
ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC (ನಾಗರಿಕ ಸೇವೆಗಳ ಪರೀಕ್ಷೆ) ಉತ್ತೀರ್ಣರಾಗುವುದು ಲಕ್ಷಾಂತರರ ಜನರ ಕನಸು. ಈ ಪರೀಕ್ಷೆಯಲ್ಲಿ ಗೆಲ್ಲಲು ದುಬಾರಿ ತರಬೇತಿ ಸಂಸ್ಥೆಗಳು ಹಾಗೂ ಲಕ್ಷಾಂತರ ರೂಪಾಯಿ ಹಣ ಬೇಕೇಬೇಕು ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಆದರೆ, ಸರಿಯಾದ ಯೋಜನೆ, ಕಟ್ಟುನಿಟ್ಟಾದ ಶಿಸ್ತು ಮತ್ತು ಸಮರ್ಪಣಾ ಮನೋಭಾವವಿದ್ದರೆ ಯಾವುದೇ ಕೋಚಿಂಗ್ ಇಲ್ಲದೆಯೂ ಇತಿಹಾಸ ಸೃಷ್ಟಿಸಬಹುದು ಎಂದು ಮಹಾರಾಷ್ಟ್ರದ ಯುವ ಅಧಿಕಾರಿ ಅಭಿಜೀತ್ ಪಾಟೀಲ್ ಸಾಬೀತುಪಡಿಸಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 470ನೇ ಶ್ರೇಣಿ (AIR 470) ಪಡೆಯುವ ಮೂಲಕ ಅವರು IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪ್ರದೇಶದವರಾದ ಅಭಿಜೀತ್ ಪಾಟೀಲ್ ಬಾಲ್ಯದಿಂದಲೂ ಶೈಕ್ಷಣಿಕವಾಗಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಇವರ ತಂದೆ ತುಳಸಿರಾಮ್ ಪಾಟೀಲ್ ಅವರು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಲ್ಲಿ ಮುಖ್ಯ ಲೆಕ್ಕಪರಿಶೋಧಕರಾಗಿ ಹಾಗೂ ತಾಯಿ ಮಹಾರಾಷ್ಟ್ರ ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಇಂತಹದೊಂದು ಪ್ರಬುದ್ಧ ಕೌಟುಂಬಿಕ ವಾತಾವರಣವೇ ಅಭಿಜೀತ್ ಅವರ ಯಶಸ್ಸಿಗೆ ಭದ್ರವಾದ ಅಡಿಪಾಯವಾಯಿತು.
ಅಭಿಜೀತ್ ಅವರು ಬಿ.ಟೆಕ್ ಎಂಜಿನಿಯರಿಂಗ್ ಪದವೀಧರರು. ಆರಂಭದಲ್ಲಿ ಅವರಿಗೆ ನಾಗರಿಕ ಸೇವೆಗಳಿಗೆ ಸೇರಬೇಕು ಅಥವಾ ದೇಶದ ಅತ್ಯುನ್ನತ ಪರೀಕ್ಷೆ ಬರೆಯಬೇಕು ಎಂಬ ಯಾವುದೇ ನಿರ್ದಿಷ್ಟ ಯೋಜನೆ ಇರಲಿಲ್ಲ. ಆದರೆ, ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಲ್ಲಿ ಯೂಟ್ಯೂಬ್ನಲ್ಲಿ ಯುವ ಯುಪಿಎಸ್ಸಿ ಟಾಪರ್ ಒಬ್ಬರ ಸಂದರ್ಶನದ ವೀಡಿಯೋ ನೋಡಿದ ತಕ್ಷಣ ಅವರ ಆಲೋಚನೆ ಸಂಪೂರ್ಣವಾಗಿ ಬದಲಾಯಿತು. ನಾಗರಿಕ ಅಧಿಕಾರಿಗಳು ಸಮಾಜದ ಮೇಲೆ ಬೀರುವ ಸಕಾರಾತ್ಮಕ ಪ್ರಭಾವ ಮತ್ತು ಅವರಿಗಿರುವ ಜವಾಬ್ದಾರಿಗಳಿಂದ ಪ್ರೇರಿತರಾದ ಅಭಿಜೀತ್, ತಾವೂ ಒಬ್ಬ ಐಪಿಎಸ್ ಅಧಿಕಾರಿಯಾಗಬೇಕೆಂದು ಆ ಕ್ಷಣದಲ್ಲೇ ದೃಢ ನಿರ್ಧಾರ ಮಾಡಿದರು. ಆ ನಿರ್ಧಾರದ ನಂತರ ಅವರು ಎಂದೂ ಹಿಂತಿರುಗಿ ನೋಡಲಿಲ್ಲ. ತಮ್ಮ ಕಾಲೇಜಿನ ಕೊನೆಯ ಸೆಮಿಸ್ಟರ್ ಫಲಿತಾಂಶ ಬರುವ ಮೊದಲೇ ಅವರು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು.
ಇಂದಿನ ದಿನಗಳಲ್ಲಿ UPSC ತರಬೇತಿಗಾಗಿ ಲಕ್ಷಾಂತರ ರೂಪಾಯಿ ಸುರಿಯುವವರ ನಡುವೆ, ಅಭಿಜೀತ್ ಕೇವಲ NCERT ಪಠ್ಯಪುಸ್ತಕಗಳು, ಗೂಗಲ್ ಮತ್ತು ಯೂಟ್ಯೂಬ್ನಂತಹ ಉಚಿತ ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಮನೆಯಲ್ಲೇ ಓದಿ ದೇಶಕ್ಕೆ ಮಾದರಿಯಾಗಿದ್ದಾರೆ.
ಅಭಿಜೀತ್ ಪಾಟೀಲ್ ಅವರ ಯಶಸ್ಸಿನ ಅಸಲಿ ರಹಸ್ಯ ಇರುವುದು ಅವರ ಶಿಸ್ತಿನ ದಿನಚರಿಯಲ್ಲಿ. ಅವರು ಸುಮಾರು ಎಂಟು ತಿಂಗಳ ಕಾಲ ದಿನಕ್ಕೆ ಕಟ್ಟುನಿಟ್ಟಾಗಿ 8 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಿದರು. ಯಾವುದೇ ಕೋಚಿಂಗ್ ಸೆಂಟರ್ ಮೆಟ್ಟಿಲು ಹತ್ತದಿದ್ದರೂ, ತಮ್ಮ ಗುರಿಯತ್ತ ಮಾತ್ರ ಗಮನ ನೆಟ್ಟಿದ್ದರು. ದಿನಕ್ಕೆ 15-18 ಗಂಟೆಗಳು ಓದುವುದಕ್ಕಿಂತ, ಓದುವ 8 ಗಂಟೆಗಳ ಅವಧಿಯನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಅವರು ತೋರಿಸಿಕೊಟ್ಟರು. ಈ ನಿರಂತರ ಪರಿಶ್ರಮದ ಫಲವಾಗಿ, ಕೇವಲ 22ನೇ ವಯಸ್ಸಿಗೆ ಅವರು ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ತಮ್ಮ ಯಶಸ್ಸಿನ ಪಯಣದ ಆಧಾರದ ಮೇಲೆ ಅಭಿಜೀತ್ ಪಾಟೀಲ್ ಮುಂಬರುವ ಅಭ್ಯರ್ಥಿಗಳಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಅಭಿಜೀತ್ ಪಾಟೀಲ್ ಅವರ ಈ ಯಶೋಗಾಥೆಯು ಒಂದು ಸತ್ಯವನ್ನು ಸಾರುತ್ತದೆ. ಯುಪಿಎಸ್ಸಿಯಲ್ಲಿ ಯಶಸ್ವಿಯಾಗಲು ದುಬಾರಿ ತರಬೇತಿಗಿಂತ ಕಠಿಣ ಪರಿಶ್ರಮ, ಶಿಸ್ತು ಮತ್ತು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡುವುದು ಮುಖ್ಯ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬ ಕೇವಲ ಸ್ವ-ಅಧ್ಯಯನದ (Self-Study) ಮೂಲಕ ದೇಶದ ಅತ್ಯಂತ ಪ್ರತಿಷ್ಠಿತ ಸೇವೆಯಾದ ಐಪಿಎಸ್ ತಲುಪಿರುವುದು ಇಂದಿನ ತಲೆಮಾರಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಸ್ಪೂರ್ತಿದಾಯಕವಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ