SSLC Exam: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ಎಸ್ಎಸ್​ಎಲ್​​ಸಿ ತೃತೀಯ ಭಾಷೆಯಾದ ಹಿಂದಿ, ಕನ್ನಡ ಸೇರಿ 9 ಭಾಷೆಗಳಿಗೆ ಇನ್ಮುಂದೆ ಅಂಕಗಳ ಬದಲಾಗಿ ಗ್ರೇಡಿಂಗ್ ನೀಡಲಾಗುವುದು ಎಂದು ಸರ್ಕಾರ ನಿರ್ಧಾರ ಪ್ರಕಟಿಸಿದೆ. ಇದರಿಂದ ಒಟ್ಟು ಅಂಕಗಳು 525ಕ್ಕೆ ಇಳಿಕೆಯಾಗಲಿದ್ದು, ಪಾಸ್-ಫೇಲ್ ಪದ್ಧತಿಯನ್ನು ರದ್ದುಗೊಳಿಸಲಾಗಿದೆ. ಹಾಗಾದರೆ ಯಾವೆಲ್ಲ ಭಾಷೆಗಳು ತೃತೀಯ ಭಾಷೆ ಪಟ್ಟಿಯಲ್ಲಿವೆ? ಗ್ರೇಡ್ ಲೆಕ್ಕಾಚಾರ ಹೇಗೆ? ಮಾಹಿತಿ ಇಲ್ಲಿದೆ.

SSLC Exam: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Apr 08, 2026 | 11:50 AM

ಬೆಂಗಳೂರು, ಏಪ್ರಿಲ್ 8: ರಾಜ್ಯದ ಎಸ್ಎಸ್​ಎಲ್​​ಸಿ (SSLC) ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇತ್ತೀಚೆಗೆ ಕ್ರಾಂತಿಕಾರಿ ನಿರ್ಧಾರ ಪ್ರಕಟಿಸಿದ್ದಾರೆ. ಇನ್ಮುಂದೆ ಎಸ್ಎಸ್​ಎಲ್​​ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕ ಇರುವುದಿಲ್ಲ. ಕೇವಲ ಗ್ರೇಡಿಂಗ್ (Grading system) ವ್ಯವಸ್ಥೆ ಇರಲಿದೆ. ಅಲ್ಲದೆ, ಈ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಮುಖವಾಗಿ ಹಿಂದಿ ಹೇರಿಕೆ ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದರೂ, ತೃತೀಯ ಭಾಷೆಯಾಗಿ ಕನ್ನಡ ಕಲಿಯುವವರಿಗೂ ಇದು ಅನ್ವಯವಾಗುತ್ತದೆ!

ಕರ್ನಾಟಕದಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತ, ಉರ್ದು ಇತ್ಯಾದಿ ಬೇರೆ ಭಾಷೆ ಕಲಿಯುವವರಿಗೆ ಕನ್ನಡ ಮೂರನೇ ಭಾಷೆಯಾಗಿರುತ್ತದೆ. ಹಾಗಾದರೆ ರಾಜ್ಯದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಎಷ್ಟು ತೃತೀಯ ಭಾಷೆಗಳಿವೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಭಾಷೆಗಳು ತೃತೀಯ ಭಾಷೆ ಪಟ್ಟಿಯಲ್ಲಿವೆ?

2025-26ನೇ ಶೈಕ್ಷಣಿಕ ಸಾಲಿನಿಂದ ಕರ್ನಾಟಕ ಎಸ್ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಒಟ್ಟು 9 ಭಾಷೆಗಳನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅವುಗಳೆಂದರೆ;

  • ಹಿಂದಿ
  • ಕನ್ನಡ
  • ಇಂಗ್ಲಿಷ್
  • ಉರ್ದು
  • ಸಂಸ್ಕೃತ
  • ಕೊಂಕಣಿ
  • ತುಳು
  • ಮರಾಠಿ
  • ಅರೇಬಿಕ್

ಪರೀಕ್ಷಾ ಅಂಕಗಳ ಲೆಕ್ಕಾಚಾರ ಬದಲಾವಣೆ

ಈ ಮೊದಲು ಎಸ್ಎಸ್​ಎಲ್​​ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಇದರಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಹೊಸ ನಿಯಮದಂತೆ ತೃತೀಯ ಭಾಷೆಯ ಅಂಕಗಳನ್ನು ಅಂತಿಮ ಫಲಿತಾಂಶದ ಒಟ್ಟು ಮೊತ್ತಕ್ಕೆ ಪರಿಗಣಿಸುವುದಿಲ್ಲ. ಹೀಗಾಗಿ, ಇನ್ಮುಂದೆ ಒಟ್ಟು ಅಂಕಗಳ ಸಂಖ್ಯೆ 525ಕ್ಕೆ ಇಳಿಕೆಯಾಗಲಿದೆ. ಈ ಭಾಷೆಗೆ ಬದಲಾಗಿ ಎ, ಬಿ, ಸಿ, ಡಿ ಎಂಬ ಗ್ರೇಡ್‌ಗಳನ್ನು ನೀಡಲಾಗುತ್ತದೆ.

ಗ್ರೇಡ್ ನಿರ್ಣಯ ಹೇಗೆ?

ಸದ್ಯ, ಎ, ಬಿ, ಸಿ, ಡಿ ಗ್ರೇಡ್ ನಿರ್ಣಯಿಸುವ ಬಗೆ ಹೇಗೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Wed, 8 April 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us