Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಿಎಂ ಯೋಗಿ ಆದಿತ್ಯನಾಥ್​ ಚುನಾವಣಾ ಪ್ರಚಾರ ಸಭೆ ಸ್ಥಳದ ಸಮೀಪ ನೂರಾರು ಬೀಡಾಡಿ ಹಸುಗಳನ್ನು ಬಿಟ್ಟ ರೈತರು !

ಈ ಘಟನೆ ಬಗ್ಗೆ ಮುಖ್ಯಮಂತ್ರಿ ಅಥವಾ ಬಾರಾಬಂಕಿ ಜಿಲ್ಲಾಡಳಿತದಿಂದ ತಕ್ಷಣದ ಪ್ರತಿಕ್ರಿಯೆ ಬರಲಿಲ್ಲ. ಆದರೆ ಸಂಜೆ ಹೊತ್ತಿಗೆ ಯೋಗಿ ಆದಿತ್ಯನಾಥ್​ ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

Video: ಸಿಎಂ ಯೋಗಿ ಆದಿತ್ಯನಾಥ್​ ಚುನಾವಣಾ ಪ್ರಚಾರ ಸಭೆ ಸ್ಥಳದ ಸಮೀಪ ನೂರಾರು ಬೀಡಾಡಿ ಹಸುಗಳನ್ನು ಬಿಟ್ಟ ರೈತರು !
ಬಯಲಿನಲ್ಲಿ ಬೀಡಾಡಿ ದನಗಳು
Follow us
TV9 Web
| Updated By: Lakshmi Hegde

Updated on:Feb 23, 2022 | 11:24 AM

ಲಖನೌದಿಂದ ಕೇವಲ 40 ಕಿಮೀ ದೂರದಲ್ಲಿ, ಬಾರಾಬಂಕಿಯಲ್ಲಿ ನಿನ್ನೆ (ಫೆ.22) ಯೋಗಿ ಆದಿತ್ಯನಾಥ್​ ಚುನಾವಣಾ ರ್ಯಾಲಿ (Yogi Adityanath Election Rally) ನಡೆಸಿದ್ದರು. ಈ ವೇಳೆ ರೈತರು ಸಿಎಂ ಯೋಗಿ ರ್ಯಾಲಿ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲೇ ಇರುವ ದೊಡ್ಡದಾದ ಬಯಲಿನಲ್ಲಿ ಬೀಡಾಡಿ ಹಸುಗಳನ್ನು ಬಿಟ್ಟಿದ್ದಾರೆ. ಈ ವಿಡಿಯೋವನ್ನು ರೈತ ಮುಖಂಡ ರಾಮ್​ದೀಪ್​ ಸಿಂಗ್ ಮನ್​ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ​ಹಾಗೇ, ಸಮಾಜವಾದಿ ಪಕ್ಷದ ಮುಖಂಡರೂ ವಿಡಿಯೋ ಹಂಚಿಕೊಂಡಿದ್ದಾರೆ. ನೂರಾರು ಹಸುಗಳು ಬಯಲಿನಲ್ಲಿ ಓಡಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬಾರಾಬಂಕಿ ಭಾಗದಲ್ಲಿ ಬೀಡಾಡಿ ಹಸುಗಳ ಕಾಟ ಮಿತಿಮೀರಿದೆ. ಇಲ್ಲಿನ ರೈತರಿಗೆ ಬೀಡಾಡಿ ಹಸುಗಳಿಂದ ತಮ್ಮ ಹೊಲ ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕೂಡ ಇದಕ್ಕೊಂದು ಪರಿಹಾರ ಕೊಟ್ಟಿಲ್ಲ. ಹಾಗಾಗಿ ರೈತರು ತಮ್ಮ ಹೊಲಗಳಲ್ಲಿದ್ದ ಬೀಡಾಡಿ ದನಗಳನ್ನು ಅಲ್ಲಿಂದ ಓಡಿಸಿ, ಸಿಎಂ ಯೋಗಿ ಆದಿತ್ಯನಾಥ್​ ರ್ಯಾಲಿ ನಡೆಯಲಿರುವ ಸ್ಥಳದ ಸಮೀಪ ಬಿಟ್ಟಿದ್ದಾರೆ. ಯೋಗಿ ಆದಿತ್ಯನಾಥ್​ ಕಾರ್ಯಕ್ರಮಕ್ಕೂ ಮೊದಲು ಈ ಹಸುಗಳನ್ನು ಇಲ್ಲಿಂದ ಓಡಿಸಲು ಬಿಜೆಪಿ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಲು ರೈತರು ಹೀಗೆ ಮಾಡಿದ್ದಾರೆ ಎಂದು ರಾಮ್​ದೀಪ್​ ಸಿಂಗ್​ ಹೇಳಿದ್ದಾರೆ.

ಈ ಘಟನೆ ಬಗ್ಗೆ ಮುಖ್ಯಮಂತ್ರಿ ಅಥವಾ ಬಾರಾಬಂಕಿ ಜಿಲ್ಲಾಡಳಿತದಿಂದ ತಕ್ಷಣದ ಪ್ರತಿಕ್ರಿಯೆ ಬರಲಿಲ್ಲ. ಆದರೆ ಸಂಜೆ ಹೊತ್ತಿಗೆ ಯೋಗಿ ಆದಿತ್ಯನಾಥ್​ ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.  ಭಾನುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬೀಡಾಡಿ ಪ್ರಾಣಿಗಳಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಬೀಡಾಡಿ ದನಕರುಗಳ ನಿಯಂತ್ರಣಕ್ಕೆ ಹೊಸದೊಂದು ವ್ಯವಸ್ಥೆ ಜಾರಿಗೊಳಿಸುತ್ತೇವೆ. ಬೀಡಾಡಿ ಹಸುಗಳು ಹಾಲು ಕೊಡುವುದಿಲ್ಲ. ಆದರೆ ಅವುಗಳ ಸಗಣಿಯಿಂದಲೂ ರೈತರು ಆದಾಯ ಪಡೆಯಬಹುದಾದ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ಆದರೆ ಪ್ರತಿಪಕ್ಷ ಕಾಂಗ್ರೆಸ್​ ಸಿಎಂ ಯೋಗಿ ಟ್ವೀಟ್​​ಗೆ ವ್ಯಂಗ್ಯ ಮಾಡಿದೆ. ಬಿಜೆಪಿ ಕಳೆದ ಐದು ವರ್ಷಗಳ ಆಡಳಿತದಲ್ಲಿ ಏನೂ ಮಾಡಲಿಲ್ಲ. ಸಿಎಂ ಯೋಗಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಚುನಾವಣೆ ಪೂರ್ವ ಮಾತ್ರ ಇದು ನೆನಪಾಗುತ್ತದೆ. ಕಳೆದ ಐದುವರ್ಷಗಳಲ್ಲಿ ಬಿಜೆಪಿಯಲ್ಲಿ ಹೊಸ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗಿದ್ದಕ್ಕಿಂತ ಐದು ಪಟ್ಟು ಜಾಸ್ತಿ ಇಲ್ಲಿ ಬೀಡಾಡಿ ಗೂಳಿಗಳ ಸಂಖ್ಯೆ ಹೆಚ್ಚಿದೆ. ಈಗ ಚುನಾವಣೆ ಬಂತೆಂದು ಬಿಜೆಪಿಗರು ಪರಿಹಾರದ ಮಾತನಾಡುತ್ತಿದ್ದಾರೆ. ನೋಡುತ್ತಿರಿ, ಈ ಚುನಾವಣೆ ಮುಗಿದ ಬಳಿಕ ಬಿಜೆಪಿ ಸರ್ಕಾರ ಮತ್ತು ಗೂಳಿಗಳು ಇಲ್ಲಿಂದ ಹೇಗೆ ಹೋರಟುಹೋಗುತ್ತವೆ ಎಂಬುದನ್ನು ಎಂದು ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಬಾರಾಬಂಕಿ ಪ್ರದೇಶದಲ್ಲಿ ಬೀಡಾಡಿ ದನ, ಎತ್ತುಗಳ ಹಾವಳಿಯಿಂದಾಗಿ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಷ್ಟೇ ಅಲ್ಲ, ಗೂಳಿಗಳ ದಾಳಿಯಿಂದ ಗಾಯಗೊಂಡವರೂ ಇದ್ದಾರೆ. ಈ ಮಧ್ಯೆ ಸಮಾಜವಾದಿ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಗೂಳಿ ದಾಳಿಯಲ್ಲಿ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿಕೊಂಡಿದೆ. ಹಾಗೇ, ಬೀಡಾಡಿ ಪ್ರಾಣಿಗಳಿಂದ ಬೆಳೆ ಹಾನಿಗೆ ಒಳಗಾದ ರೈತರಿಗೆ ಎಕರೆಗೆ 3000 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಟಿವಿ ಚರ್ಚೆಗೆ ಆಹ್ವಾನಿಸಿದ ಇಮ್ರಾನ್ ಖಾನ್; ಪಾಕ್ ಪ್ರಧಾನಿಗೆ ಖಡಕ್ ಉತ್ತರ ನೀಡಿದ ಶಶಿ ತರೂರ್, ಸಿಂಘ್ವಿ

Published On - 11:15 am, Wed, 23 February 22