‘ಉದಯನಿಧಿ ಒಳ್ಳೆಯವರು, ಕೆಟ್ಟದಾಗಿ ಮಾತನಾಡೋ ಯೂಟ್ಯೂಬರ್​ಗಳ ಶಿಕ್ಷಿಸಿ’; ವಿಜಯ್​ಗೆ ವಿಶಾಲ್ ಬೇಡಿಕೆ

ಉದಯನಿಧಿ ಸ್ಟಾಲಿನ್ ಜೊತೆಗಿನ ಸ್ನೇಹ ಎಂದಿಗೂ ಬದಲಾಗುವುದಿಲ್ಲ ಎಂದು ನಟ ವಿಶಾಲ್ ಹೇಳಿದ್ದಾರೆ. ನಟಿಯರ ಬಗ್ಗೆ ಯೂಟ್ಯೂಬ್‌ನಲ್ಲಿ ಅಸಭ್ಯವಾಗಿ ಮಾತನಾಡುವ ಯೂಟ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಜೋಸೆಫ್ ವಿಜಯ್ ಅವರಿಗೆ ವಿಶಾಲ್ ಆಗ್ರಹಿಸಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

‘ಉದಯನಿಧಿ ಒಳ್ಳೆಯವರು, ಕೆಟ್ಟದಾಗಿ ಮಾತನಾಡೋ ಯೂಟ್ಯೂಬರ್​ಗಳ ಶಿಕ್ಷಿಸಿ’; ವಿಜಯ್​ಗೆ ವಿಶಾಲ್ ಬೇಡಿಕೆ
ವಿಶಾಲ್-ವಿಜಯ್-ಉದಯನಿಧಿ

Updated on: Aug 13, 2026 | 7:02 AM

ಮುಖ್ಯಾಂಶಗಳು

  • ಬದಲಾಗದ ಗೆಳೆತನ: ಉದಯನಿಧಿ ಪರ ನಿಂತ ನಟ ವಿಶಾಲ್
  • ಸಿಎಂ ವಿಜಯ್‌ಗೆ ವಿಶಾಲ್ ಮನವಿ: ಯೂಟ್ಯೂಬರ್‌ಗಳಿಗೆ ಶಿಕ್ಷೆ ಆಗಲಿ ಎಂದು ಮನವಿ
  • ರಾಜಕೀಯ ಏನೇ ಇರಲಿ: ಸ್ನೇಹಕ್ಕೆ ಎಂದಿಗೂ ಧಕ್ಕೆಯಿಲ್ಲ ಎಂದ ವಿಜಯ್

ತಮಿಳು ನಟ ವಿಶಾಲ್ ತಮ್ಮ ಸ್ನೇಹಿತ ಉದಯನಿಧಿ ಸ್ಟಾಲಿನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ಸ್ನೇಹ ಎಂದಿಗೂ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಮಗುಡಂ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಶಾಲ್ (Vishal), ಸಿನಿಮಾ ರಂಗದ ಮಹಿಳೆಯರ ವಿರುದ್ಧ ಕೆಟ್ಟದಾಗಿ ಮಾತನಾಡುವ ಯೂಟ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ದಳಪತಿ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ.

‘ಉದಯನಿಧಿ ಸ್ಟಾಲಿನ್ ಮತ್ತು ತಮಗೆ ಸಣ್ಣ ವಯಸ್ಸಿನಿಂದಲೇ ಉತ್ತಮ ಸ್ನೇಹವಿದೆ. ರಾಜಕೀಯಕ್ಕೆ ಬಂದರೂ ನಾವಿಬ್ಬರೂ ವೈರಿಗಳಾಗುವುದಿಲ್ಲ. ನಮ್ಮ ನಡುವೆ ಆರೋಗ್ಯಕರ ಸ್ಪರ್ಧೆ ಮಾತ್ರ ಇರಲಿದೆ. ಉದಯನಿಧಿ ಅವರ ರೆಡ್ ಜೈಂಟ್ ಮೂವೀಸ್ ಸಂಸ್ಥೆಯ ಬಗ್ಗೆ ಹಿಂದೆ ನಾನು ಮಾತನಾಡಿದ್ದೆ. ನನ್ನ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಆದ ತೊಂದರೆಯಿಂದ ಹಾಗೆ ಹೇಳಿದ್ದೆ. ಆದರೆ ಉದಯನಿಧಿ ಒಬ್ಬ ಅತ್ಯುತ್ತಮ ವ್ಯಕ್ತಿ’ ಎಂದು ವಿಶಾಲ್ ಹೇಳಿದ್ದಾರೆ.

ನಟಿ ತೃಷಾ ಕುರಿತು ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ಉದಯನಿಧಿ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ. ‘ಹಿರಿಯ ನಟಿಯರು ಮತ್ತು ಮಹಿಳಾ ಕಲಾವಿದರ ಬಗ್ಗೆ ಅನೇಕ ಜನರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಯೂಟ್ಯೂಬರ್‌ಗಳು ಹಣಕ್ಕಾಗಿ ಯಾರದೋ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಇಂತಹ ಯೂಟ್ಯೂಬರ್‌ಗಳನ್ನು ತಕ್ಷಣವೇ ಶಿಕ್ಷಿಸಬೇಕು. ಸಿಎಂ ವಿಜಯ್ ಅವರು ಈ ಬಗ್ಗೆ ಗಮನಹರಿಸಬೇಕು’ ಎಂದು ವಿಶಾಲ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ&; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು

‘ಇಂತಹ ವ್ಯಕ್ತಿಗಳು ಟಿವಿಯಲ್ಲಿ ಹೋಗಿ ಹೀಗೆ ಮಾತನಾಡಲು ಸಾಧ್ಯವಿಲ್ಲ. ಹಣದಾಸೆಗೆ ಯೂಟ್ಯೂಬ್‌ನಲ್ಲಿ ಹಿರಿಯ ನಟಿಯರ ತೇಜೋವಧೆ ಮಾಡುತ್ತಿದ್ದಾರೆ. ಚಿತ್ರರಂಗದ ಪ್ರತಿಯೊಬ್ಬರಿಗೂ ಗೌರವ ಸಿಗಬೇಕು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆಯಾಗಬೇಕು’ ಎಂದು ವಿಶಾಲ್ ಖಡಕ್ಕಾಗಿ ನುಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us