AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಾ ಇದೆ: ಗೆಲುವಿನ ಬಳಿಕ ಯೋಗೇಶ್ವರ್ ಮಾತು

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್ ಅವರು ಗೆಲುವಿಗೆ ಮತದಾರರಿಗೆ ಧನ್ಯವಾದ ಅರ್ಪಿಸಿದ್ದು, ದೇವೇಗೌಡ ಕುಟುಂಬದ ರಾಜಕೀಯ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಗೆಲುವು ಜೆಡಿಎಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.

ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಾ ಇದೆ: ಗೆಲುವಿನ ಬಳಿಕ ಯೋಗೇಶ್ವರ್ ಮಾತು
ಸಿಪಿ ಯೋಗೇಶ್ವರ
Ganapathi Sharma
|

Updated on: Nov 23, 2024 | 12:39 PM

Share

ಬೆಂಗಳೂರು, ನವೆಂಬರ್ 23: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಗೆಲುವು ದಾಖಲಿಸಿದ್ದಾರೆ. ಅತ್ತ ಜೆಡಿಎಸ್​​ನ ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲಾಗಿದೆ. ಇದರ ಬೆನ್ನಲ್ಲೇ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಮಗನನ್ನು ಬಲಿಕೊಟ್ಟರು ಎಂದು ಯೋಗೇಶ್ವರ್ ಟೀಕಿಸಿದರು.

ದೇವೇಗೌಡರು ದೈತ್ಯ ಶಕ್ತಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಈ ಕಾರಣದಿಂದ ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಈ ಚುನಾವಣೆ ಫಲಿತಾಂಶ ಜೆಡಿಎಸ್​​ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದರ ಸಂಕೇತ ಎಂದು ಯೋಗೇಶ್ವರ್ ಹೇಳಿದರು.

ಸೋಲಿಸಿದ್ದ ಡಿಕೆ ಸುರೇಶ್ ಬೆಂಬಲಕ್ಕೆ ಬಂದರು: ಯೋಗೇಶ್ವರ್ ಧನ್ಯವಾದ

ಡಿಕೆ ಸಹೋದರರ ಸಹಕಾರಕ್ಕೆ ಧನ್ಯವಾದ ಸಮರ್ಪಿಸಿದ ಯೋಗೇಶ್ವರ್, ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಮಂಜುನಾಥ್ ಪರ ಕೆಲಸ ಮಾಡಿದ್ದೆ, ಅದರಿಂದಾಗಿ ಡಿಕೆ ಸುರೇಶ್​ಗೆ ಸೋಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅದೇ ಡಿಕೆ ಸುರೇಶ್ ಹೆಗಲಿಗೆ ಹೆಗಲು ಕೊಟ್ಟು ನನ್ನನ್ನು ಗೆಲ್ಲಿಸಿದರು ಎಂದರು.

ದೇವೇಗೌಡರ ಕುಟುಂಬ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಜನಪರ ಕಾಳಜಿ ಇದ್ದಿದ್ದರೆ ಜನ ಬೆಂಬಲಿಸುತ್ತಿದ್ದರು. ಆದರೆ, ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಹಾಗಾಗಿ ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಬಿಎಸ್​ವೈ ಕುಟುಂಬದ ವಿರುದ್ಧವೂ ವಾಗ್ದಾಳಿ

ಬಿಎಸ್​ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧವೂ ಯೋಗೇಶ್ವರ್ ಕಿಡಿಕಾರಿದರು. ಹಿಂದೆ ಯಡಿಯೂರಪ್ಪನವರು ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗಿದ್ದೆ. ಅವರು ಕುಟುಂಬ ರಾಜಕಾರಣ ಸ್ವಾರ್ಥದಲ್ಲಿ ನನ್ನನ್ನು ಕಡೆಗಣಿಸಿದರು. ಅವರಿಗೆ ಸೂಕ್ತ ಉತ್ತರ ದೊರೆತಿದೆ ಎಂದರು.

ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶ; ಸಿಪಿ ಯೋಗೇಶ್ವರ್ ಗೆಲುವು, ಮೂರನೇ ಯತ್ನದಲ್ಲೂ ನಿಖಿಲ್​ಗೆ ಸೋಲು

ನನಗೆ ಚುನಾವಣೆ ಎಂಬುದು ಟಿ20 ಕ್ರಿಕೆಟ್ ಇದ್ದಂತೆ. ಒಮ್ಮೆ ಆ ಪಕ್ಷದಿಂದ ಮತ್ತೊಮ್ಮೆ ಈ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಆದರೆ, ಜನ ಕೈಹಿಡಿದಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಇದನ್ನೂ ಓದಿ: ಚುನಾವಣೆ ಫಲಿತಾಂಶದ ಲೈವ್ ಅಪ್​ಡೇಟ್ ಇಲ್ಲಿದೆ

ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ