Karnataka Assembly Election 2023: ಇಂದಿನಿಂದ ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ, ಅಭ್ಯರ್ಥಿಗಳ ಪರ ಮತಬೇಟೆ
ರಾಜ್ಯ ವಿಧಾನಸಭೆ ಚುನಾವಣೆಗೆ ಅಬ್ಬರದ ಪ್ರಚಾರ ಶುರುವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದಿನಿಂದ (ಏ.23) ಜನವಾಹಿನಿ ಹೆಸರಿನಲ್ಲಿ ಭರ್ಜರಿ ರೋಡ್ ಶೋ, ಸಮಾವೇಶಗಳನ್ನು ಪ್ರಾರಂಭಿಸಲಿದ್ದಾರೆ.

ಮುಖ್ಯಾಂಶಗಳು
- ರಾಜ್ಯ ವಿಧಾನಸಭೆ ಚುನಾವಣೆಗೆ ಅಬ್ಬರದ ಪ್ರಚಾರ ಶುರುವಾಗಿದೆ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದಿನಿಂದ (ಏ.23) ಜನವಾಹಿನಿ ಹೆಸರಿನಲ್ಲಿ ಭರ್ಜರಿ ರೋಡ್ ಶೋ, ಸಮಾವೇಶಗಳನ್ನು ಪ್ರಾರಂಭಿಸಲಿದ್ದಾರೆ.
- ಸಿಎಂ ಬೊಮ್ಮಾಯಿಯವರು ಒಂದೇ ದಿನ 11 ವಿಧಾಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಅಬ್ಬರದ ಪ್ರಚಾರ ಶುರುವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (CM Basavaraj Bommai) ಇಂದಿನಿಂದ (ಏ.23) ಜನವಾಹಿನಿ ಹೆಸರಿನಲ್ಲಿ ಭರ್ಜರಿ ರೋಡ್ ಶೋ, ಸಮಾವೇಶಗಳನ್ನು ಪ್ರಾರಂಭಿಸಲಿದ್ದಾರೆ. ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಸಿಎಂ ಬೊಮ್ಮಾಯಿ ರೋಡ್ಶೋ ಆರಂಭಿಸಲಿದ್ದಾರೆ. ಸಿಎಂ ಬೊಮ್ಮಾಯಿಯವರು ಒಂದೇ ದಿನ 11 ವಿಧಾಸಭಾ ಕ್ಷೇತ್ರಗಳಲ್ಲಿ (Assembly Constituency) ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
ಸಿಎಂ ಬೊಮ್ಮಾಯಿ ರೋಡ್ ಶೋ, ಸಮಾವೇಶ ವೇಳಾಪಟ್ಟಿ
ಬೆಳಗ್ಗೆ 9.45 ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಮೂರ್ತಿಗೆ ಮಾಲಾರ್ಪಣೆ, ಬೆಳಿಗ್ಗೆ 11ಕ್ಕೆ ಯಲಹಂಕದಲ್ಲಿ ರೋಡ್ಶೋ ಮತ್ತು ಸಾರ್ವಜನಿಕ ಸಭೆ, 11.30ಕ್ಕೆ ದೊಡ್ಡಬಳ್ಳಾಪುರ, ಮಧ್ಯಾಹ್ನ 12.30ಕ್ಕೆ ನೆಲಮಂಗಲ, 1.30ಕ್ಕೆ ದಾಬಸ್ ಪೇಟೆ, 2.15ಕ್ಕೆ ಗೂಳೂರು, 3.00 ಗಂಟೆಗೆ ತುಮಕೂರು ನಗರ, 4 ಗಂಟೆಗೆ ಗುಬ್ಬಿ, ಸಂಜೆ 5.00 ಗಂಟೆಗೆ ಕೆ.ಬಿ. ಕ್ರಾಸ್, 6.00 ಗಂಟೆಗೆ ತಿಪಟೂರು, 7.00 ಗಂಟೆಗೆ ಅರಸೀಕೆರೆ, ರಾತ್ರಿ 7.45ಕ್ಕೆ ಬಾಣಾವರ, 8.15ಕ್ಕೆ ಕಡೂರುನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ರಾತ್ರಿ 9.15 ಚಿಕ್ಕಮಗಳೂರು ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನ ವರುಣಾದಲ್ಲಿ ಮುಗಿಸಲು ಕಾಂಗ್ರೆಸ್ನವರು ಹುನ್ನಾರ ಮಾಡಿದ್ದಾರೆಂದು ಜಗತ್ತಿಗೆ ಗೊತ್ತಿದೆ: ಸಿಎಂ ಬೊಮ್ಮಾಯಿ
ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Sun, 23 April 23



