ಸಿಎಂ ಆಯ್ಕೆ ಬಳಿಕ ಖಾತೆ ಕ್ಯಾತೆ ಶುರು: ಮತ್ತೆ ದಿಲ್ಲಿಗೆ ಡಿಕೆ ಶಿವಕುಮಾರ್-ಸಿದ್ದರಾಮಯ್ಯ

ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರನ್ನು ಎಐಸಿಸಿ ಆಯ್ಕೆ ಮಾಡಿದೆ. ಮೇ 20ರಂದು ಇಬ್ಬರು ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದ್ರೆ, ಇದೀಗ ಸಂಪುಟ ರಚನೆ ದೊಡ್ಡ ಸವಾಲ್ ಆಗಿದೆ.

ಸಿಎಂ ಆಯ್ಕೆ ಬಳಿಕ ಖಾತೆ ಕ್ಯಾತೆ ಶುರು: ಮತ್ತೆ ದಿಲ್ಲಿಗೆ ಡಿಕೆ ಶಿವಕುಮಾರ್-ಸಿದ್ದರಾಮಯ್ಯ
ಖರ್ಗೆ ಜೊತೆ ಸಿದ್ದು-ಡಿಕೆಶಿ
Follow us
|

Updated on:May 18, 2023 | 2:18 PM

ಬೆಂಗಳೂರು:  ಸಿದ್ದರಾಮಯ್ಯ ಅವರು ಕರ್ನಾಟಕ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಖುದ್ದು ಎಐಸಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರೊಂದಿಗೆ ಕರ್ನಾಟಕ ಸಿಎಂ ಯಾರು ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಆದ್ರೆ, ಇದೀಗ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ಸೇರಲು ಅರ್ಹತೆ ಹಾಗೂ ಲಾಬಿ ನಡೆಸಲು ಸಜ್ಜಾಗಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರು. ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಪ್ರಭಾವಶಾಲಿಯಾಗಿದ್ದ ಹಲವರು ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ, ಹಿರಿತನ ಹಾಗೂ ಅನುಭವ ಇರುವ ಘಟಾನುಘಟಿಗಳು ಸಹ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೊಸ ಮುಖ್ಯಮಂತ್ರಿಗೆ ದೊಡ್ಡ ಸವಾಲಾಗಲಿದೆ. ಏಕೆಂದರೆ, ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಅತ್ಯಂತ ಪ್ರಭಾವಶಾಲಿಗಳೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: New CM Of Karnataka: ಕೊನೆಗೂ ಸಿದ್ದರಾಮಯ್ಯಗೆ ಒಲಿದ ಸಿಎಂ ಪಟ್ಟ, ಡಿಕೆಶಿಗೆ ಡಿಸಿಎಂ, ಎಐಸಿಸಿಯಿಂದ ಅಧಿಕೃತ ಘೋಷಣೆ

ಇನ್ನು ಇಂದು(ಮೇ 18) ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಸಿಎಲ್​ಪಿ ನಾಯಕ ಆಯ್ಕೆ ಬಗ್ಗೆ ನಾಮಕಾವಸ್ಥೆ ರೀತಿಯಲ್ಲಿ ಆಯ್ಕೆ ನಡೆಯಲಿದೆ. ಬಳಿಕ ಕಾಂಗ್ರೆಸ್ ನಾಯಕರು, ರಾಜ್ಯಭವನಕ್ಕೆ ಭೇಟಿ ನೀಡಿ ಸಿಎಲ್​ಪಿ ನಾಯಕನ ಆಯ್ಕೆ ಬಗ್ಗೆ ರಾಜ್ಯಪಾಲರಿಗೆ ಎಐಸಿಸಿಯ ಪತ್ರ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ತದನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಮತ್ತೆ ನವದೆಹಲಿಗೆ ತೆರಳಲಿದ್ದಾರೆ.

ಹೌದು…ಸಿಎಂ ಆಯ್ಕೆ ಕಗ್ಗಂಟು ಬಗೆಹರಿದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ರಚನೆ ಆಯ್ಕೆ ಕಸರತ್ತು ನಡೆದಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗರು ತಮಗೆ ಸಚಿವ ಸ್ಥಾನ ಬೇಕೆಂದು ಪೈಪೋಟಿಗಿಳಿದಿದ್ದಾರೆ. ಅಲ್ಲದೇ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಹೈಕಮಾಂಡ್​ಗೆ ಸಂಪುಟ ರಚನೆ ಸವಾಲು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕುಳಿತು ಮಾತುಕತೆಗಳ ಮೂಲಕ ಬಗೆಹರಿಸಲು ನಾಳೆ(ಮೇ 19) ಮತ್ತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿ ತೆರಳಲಿದ್ದು, ವೇಳೆ ಪದಗ್ರಹಣ ಸಮಾರಂಭಕ್ಕೆ ಹೈಕಮಾಂಡ್ ನಾಯಕರಿಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಮ್ಮ-ತಮ್ಮ ಬೆಂಗಲಿಗರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು? ಯಾರಿಗೆ ಯಾವ ಖಾತೆ? ಎನ್ನುವ ಬಗ್ಗೆ ಹೈಕಮಾಂಡ್ ನಾಯಕ ಸಮ್ಮುಖದಲ್ಲಿ ಚರ್ಚೆ ನಡೆಸಲಿದ್ದಾರೆ.

ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಿಡಿದು ಕುಳಿತುಕೊಂಡಿದ್ದ ಡಿಕೆ ಶಿವಕುಮಾರ್​ ಉಪಮುಖ್ಯಮಂತ್ರಿ ಜೊತೆ ಪ್ರಬಲ ಎರಡು ಖಾತೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳುವ ಸಾಧ್ಯತೆಗಳಿವೆ. ಇನ್ನುಳಿದಂತೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಮ್ಮ ಬೆಂಬಲ ಶಾಸಕರಿಗೂ ಸಹ ಮುಖ್ಯ ಖಾತೆಗಳನ್ನು ಕೊಡಿಸಲು ಮತ್ತೊಂದು ಸುತ್ತಿನ ಕಾದಾಟಕ್ಕಿಳಿಯಲಿದ್ದಾರೆ. ಇನ್ನು ಹೈಕಮಾಂಡ್, ಜಾತಿವಾರು ಮತ್ತು ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಿಕೆ ಮಾಡಲು ಪ್ಲ್ಯಾನ ಮಾಡಿಕೊಂಡಿದೆ.

ಬೆಂಗಳೂರು ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಗೃಹ, ಬೃಹತ್ ಕೈಗಾರಿಕೆ, ಐಟಿ-ಬಿಟಿ, ಸಮಾಜ ಕಲ್ಯಾಣ ಸೇರಿದಂತೆ ಕೆಲ ಪ್ರಮುಖ ಖಾತೆಗಳಿಗೆ ಪೈಪೋಟಿ ನಡೆಯುವುದು ಸಾಮಾನ್ಯ. ಹಾಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಯಾವೆಲ್ಲ ಬೆಂಬಲಿಗರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

Published On - 2:09 pm, Thu, 18 May 23