ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿರುವ ಸಿದ್ದರಾಮಯ್ಯ; ಪ್ರಧಾನಿ ಮೋದಿ ವ್ಯಂಗ್ಯ

‘ಜನರ ಭಾವನೆಗಳು ಏನು ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅದೇ ಕಾರಣಕ್ಕೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಗೆಲ್ಲಿಸಿರುವ ಜನರನ್ನು ತಿರಸ್ಕರಿಸಿ ಅವರು ಓಡಿ ಹೋಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿರುವ ಸಿದ್ದರಾಮಯ್ಯ; ಪ್ರಧಾನಿ ಮೋದಿ ವ್ಯಂಗ್ಯ
ಪ್ರಧಾನಿ ಮೋದಿ ಹಾಗೂ ಸಿದ್ದರಾಮಯ್ಯ

Updated on: May 06, 2023 | 5:13 PM

ಬಾದಾಮಿ: ‘ಜನರ ಭಾವನೆಗಳು ಏನು ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅದೇ ಕಾರಣಕ್ಕೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಗೆಲ್ಲಿಸಿರುವ ಜನರನ್ನು ತಿರಸ್ಕರಿಸಿ ಅವರು ಓಡಿ ಹೋಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಂಗ್ಯವಾಡಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯರನ್ನು ಜನ ಗೆಲ್ಲಿಸಿದರು. ಆದರೆ, ಅವರು ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಮೋದಿ ಟೀಕಿಸಿದರು. ಸಿದ್ದರಾಮಯ್ಯ ಅವರು ಈ ಬಾರಿ ಬಾದಾಮಿಯ ಬದಲಿಗೆ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಅವರು ಮತಯಾಚನೆ ಮಾಡಿದರು.

ಬೆಂಗಳೂರಿನಲ್ಲಿ ಜನತಾ ಜನಾರ್ದನನ ದರ್ಶನ ಮಾಡಿ ಬಂದಿರುವೆ. ಸುಮಾರು 25ಕ್ಕಿಂತ ಹೆಚ್ಚು ಕಿಲೋಮೀಟರ್​ ರೋಡ್​ಶೋ ಮಾಡಿ ಬಂದಿದ್ದೇನೆ. ವೃದ್ಧರು, ಮಹಿಳೆಯರು, ಮಕ್ಕಳು, ಉದ್ಯೋಗಿಗಳು ಆಗಮಿಸಿದ್ದರು. ಕರ್ನಾಟಕದ ಜನರು ನೀಡಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಒಂದೇ ಕೂಗು ಕೇಳಿಬರುತ್ತಿದೆ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂದು ಪ್ರಧಾನಿ ಮೋದಿ ಹೇಳಿದರು.

ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್​ 1 ಮಾಡುವ ಗುರಿಯಿದೆ. ಇದಕ್ಕಾಗಿ ಬಿಜೆಪಿಗೆ ಆಶೀರ್ವಾದಿಸಲು ಕೋರುವೆ. ಬಿಜೆಪಿಗೆ ಜನರ ಬೆಂಬಲ ಸಹಿಸಲಾಗದೆ ಕಾಂಗ್ರೆಸ್​ನವರು ಬೈಯ್ಯುತ್ತಿದ್ದಾರೆ. ಕಾಂಗ್ರೆಸ್​ನವರು ನನಗೆ, ಬಿಜೆಪಿಗೆ ಬೈದಷ್ಟು ಕಮಲ ಅರಳಲಿದೆ. ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣ ರಾಜಕಾರಣ ಮುಂದುವರಿದಿದೆ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: PM Modi Roadshow: ಬಿಜೆಪಿಯನ್ನು ಬೆಂಗಳೂರು ಬಯಸುತ್ತಿದೆ, ಸಾಕ್ಷಿ ಇಲ್ಲಿದೆ ನೋಡಿ; ಪ್ರಧಾನಿ ಮೋದಿ

ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸೋದ್ಯಕ್ಕೆ ಒತ್ತು ನೀಡಲಿದ್ದೇವೆ ಎಂದ ಮೋದಿ, ಭಾಷಣದಲ್ಲಿ ದಿ. ಇಬ್ರಾಹಿಂ ಸುತಾರ ಬಗ್ಗೆಯೂ ಪ್ರಸ್ತಾಪಿಸಿದರು. ಮೂಲಸೌಕರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಕಾಮಗಾರಿಗಳು ನಡೆಯುತ್ತಿವೆ. ಪಿಎಂ ವಿಶ್ವಕರ್ಮ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ಎಲ್​ಇಡಿ ಬಲ್ಬ್​​​ಗಳನ್ನು ವಿತರಣೆ ಮಾಡಿದೆ. ಕುಂಬಾರ, ಕಮ್ಮಾರ, ವಿಶ್ವಕರ್ಮ ಮತ್ತು ಅಕ್ಕಸಾಲಿಗರು ನಮ್ಮ ಶಕ್ತಿ. ಇಳಕಲ್‌ ಸೀರೆ, ಗುಳೇದಗುಡ್ಡದ ಖಣದ ಸೀರೆ ದೇಶದ ಗೌರವ. ಈ ಬಗ್ಗೆ ಕಾಂಗ್ರೆಸ್ ಎಂದೂ ಗಮನಹರಿಸುವ ಕೆಲಸ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಗುರುತಿಸಿ ಗೌರವಿಸಿದೆ ಎಂದು ಮೋದಿ ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Sat, 6 May 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us