Karnataka Election; ದಾಖಲೆ ಇಲ್ಲದ ಲಕ್ಷ ಲಕ್ಷ ನಗದು, ಚಿನ್ನ ವಶ; ಇಂದು ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ಕಿತು? ಇಲ್ಲಿದೆ ನೋಡಿ

|

Updated on: Apr 04, 2023 | 5:08 PM

ಚುನಾವಣಾಧಿಕಾರಿಗಳು ರಾಜ್ಯದ ಹಲವೆಡೆ ಕಾರ್ಯಾಚರಣೆ ನಡೆಸಿ ಲಕ್ಷ ಲಕ್ಷ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಏನೇನು ಸಿಕ್ಕಿತು ಎಂಬ ವಿವರ ಇಲ್ಲಿದೆ.

Karnataka Election; ದಾಖಲೆ ಇಲ್ಲದ ಲಕ್ಷ ಲಕ್ಷ ನಗದು, ಚಿನ್ನ ವಶ; ಇಂದು ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ಕಿತು? ಇಲ್ಲಿದೆ ನೋಡಿ
ಚಿನ್ನಹಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿರುವ ಚಿನ್ನದ ಮೂಗುತಿಗಳು
Follow us on

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election) ಸಮೀಪಿಸುತ್ತಿರುವಂತೆಯೇ ರಾಜ್ಯದ ಹಲವೆಡೆ ಮತದಾರರಿಗೆ ಹಂಚಲು ಕೊಂಡೊಯ್ಯಲಾಗುತ್ತಿರುವ ಲಕ್ಷ ಲಕ್ಷ ರೂ. ನಗದು, ಚಿನ್ನಾಭರಣ, ಕುಕ್ಕರ್ ಸೇರಿದಂತೆ ಗೃಹ ಬಳಕೆಯ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಕಳೆದ ಆರು ದಿನಗಳ ಕಾರ್ಯಾಚರಣೆಯಲ್ಲಿ 47.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದರು. ಇದೀಗ ಮಂಗಳವಾರವೂ ಚುನಾವಣಾಧಿಕಾರಿಗಳು ರಾಜ್ಯದ ಹಲವೆಡೆ ಕಾರ್ಯಾಚರಣೆ ನಡೆಸಿ ಲಕ್ಷ ಲಕ್ಷ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಏನೇನು ಸಿಕ್ಕಿತು ಎಂಬ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರ; 24 ಚಿನ್ನದ ಮೂಗುತಿ ಜಪ್ತಿ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿನ್ನಹಳ್ಳಿಯಲ್ಲಿ ಮತದಾರರಿಗೆ ಹಂಚುತ್ತಿದ್ದ ವೇಳೆ ಚಿನ್ನದ ಮೂಗುತಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೈ ಟಿಕೆಟ್ ಆಕಾಂಕ್ಷಿ ರಾಜೀವ್ ಗೌಡರಿಂದ ಚಿನ್ನದ ಮೂಗುತಿ ವಿತರಣೆ ಮಾಡಲಾಗುತ್ತಿತ್ತು. ರಾಜೀವ್ ಗೌಡ ಪತ್ನಿ ಸಹನಾ ಚಿನ್ನದ ಮೂಗುತಿಗಳ ವಿತರಣೆ ಮಾಡುತ್ತಿದ್ದರು. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರದಲ್ಲಿ 5.5 ಲಕ್ಷ ನಗದು ವಶ

ಕೊಡಗು ಜಿಲ್ಲೆಯ ಕುಶಾಲನಗರ ಚೆಕ್ ಪೋಸ್ಟ್​​​ನಲ್ಲಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಪ್ರತ್ಯೇಕ 3 ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ನಗದನ್ನು ಬೈಕ್, ಟ್ರಕ್​ನಲ್ಲಿ ಸಾಗಿಸಲಾಗುತ್ತಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ: 6 ದಿನಗಳಲ್ಲಿ 47 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ಸೇರಿದಂತೆ 12 ಕೋಟಿಗೂ ಹೆಚ್ಚು ನಗದು ಜಪ್ತಿ

ಬಿಜೆಪಿಯ ಮುನಿರಾಜು ಮನೆ ಮೇಲೆ ದಾಳಿ

ಮತದಾರರಿಗೆ ಹಂಚಲು ಸೀರೆ, ಇತರ ಉಡುಗೊರೆ ಗಿಫ್ಟ್​ ತಂದಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದ ಕಾರಣ ಬೆಂಗಳೂರಿನ ಅಗ್ರಹಾರ ಬಡಾವಣೆಯಲ್ಲಿರುವ ಬಿಜೆಪಿ ಮುಖಂಡ ಮುನಿರಾಜು ಮನೆ ಹಾಗೂ ಮಳಿಗೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್, ಜಿಎಸ್​ಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸೀರೆ ಎಲ್ಲಿಂದ ತರಿಸಲಾಗಿದೆ, ಜಿಎಸ್​ಟಿ ರಶೀದಿ ಇದೆಯಾ ಎಂದು ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಪ್ರಶ್ನೆಗೆ ಮುನಿರಾಜು ಸಮರ್ಪಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಎಸ್​ಎಲ್​ವಿ ಎಂಟರ್​ಪ್ರೈಸಸ್​ ಎಂಬ ನೋಂದಾಯಿತ ಜಿಎಸ್​ಟಿಯಿದೆ. ಇದರಡಿ ಸೀರೆ ತಂದು ಮಾರಾಟ ಮಾಡುತ್ತೇವೆ. ಚುನಾವಣೆ ಉದ್ದೇಶಕ್ಕೆ ಸೀರೆಗಳನ್ನು ಶೇಖರಿಸಿಟ್ಟಿಲ್ಲವೆಂದು ಅವರು ಮಾಹಿತಿ ನೀಡಿದ್ದಾರೆ.

ವೋಟರ್​ ಐಡಿ ಸಂಬಂಧಿಸಿದ ಫಾರ್ಮ್​ ನಂಬರ್ 6 ಕೂಡ ದಾಳಿ ವೇಳೆ ಸಿಕ್ಕಿದೆ. ಇದಕ್ಕೆ ಕಾರಣ ನೀಡಿದ ಅವರು, ವೋಟರ್​ ಐಡಿ ಇಲ್ಲದವರಿಗೆ ಐಡಿ ಮಾಡಲು ಸಹಾಯ ಮಾಡುತ್ತೇವೆ. ನಾವೇ ಫಾರ್ಮ್ ನಂ. 6 ಭರ್ತಿ ಮಾಡಿ ಫೋಟೋ ಅಂಟಿಸಿಕೊಡುತ್ತೇವೆ. ಕಾನೂನು ಬಾಹಿರವಾಗಿ ಕೃತ್ಯವೆಸಗುತ್ತಿಲ್ಲ ಎಂದು ಮುನಿರಾಜು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Tue, 4 April 23