ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈ ಸೋಲು ಖಚಿತ; ಮಟನ್ ಬಿರಿಯಾನಿ ಹಂಚಿ ಸಂಭ್ರಮಿಸಿದ ಡಿಎಂಕೆ

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇಡೀ ರಾಜ್ಯಾದ್ಯಂತ ಸಂಚರಿಸಿ ಬಿಜೆಪಿ ಪರವಾದ ಅಲೆ ಎಬ್ಬಿಸಲು ಪ್ರಯತ್ನಿಸಿದ್ದರು. ಅಲ್ಲದೆ, ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಕೂಡ ಆಗಿದ್ದ ಅವರು ತಮ್ಮದೇ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸುವುದು ಖಚಿತವಾಗಿದೆ. ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರೆಯುತ್ತದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿತ್ತು. ಆದರೆ, ಒಂದೇ ಒಂದು ಸ್ಥಾನವನ್ನು ಪಡೆಯಲು ಕೂಡ ಬಿಜೆಪಿಗೆ ಸಾಧ್ಯವಾಗಿಲ್ಲ.

ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈ ಸೋಲು ಖಚಿತ; ಮಟನ್ ಬಿರಿಯಾನಿ ಹಂಚಿ ಸಂಭ್ರಮಿಸಿದ ಡಿಎಂಕೆ
ಪ್ರಧಾನಿ ಮೋದಿ ಜೊತೆಗೆ ಅಣ್ಣಾಮಲೈ
Follow us
|

Updated on: Jun 04, 2024 | 5:52 PM

ಚೆನ್ನೈ: ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ (K Annamalai) ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ (Lok Sabha Elections) ಬಿಜೆಪಿ ಅಭ್ಯರ್ಥಿಯಾಗಿದ್ದರು. ಅವರು ಸೋಲನ್ನು ಅನುಭವಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಡಿಎಂಕೆ (DMK) ಮಟನ್ ಬಿರಿಯಾನಿ ಹಂಚಿ ಸಂಭ್ರಮಿಸಿದೆ. ಬಿಜೆಪಿಯ ಕೆ.ಅಣ್ಣಾಮಲೈ ಅವರು ಕೊಯಮತ್ತೂರು ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ ಅವರಿಗಿಂತ ಭಾರೀ ಅಂತರದಲ್ಲಿದ್ದಾರೆ. ಹೀಗಾಗಿ, ಗೆಲುವಿನ ವಿಶ್ವಾಸವನ್ನು ತೋರಿಸಲು ಡಿಎಂಕೆ ಪಕ್ಷವು ಮಟನ್ ಬಿರಿಯಾನಿ ಹಂಚುವ ಮೂಲಕ ಸಂಭ್ರಮವನ್ನು ಆಚರಿಸುತ್ತಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವು ಡಿಎಂಕೆ ಕಾರ್ಯಕರ್ತರು ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋವನ್ನು ನೇತುಹಾಕಿ ಮೆರವಣಿಗೆ ನಡೆಸುತ್ತಿರುವುದನ್ನು ನೋಡಬಹುದು. ಅಣ್ಣಾಮಲೈ ಅವರು ದಕ್ಷಿಣ ಬೆಂಗಳೂರಿನಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿದ್ದಾಗ ಅವರು ಕರ್ನಾಟಕದ ‘ಸಿಂಗಮ್’ ಅಥವಾ ‘ಸಿಂಹ’ ಎಂಬ ಬಿರುದನ್ನು ಪಡೆದಿದ್ದರು. ಇದನ್ನು ವಿರೋಧಿಸಿದ್ದ ತಮಿಳುನಾಡಿನ ಕೆಲವರು ಅಣ್ಣಾಮಲೈ ಸಿಂಹವಲ್ಲ ಆಡು ಎಂದು ಲೇವಡಿ ಮಾಡಿದ್ದರು. ಅದರ ಸೂಚ್ಯವಾಗಿ ಇದೀಗ ಆಡಿನ ಮೆರವಣಿಗೆ ಮಾಡಿದ ನಂತರ ಮಟನ್ ಬಿರಿಯಾನಿ ತಯಾರಿಸಿ ಹಂಚಲಾಗುತ್ತಿದೆ.

ಇದನ್ನೂ ಓದಿ: Exit Poll: ತಮಿಳುನಾಡಿನಲ್ಲಿ ಕೊನೆಗೂ ಬಿಜೆಪಿ ಖಾತೆ ಓಪನ್?; ಕೊಟ್ಟ ಕುದುರೆಯೇರಿ ಗೆದ್ದ ಅಣ್ಣಾಮಲೈ

ಇಸಿಐನ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನ ಕೊಯಮತ್ತೂರಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಅಭ್ಯರ್ಥಿಯಾಗಿದ್ದ ಗಣಪತಿ ರಾಜ್‌ಕುಮಾರ್ ಜೆ. ಅವರು ಒಟ್ಟು 1,81,000 ಮತಗಳೊಂದಿಗೆ ಎರಡನೇ ಸ್ಥಾನದಿಂದ ಪ್ರಸ್ತುತ ಸುಮಾರು 32,000 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಅವರ ಹಿಂದೆ ಕೆ.ಅಣ್ಣಾಮಲೈ ಒಟ್ಟು 1,48,000 ಮತಗಳನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ ಪ್ರತಿನಿಧಿ ಸಿಂಗೈ ಜಿ. ರಾಮಚಂದ್ರನ್ ಅವರು ಒಟ್ಟು 76,000 ಮತಗಳಿಂದ ಹಿಂದುಳಿದಿದ್ದಾರೆ. ಅಂತಿಮವಾಗಿ ನಾಲ್ಕನೇ ಸ್ಥಾನದಲ್ಲಿ ನಾಮ್ ತಮಿಳರ್ ಕಚ್ಚಿಯ ಪ್ರತಿನಿಧಿ ಕಲಾಮಣಿ ಜಗನಾಥನ್ ಅವರು 27,500 ಮತಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: Tamil Nadu: ತಮಿಳುನಾಡಿನಲ್ಲಿ ಇಂಡಿಯಾ ಬಣಕ್ಕೆ ಬಲ ತುಂಬಿದ ದ್ರಾವಿಡ ಶಕ್ತಿ; ಖಾತೆ ತೆರೆಯದ ಬಿಜೆಪಿ

ಕೊಯಮತ್ತೂರು ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಬಹುತೇಕ ಮಂದಿ 600 ಮತಗಳನ್ನು ಕೂಡ ತಲುಪಿಲ್ಲ. ವಿಚಿತ್ರವೆಂದರೆ ಇಂದು ಕೆ. ಅಣ್ಣಾಮಲೈ ಅವರ ಜನ್ಮದಿನವೂ ಹೌದು. ಬಿಜೆಪಿಯಲ್ಲಿ ಈ ಬಾರಿ ಗೆಲ್ಲುವ ಕುದುರೆಯ ಪಟ್ಟಿಯಲ್ಲಿದ್ದ ಅಣ್ಣಾಮಲೈ ತಮ್ಮ ಹುಟ್ಟುಹಬ್ಬದಂದೇ ಸೋಲಿನ ರುಚಿ ನೋಡುವಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ