AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮತ್ತೊಬ್ಬ ಶಾಸಕ; ಮೂರು ದಿನಗಳಲ್ಲಿ ಕಮಲ ಪಕ್ಷ ಕಳೆದುಕೊಂಡಿದ್ದು 7, ಗಳಿಸಿದ್ದು 2 !

ಬುಧವಾರ ಬಿಜೆಪಿ ಶಾಸಕ ಅವತಾರ್​ ಸಿಂಗ್​ ಮತ್ತು ಸಚಿವ ಧಾರಾಸಿಂಗ್​ ಚೌಹಾಣ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದರಲ್ಲಿ ಅವತಾರ್​ ಸಿಂಗ್​, ಸಮಾಜವಾದಿ ಪಕ್ಷದ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ದಳ ಸೇರಲಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮತ್ತೊಬ್ಬ ಶಾಸಕ; ಮೂರು ದಿನಗಳಲ್ಲಿ ಕಮಲ ಪಕ್ಷ ಕಳೆದುಕೊಂಡಿದ್ದು 7, ಗಳಿಸಿದ್ದು 2 !
ಮುಕೇಶ್ ವರ್ಮಾ
TV9 Web
| Updated By: Lakshmi Hegde|

Updated on: Jan 13, 2022 | 12:06 PM

Share

ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ (Uttar Pradesh Assembly Election 2022) ಮೊದಲು ಬಿಜೆಪಿಗೆ ಸಾಲುಸಾಲಾಗಿ ಹಿನ್ನಡೆಯಾಗುತ್ತಿದೆ. ಇಂದು ಮತ್ತೊಮ್ಮ ಬಿಜೆಪಿ ಶಾಸಕ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಮೂರುದಿನಗಳಲ್ಲಿ ರಾಜೀನಾಮೆ ಕೊಟ್ಟ ಏಳನೇ ಶಾಸಕ ಇವರು. ಇದೀಗ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದು,  ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್​ ವಿಧಾನಸಭಾ ಕ್ಷೇತ್ರದ ಶಾಸಕ ಮುಕೇಶ್​ ವರ್ಮಾ. ಇವರೂ ಸಹ ಯೋಗಿ ಆದಿತ್ಯನಾಥ್​ ಸರ್ಕಾರ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು, ರೈತರು ಮತ್ತು ನಿರುದ್ಯೋಗಿಗಳನ್ನು ನಿರ್ಲಕ್ಷಿಸುತ್ತಿದೆ ಎಂದೇ ಆರೋಪಿಸಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿರುವ ಮುಕೇಶ್​ ವರ್ಮಾ, ಬಿಜೆಪಿ ಸರ್ಕಾರ ಈ 5ವರ್ಷಗಳ ಅವಧಿಯಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಮತ್ತು ಜನಪ್ರತಿನಿಧಿಗಳಿಗೆ ಮನ್ನಣೆ ಕೊಟ್ಟಿಲ್ಲ. ಈ ಮೂಲಕ ಸಮುದಾಯಗಳ ಜನರ ಅಭಿವೃದ್ಧಿಯನ್ನೂ ನಿರ್ಲಕ್ಷ್ಯ ಮಾಡಿದೆ.  ಈ ಕಾರಣದಿಂದ ಬೇಸತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸ್ವಾಮಿ ಪ್ರಸಾದ್ ಮೌರ್ಯ ಅವರೇ ನಮ್ಮ ನಾಯಕರು. ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ನಾವು ಗೌರವಿಸುತ್ತೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬಿಜೆಪಿ ಮುಖಂಡರು ನಮ್ಮೊಂದಿಗೆ ಬರಲಿದ್ದಾರೆ ಎಂದೂ ತಿಳಿಸಿದ್ದಾರೆ.

ಮೊದಲು ಮಂಗಳವಾರ ಉತ್ತರಪ್ರದೇಶ ಕಾರ್ಮಿಕ ಇಲಾಖೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರು ಉತ್ತರಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ಯೋಗಿ ಸರ್ಕಾರ ದಲಿತರು, ಹಿಂದುಳಿದ ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳ ಬಗೆಗೆ ನಿರ್ಲಕ್ಷ್ಯ ತೋರುವುದನ್ನು ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ಪಕ್ಷವನ್ನು ತೊರೆದಿದ್ದರು.  ಅವರ ಬೆನ್ನಲ್ಲೇ ತಿಂಡ್ವಾರಿ ಶಾಸಕ ಬ್ರಿಜೇಶ್​ ಪ್ರಜಾಪತಿ, ತಿಲ್ಹಾರ್ ಕ್ಷೇತ್ರದ ಎಂಎಲ್​ಎ ರೋಶನ್​ ಲಾಲ್ ವರ್ಮಾ ಮತ್ತು ಬಿಲ್ಹೌರ್​ನ ಶಾಸಕ ಭಗವತಿ ಸಾಗರ್​ ಕೂಡ ರಾಜೀನಾಮೆ ನೀಡಿದ್ದರು. ಇವರೆಲ್ಲರೂ ಅಖಿಲೇಶ್​ ಯಾದವ್​ ಅವರ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯರನ್ನು ಈಗಾಗಲೇ ಅಖಿಲೇಶ್​ ಯಾದವ್​ ಪಕ್ಷಕ್ಕೆ ಸ್ವಾಗತಿಸಿದ್ದು, ಇವರಿಬ್ಬರೂ ಇರುವ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಮೌರ್ಯ ನಾಳೆ (ಜ.14) ಅಧಿಕೃತವಾಗಿ ಎಸ್​ಪಿಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.  ಇದೀಗ ರಾಜೀನಾಮೆ ಕೊಟ್ಟಿರುವ ಮುಕೇಶ್ ವರ್ಮಾ ಸಹ ಎಸ್​ಪಿ ಸೇರ್ಪಡೆಯಾಗಲಿದ್ದಾರೆ.  ಹಾಗೇ ಮಂಗಳವಾರ ಬಿದುನಾ ಶಾಸಕ ವಿನಯ್ ಕುಮಾರ್ ಶಾಕ್ಯ ಕೂಡ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಇನ್ನು ಬುಧವಾರ ಬಿಜೆಪಿ ಶಾಸಕ ಅವತಾರ್​ ಸಿಂಗ್​ ಮತ್ತು ಸಚಿವ ಧಾರಾಸಿಂಗ್​ ಚೌಹಾಣ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದರಲ್ಲಿ ಅವತಾರ್​ ಸಿಂಗ್​, ಸಮಾಜವಾದಿ ಪಕ್ಷದ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ದಳ ಸೇರಲಿದ್ದಾರೆ ಎನ್ನಲಾಗಿದೆ. ಸಚಿವ ಧಾರಾಸಿಂಗ್​ ಸಮಾಜವಾದಿ ಪಕ್ಷಕ್ಕೆ ಹೋಗುವುದು ಸ್ಪಷ್ಟವಾಗಿದೆ. ಧಾರಾಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಅಖಿಲೇಶ್​ ಯಾದವ್​ ಟ್ವೀಟ್ ಮಾಡಿಕೊಂಡು, ತಾವು ಧಾರಾಸಿಂಗ್ ಜತೆಗಿರುವ ಫೋಟೋ ಹಂಚಿಕೊಂಡು ಸ್ವಾಗತ ಎಂದು ಹೇಳಿದ್ದಾರೆ. ಇವರೂ ಕೂಡ ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು. ಈ ಮಧ್ಯೆ ಬಿಜೆಪಿಗೆ ಬುಧವಾರ ಇಬ್ಬರು ಶಾಸಕರು ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​​ನ ಶಾಸಕ ನರೇಶ್ ಸೈನಿ ಮತ್ತು ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಹರಿ ಓಂ ಯಾದವ್​ ತಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ತಕ್ಷಣ ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಹೈಕಮಾಂಡ್ ಸಂದೇಶ ರವಾನೆ! ರಾಜ್ಯ ನಾಯಕರ ಮುಂದಿನ ನಡೆ ಏನು?