June 26

Follow Us