ನಮ್ಮ ಗ್ಯಾರಂಟಿಗಳಿಂದ ವಿಕಸಿತ ಭಾರತದಲ್ಲಿ ಮುಖ್ಯ ಪಾತ್ರ ವಹಿಸಲಿದೆ ದೆಹಲಿ: ಗೆಲುವಿನ ಬಳಿಕ ಪ್ರಧಾನಿ ಮೋದಿ ಮಾತು

|

Updated on: Feb 08, 2025 | 3:40 PM

ಪ್ರಧಾನಿ ನರೇಂದ್ರ ಮೋದಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ದೆಹಲಿ ಜನತೆಗೆ ಧನ್ಯವಾದ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಸಂಜೆ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನಶಕ್ತಿಯೇ ಸರ್ವಶ್ರೇಷ್ಠ ಎಂದು ಮೋದಿ ಹೇಳಿದ್ದು, ದೆಹಲಿಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ನಮ್ಮ ಗ್ಯಾರಂಟಿಗಳಿಂದ ವಿಕಸಿತ ಭಾರತದಲ್ಲಿ ಮುಖ್ಯ ಪಾತ್ರ ವಹಿಸಲಿದೆ ದೆಹಲಿ: ಗೆಲುವಿನ ಬಳಿಕ ಪ್ರಧಾನಿ ಮೋದಿ ಮಾತು
ಪ್ರಧಾನಿ ಮೋದಿ
Follow us on

ನವದೆಹಲಿ, ಫೆಬ್ರವರಿ 8: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದೊರಕಿಸಿ ಕೊಟ್ಟಿದ್ದಕ್ಕಾಗಿ ದೆಹಲಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ, ದೆಹಲಿಯ ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಇಂದು ಸಂಜೆ 7 ಗಂಟೆಗೆ ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.

ದೆಹಲಿ ಗೆಲುವಿನ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಪ್ರಧಾನಿ ಮೋದಿ, ಜನಶಕ್ತಿಯೇ ಸರ್ವ ಶ್ರೇಷ್ಠ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಮೋದಿ ಸಂದೇಶವೇನು?

ಜನ ಶಕ್ತಿಯೇ ಸರ್ವಶ್ರೇಷ್ಠ. ಅಭಿವೃದ್ಧಿ ಗೆಲ್ಲುತ್ತದೆ, ಉತ್ತಮ ಆಡಳಿತ ಜಯಗಳಿಸುತ್ತದೆ. ಈ ಅಭೂತಪೂರ್ವ ಮತ್ತು ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ನನ್ನ ಪ್ರೀತಿಯ ಸಹೋದರಿಯರು ಮತ್ತು ಸಹೋದರರಿಗೆ ನಾನು ನಮಸ್ಕರಿಸುತ್ತೇನೆ. ಜನಾದೇಶಕ್ಕೆ ನಾವು ವಿನೀತರಾಗಿದ್ದೇವೆ ಮತ್ತು ಗೌರವಿಸುತ್ತೇವೆ ಎಂದು ಮೋದಿ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ದೆಹಲಿಯನ್ನು ಅಭಿವೃದ್ಧಿಪಡಿಸುವ, ಜನರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ನಮ್ಮ ಗ್ಯಾರಂಟಿಯಿಂದ, ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ದೆಹಲಿಯು ಪ್ರಧಾನ ಪಾತ್ರ ವಹಿಸುವಂತಾಗಲಿದೆ. ಈ ಬಗ್ಗೆ ನಾವು ಖಾತರಿ ನಿಡುತ್ತೇವೆ. ಇದುವೇ ನಮ್ಮ ಭರವಸೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಎಕ್ಸ್ ಸಂದೇಶ


ಸಂಜೆ 7.30ಕ್ಕೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ದೆಹಲಿಯ ಜನರು ಪ್ರಧಾನಿ ಮೋದಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ನಮಗೆ ಮತ್ತು ದೆಹಲಿ ಜನರಿಗೆ ಸಿಕ್ಕ ದೊಡ್ಡ ಗೆಲುವು. ಅವರು (ಪ್ರಧಾನಿ ಮೋದಿ) ಸಂಜೆ ಪಕ್ಷದ ಪ್ರಧಾನ ಕಚೇರಿಗೆ ಬರುತ್ತಾರೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಚುನಾವಣೆ ಫಲಿತಾಂಶ: ಎಎಪಿ ಸೋಲಿನ ಬಗ್ಗೆ ಅರವಿಂದ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ ನೋಡಿ

1998 ರಿಂದ ದೆಹಲಿಯಲ್ಲಿ ಬಿಜೆಪಿ ಅಧಿಕಾರದಿಂದ ಹೊರಗಿದೆ. ಮತ್ತೊಂದೆಡೆ, ಕಳೆದ 10 ವರ್ಷಗಳಿಂದ ಎಎಪಿ ದೆಹಲಿಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. 2015 ಮತ್ತು 2020 ರ ಚುನಾವಣೆಗಳಲ್ಲಿ ಭಾರಿ ಬಹುಮತದಿಂದ ಗೆದ್ದಿತ್ತು. 1998 ರಿಂದ 2013 ರವರೆಗೆ ದೆಹಲಿಯನ್ನು ಆಳಿದ ಕಾಂಗ್ರೆಸ್, ಹಿಂದಿನ ಎರಡು ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾದ ನಂತರ ಮತ್ತೆ ಅಧಿಕಾರಕ್ಕೆ ಮರಳಲು ಎದುರು ನೋಡುತ್ತಿತ್ತು. ಆದಾಗ್ಯೂ, ಈ ಚುನಾವಣೆಯಲ್ಲಿಯೂ ಸಹ ಹಳೆಯ ಪಕ್ಷವು ಮತ್ತೆ ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಬಿಜೆಪಿ 27 ವರ್ಷಗಳ ವನವಾಸ ಅಂತ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ