Belagavi Politics: 18 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ: ಬಂಡಾಯವೆದ್ದ 8 ಕ್ಷೇತ್ರದ ಆಕಾಂಕ್ಷಿಗಳು

|

Updated on: Apr 12, 2023 | 8:25 AM

ಬಿಜೆಪಿ ನಿನ್ನೆ (ಏ.11) ರಾತ್ರಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಗೆ ಟಿಕೆಟ್​ ಹಂಚಿಕೆ ಮಾಡಿದೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್ ಕೈ​ ತಪ್ಪಿದ್ದು, ಇವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Belagavi Politics: 18 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ: ಬಂಡಾಯವೆದ್ದ 8 ಕ್ಷೇತ್ರದ ಆಕಾಂಕ್ಷಿಗಳು
ಮಾಜಿ ಡಿಸಿಎಂ ಲಕ್ಷಣ ಸವದಿ
Follow us on

ಬೆಳಗಾವಿ: ಸಕ್ಕರೆನಾಡು ಬೆಳಗಾವಿಯಲ್ಲಿ (Belagavi) 18 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಮೂರು ಪಕ್ಷಗಳು ಹವಣಿಸುತ್ತಿವೆ. ಸದ್ಯ ವಿಧಾನಸಭಾ ಚುನಾವಾಣೆ (Karnataka Assembly Election) ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳು ಬೆಳಗಾವಿ ಮೇಲೆ ಹದ್ದಿನ ಕಣ್ಣಿರಿಸಿವೆ. ಬಿಜೆಪಿ (BJP) ನಿನ್ನೆ (ಏ.11) ರಾತ್ರಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ 18 ಕ್ಷೇತ್ರಗಳಿಗೆ ಟಿಕೆಟ್​ ಹಂಚಿಕೆ ಮಾಡಿದೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi), ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್​ ತಪ್ಪಿದ್ದು, ಇವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಥಣಿ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಆಕಾಂಕ್ಷಿಗಳಿಗೆ ಟಿಕೆಟ್​ ಕೈ ತಪ್ಪಿದ್ದು, ಬಂಡಾಯ ಬಾವುಟ ಹಾರಿಸುವುದು ಬಹುತೇಕ ಖಚಿತವಾಗಿದೆ. ಅಥಣಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮೊದಲಿನಿಂದಲೂ ಟಿಕೆಟ್​ ನನಗೆ ನೀಡಬೇಕು ಎಂದು ಹೈಕಮಾಂಡ್​ ಮೇಲೆ ಒತ್ತಡ ಹೇರುತ್ತಿದ್ದು, ಟಿಕೆಟ್​ ಸಿಗದಿದ್ದರೇ ಬಂಡಾಯ ಏಳುವುದಾಗಿ ಪರೋಕ್ಷವಾಗಿ ಸೂಚನೆ ನೀಡಿದ್ದರು. ಈಗಾಗಲೆ ಕಾಂಗ್ರೆಸ್ ಸವದಿಗೆ ಗಾಳ ಹಾಕಿದ್ದು, ಕೈ ಸೇರ್ಪಡೆ ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಹೈಕಮಾಂಡ್​ ಬುಲಾವ್, ದೆಹಲಿಗೆ ಹೋಗುವ ಮುನ್ನ ಮಹತ್ವದ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್

ಯಮಕನಮರಡಿಯಲ್ಲಿ ಮಾರುತಿ ಅಷ್ಟಗಿಗೆ ಟಿಕೆಟ್​ ಕೈ ತಪ್ಪಿದೆ. ಬೆಳಗಾವಿ ಉತ್ತರದಲ್ಲಿ ಹಾಲಿ ಶಾಸಕ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣದಲ್ಲಿ ಸಂಜಯ್ ಪಾಟೀಲ್, ಖಾನಾಪುರದಲ್ಲಿ ಅರವಿಂದ ಪಾಟೀಲ್, ಬೈಲಹೊಂಗಲದಲ್ಲಿ ಡಾ.ವಿ.ಐ.ಪಾಟೀಲ್, ಸವದತ್ತಿಯಲ್ಲಿ ಬಸವರಾಜ ಪಟ್ಟಣಶೆಟ್ಟಿ, ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್​ ದೊರೆತಿಲ್ಲ. ಇವರೆಲ್ಲರೂ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಇನ್ನು ನಾಯಕರಿಗೆ ಟಿಕೆಟ್​ ಸಿಗದಿದ್ದಕ್ಕೆ ತಡರಾತ್ರಿಯಿಂದಲೇ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೆಳಗಾವಿ ಉತ್ತರ, ರಾಮದುರ್ಗ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ ಬೆಂಬಲಿಗರು ಇಂದೂ ಸಹ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ರಾತ್ರಿಯೇ ಮಹಾದೇವಪ್ಪ ಯಾದವಾಡ ಬೆಂಗಳೂರಿಗೆ ಆಗಮಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಸಕ ಅನಿಲ್ ಬೆನಕೆ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿ ಬೆಳಗಾವಿಯ ಚನ್ನಮ್ಮ ವೃತ್ತ ಹಾಗೂ ಸಂಸದೆ ಮಂಗಲ ಅಂಗಡಿ ಮನೆ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಯಮಕನಮರಡಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾರುತಿ ಅಷ್ಟಗಿ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದು, ‌ಮಧ್ಯರಾತ್ರಿ ಬೆಳಗಾವಿಯಲ್ಲಿ ಧರಣಿ ಕೂತಿದ್ದರು. ಸದ್ಯ ಬಿಜೆಪಿ ನಾಯಕರಿಗೆ ಬಂಡಾಯ ಶಮನ ಮಾಡೋದೇ ತಲೆ‌ನೋವಾಗಿದೆ.

ರಾಮದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದ ಚಿಕ್ಕರೇವಣ್ಣ ಅವರಿಗೆ ಕುರುಬ ಸಮುದಾಯದ ಕೋಟಾದಡಿ ಬಿಜೆಪಿ ಮಣೆ ಹಾಕಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಕೋಟಾದಡಿ ಡಾ.ರವಿ ಪಾಟೀಲ್‌ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

18 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ

ಹುಕ್ಕೇರಿ – ನಿಖಿಲ್ ಕತ್ತಿ, ಯಮಕನಮರಡಿ – ಬಸವರಾಜ ಹುಂದ್ರಿ, ಬೆಳಗಾವಿ ಉತ್ತರ – ಡಾ.ರವಿ ಪಾಟೀಲ್, ಬೆಳಗಾವಿ ಗ್ರಾಮೀಣ – ನಾಗೇಶ್ ಮನ್ನೋಳಕರ್, ಸವದತ್ತಿ – ಆನಂದ ಮಾಮನಿ, ರಾಮದುರ್ಗ – ಚಿಕ್ಕರೇವಣ್ಣ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 am, Wed, 12 April 23