AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP Manifesto: ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಮಹಿಳೆಯರಿಗೆ ಉಚಿತ ಬಸ್ ಪಾಸ್

ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ನಾಳೆ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡಿ ನಾಳೆ ಪ್ರಕಟಿಸುತ್ತೇವೆ ಅಂತ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

BJP Manifesto: ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಮಹಿಳೆಯರಿಗೆ ಉಚಿತ ಬಸ್ ಪಾಸ್
ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಜೆಪಿ ನಡ್ಡಾ
Rakesh Nayak Manchi
|

Updated on:Apr 30, 2023 | 8:59 PM

Share

ಬೆಂಗಳೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿಯ ಪ್ರಣಾಳಿಕೆ ನಾಳೆ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ (Congress) ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ಸಾಲುಸಾಲು ಉಚಿತ ಘೋಷಣೆಗಳನ್ನು ಮಾಡಿದೆ. ಇತ್ತ ಪಂಚರತ್ನ ಹೆಸರಿನಲ್ಲಿ ಜೆಡಿಎಸ್ (JDS) ರಾಜ್ಯ ಪ್ರವಾಸ ನಡೆಸುತ್ತಿದೆ. ಇದೀಗ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ, ನಾಳೆ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ (BJP Manifesto) ಮಾಡುತ್ತಿದೆ. ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.

ಈ ಬಗ್ಗೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಮಾತನಾಡಿದ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ. ನಾಳೆ ಈ ತೀರ್ಮಾನ ಪ್ರಕಟಿಸುತ್ತೇವೆ ಎಂದರು.

ಬಿಜೆಪಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ. ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಅನ್ನೋದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ನಾಯಕ ರಾಹುಲ್ ಗಾಂಧಿ, ನಮ್ಮ ನಾಯಕರು ಮೋದಿ, ಅಮಿತ್ ಶಾ. ಆ ರಾಹುಲ್ ಗಾಂಧಿ ಎಲ್ಲಿ? ಮೋದಿ, ಶಾ ಎಲ್ಲಿ? ಈ ಇಬ್ಬರು ನಾಯಕರ ಮುಂದೆ ರಾಹುಲ್ ನಿಲ್ಲುವುದಕ್ಕೆ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Modi Mysuru Road Show: ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ

ಮಾಜಿ ಸಿಎಂ ವಿರೇಂದ್ರ ಪಾಟೀಲರ ರಾಜೀನಾಮೆ ಕಾಂಗ್ರೆಸ್ ಪಡೆದಿತ್ತು. ರಾಜೀವ ಗಾಂಧಿ ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ‌ ಕೊಡಿ ಅಂತಾ ಹೇಳಿದ್ದರು. ಯಾವ ಅಪರಾಧಕ್ಕಾಗಿ ವಿರೇಂದ್ರ ಪಾಟೀಲರನ್ನು ಅಧಿಕಾರಿಂದ ಇಳಿಸಿದ್ದೀರಿ? ಇದಕ್ಕೆ ಕಾಂಗ್ರೆಸ್ ಉತ್ತರ ಕೊಡುತ್ತಾ? ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಸೋತು ನೆಲ‌ಕಚ್ಚಿದೆ. ಈ ಚುನಾವಣೆಯಲ್ಲಿ ಬಿಜೆಪಿ 130-140 ಸ್ಥಾನ ಗೆಲ್ಲುತ್ತದೆ, ಆ ಬಳಿಕ ಕಾಂಗ್ರೆಸ್ ದಿವಾಳಿ ಆಗುವುದಿದೆ ಎಂದರು.

18-20 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಕೊಟ್ಟಿದ್ದು ಯಡಿಯೂರಪ್ಪ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟಿದ್ದು ನಿಮ್ಮ ಯಡಿಯೂರಪ್ಪ, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದೂ ನಾನೇ. ದೇಶದ ಮಠ ಮಂದಿರಗಳ ಅಭಿವೃದ್ಧಿ ಕೆಲಸ ಮೋದಿ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ‌ಒತ್ತು ನೀಡಿದ್ದೇವೆ. ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದು ಮೋದಿ. ಇಂತಹ ಮೋದಿಯವರ ಬಗ್ಗೆ ಅಲ್ಲೊಬ್ಬ ಇಲ್ಲೊಬ್ಬ ಹಗುರವಾಗಿ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆಯಂಥ ಹಿರಿಯರು ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇಡೀ ವಿಶ್ವವೇ ಅಚ್ಚರಿಯಿಂದ ಮೋದಿಯವರನ್ನು ನೋಡುತ್ತಿದೆ. ಅವರು ವಿಶ್ವದ ನಾಯಕರಾಗುತ್ತಿದ್ದಾರೆ. ಅಂತವರ ಬಗ್ಗೆ ಕಾಂಗ್ರೆಸ್ ಹಗುರವಾಗಿ ಮಾತನಾಡುತ್ತಿದೆ. ಇದಕ್ಕೆ ಜನರೇ ಉತ್ತರ ಕೊಡಬೇಕು. ಕಾಂಗ್ರೆಸ್ ಅಡ್ರೆಸ್ ಇಲ್ಲದೆ ಓಡಬೇಕು. ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ಏಜೆಂಟರು ಓಡುವಂತಾಗಬೇಕು. ಆ ರೀತಿ ಜನ ಮತದಾನ ಮಾಡಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪ್ರಚಾರಾರ್ಥ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, 1709 ಕೋಟಿ ರೂ. ಅನುದಾನ ಬಿಜೆಪಿ ಅವಧಿಯಲ್ಲಿ ಧಾರವಾಡ ಗ್ರಾಮೀಣಕ್ಕೆ ನೀಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Sun, 30 April 23