Siddaramaiah: ನನ್ನನ್ನು ಸೋಲಿಸಲೆಂದೇ ವರುಣಾಕ್ಕೆ ಬಂದ ಬಿಎಲ್​ ಸಂತೋಷ್; ಸಿದ್ದರಾಮಯ್ಯ

|

Updated on: Apr 22, 2023 | 5:09 PM

ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬುದು ಬಿಜೆಪಿ ಉದ್ದೇಶ. ಅದಕ್ಕಾಗಿಯೇ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah: ನನ್ನನ್ನು ಸೋಲಿಸಲೆಂದೇ ವರುಣಾಕ್ಕೆ ಬಂದ ಬಿಎಲ್​ ಸಂತೋಷ್; ಸಿದ್ದರಾಮಯ್ಯ
ಸಿದ್ದರಾಮಯ್ಯ
Image Credit source: PTI
Follow us on

ಮೈಸೂರು: ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬುದು ಬಿಜೆಪಿ (BJP) ಉದ್ದೇಶ. ಅದಕ್ಕಾಗಿಯೇ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ (BL Santhosh) ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಠದ ಹೆಲಿಪ್ಯಾಡ್​ನಲ್ಲಿ ಶನಿವಾರ ಮಾತನಾಡಿದ ಅವರು, ವಿ. ಸೋಮಣ್ಣರನ್ನು ವರುಣಕ್ಕೆ ಕರೆತಂದು ನಿಲ್ಲಿಸಿರುವುದೇ ಸಂತೋಷ್​. ಸಂತೋಷ್ ಆರ್​ಎಸ್​ಎಸ್​ನ ವ್ಯಕ್ತಿ. ನನಗೆ ಅವರ ಬಗ್ಗೆ ವೈಯಕ್ತಿಕವಾಗಿ ದ್ವೇಷವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದಾಗ ಅಲ್ಲಿಗೂ ಬಂದಿದ್ದರು. ಈಗ ವರುಣಾ ಕ್ಷೇತ್ರಕ್ಕೆ ಬಂದು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ನನ್ನನ್ನು ಸೋಲಿಸಬೇಕೆಂದು ಬರುವ ಇವರು ಯಾರೂ ವರುಣಾ ಕ್ಷೇತ್ರದ ಮತದಾರರಲ್ಲ. ನನ್ನನ್ನು ಗೆಲ್ಲಿಸುವುದು ವರುಣಾ ವಿಧಾನಸಭಾ ಕ್ಷೇತ್ರದ ಮತದಾರರು. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ಅವರ ಕ್ಷೇತ್ರದಲ್ಲಿ ಗೆಲ್ಲಲಿ ಎಂದು ಸಿದ್ದರಾಮಯ್ಯ ಹೇಳಿದರು.

ಒಂದು ದಿನ ಮಾತ್ರ ವರುಣಾದಲ್ಲಿ ಪ್ರಚಾರ ಮಾಡುತ್ತೇನೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದೀಗ ವರುಣಾ ಕ್ಷೇತ್ರಕ್ಕೆ ತೆರಳಿದ್ದು ಶನಿವಾರ ಇಡೀ ದಿನ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ವಿಚಾರವಾಗಿ ಬಿಜೆಪಿಯೂ ಅವರನ್ನು ಟೀಕಿಸಿದೆ. ಸಿದ್ದರಾಮಯ್ಯಗೆ ಸೋಲಿನ ಭೀತಿ ಕಾಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ವರುಣಾ ಸೇರಿದಂತೆ ಮೈಸೂರಿನ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ನಡೆಸಿದ್ದು, ಪೈಪೋಟಿ ನೀಡಿದ್ದಾರೆ.

ಇದನ್ನೂ ಓದಿ: Varuna Constituency: ವರುಣಾ ಕ್ಷೇತ್ರ ಚಿತ್ರಣ; ಸಿದ್ದರಾಮಯ್ಯ ಅದೃಷ್ಟದ ಕ್ಷೇತ್ರ, ಸೋಮಣ್ಣಗೆ ಲಿಂಗಾಯತರ ಬಲ

ಕಳೆದ ಬಾರಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿರಲಿಲ್ಲ. ಈ ಕ್ಷೇತ್ರದಿಂದ 2008ರಲ್ಲಿ ಮತ್ತು 2013ರಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು. ಆದರೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಬಾದಾಮಿಯಲ್ಲಿ ಮಾತ್ರ ಗೆದ್ದಿದ್ದರು. ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿಯ ಎಲ್‌.ರೇವಣಸಿದ್ದಯ್ಯ ಅವರನ್ನು 18,827 ಮತಗಳಿಂದ ಮತ್ತು 2013ರಲ್ಲಿ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳಿಂದ ಸೋಲಿಸಿದ್ದರು. 2018ರಲ್ಲಿ ತಮ್ಮ ಪುತ್ರ ಯತೀಂದ್ರ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಯತೀಂದ್ರ ಅವರು ಬಿಜೆಪಿಯ ಟಿ ಬಸವರಾಜು ವಿರುದ್ಧ 58,816 ಮತಗಳಿಂದ ಗೆದ್ದಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ