‘ನನಗೆ ನಯನತಾರಾ ಬೇಕು’: ಸಂಸದನ ಅಸಭ್ಯ ಮಾತಿಗೆ ಕಲಾವಿದರ ಸಂಘ ಗರಂ

‘ನನಗೆ ನಯನತಾರಾ ಬೇಕು ಎಂದು ಹೇಳಿದರೆ ನನ್ನ ಕನಸನ್ನು ಸ್ಟಾಲಿನ್ ಈಡೇರಿಸುತ್ತಾರಾ?’ ಎಂದು ಸಿ.ವಿ. ಷಣ್ಮುಗಂ ಕೇಳಿದ್ದಾರೆ. ಅವರ ಈ ಮಾತಿಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮಹಿಳೆಯರ ಘನತೆ ಮತ್ತು ಸುರಕ್ಷತೆಗಾಗಿ ನಡೆಸಿದ ಪ್ರತಿಭಟನೆಯ ವೇದಿಕೆಯಲ್ಲೇ ಇಂತಹ ಹೇಳಿಕೆ ಬಂದಿರುವುದು ಆತಂಕಕಾರಿ ಸಂಗತಿ ಆಗಿದೆ.

‘ನನಗೆ ನಯನತಾರಾ ಬೇಕು’: ಸಂಸದನ ಅಸಭ್ಯ ಮಾತಿಗೆ ಕಲಾವಿದರ ಸಂಘ ಗರಂ
Cv Shanmugam, Nayanthara

Updated on: Mar 17, 2026 | 9:02 PM

ತಮಿಳುನಾಡಿನ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ (Nayanthara) ಬಗ್ಗೆ ನೀಡಿದ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಯು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆಗಾಗಿ ತಮ್ಮ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೇ ಅವರು ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸಿ.ವಿ. ಷಣ್ಮುಗಂ (CV Shanmugam) ಅವರ ಹೇಳಿಕೆಯನ್ನು ದಕ್ಷಿಣ ಭಾರತ ಕಲಾವಿದರ ಸಂಘ ಖಂಡಿಸಿದೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಸಂಘ ಆಗ್ರಹಿಸಿದೆ.

ಘಟನೆ ಹಿನ್ನೆಲೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚೆಗೆ ರಾಜ್ಯದ ಜನತೆಗೆ ‘ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ, ಸರ್ಕಾರ ಅವುಗಳನ್ನು ಈಡೇರಿಸಲು ಶ್ರಮಿಸುತ್ತದೆ’ ಎಂದು ಭರವಸೆ ನೀಡಿದ್ದರು. ಇದನ್ನು ಟೀಕಿಸುವ ಭರದಲ್ಲಿ ಸಂಸದ ಷಣ್ಮುಗಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಬಳಸಿಕೊಂಡು ಅಸಭ್ಯ ಉದಾಹರಣೆ ನೀಡಿದ್ದಾರೆ.

‘ಅಬ್ದುಲ್ ಕಲಾಂ ಅವರು ಕನಸು ಕಾಣಲು ಹೇಳಿದರು. ಸ್ಟಾಲಿನ್ ಅವರು ತಮ್ಮ ಕನಸುಗಳನ್ನು ಹಂಚಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ನನಗೆ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅದನ್ನು ಈಡೇರಿಸುತ್ತಾರಾ? ಯಾರಾದರೂ ಸ್ಟಾಲಿನ್ ಅವರ ಬಳಿ ಹೋಗಿ ನಯನತಾರಾ ಜೊತೆ ಮದುವೆ ಮಾಡಿಸಿ ಎಂದು ಕೇಳಿದರೆ ಅವರು ಮದುವೆ ಮಾಡಿಸುತ್ತಾರಾ?’ ಎಂದು ಷಣ್ಮುಗಂ ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಈ ವೇಳೆ ಪಕ್ಕದಲ್ಲಿದ್ದ ಇತರ ನಾಯಕರು ಇದಕ್ಕೆ ನಗುತ್ತಾ ಬೆಂಬಲ ಸೂಚಿಸಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ನಯನತಾರಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದ ಸಿ.ವಿ. ಷಣ್ಮುಗಂ ಅವರ ವರ್ತನೆಯನ್ನು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ತೀವ್ರವಾಗಿ ಖಂಡಿಸಿದೆ. ಸಂಸದರಿಗೆ ಪತ್ರ ಬರೆದಿರುವ ಸಂಘವು, ‘ಗೌರವಾನ್ವಿತ ಸಂಸದರೇ, ನಿಮ್ಮ ಮಾತುಗಳು ಅತ್ಯಂತ ಅವಹೇಳನಕಾರಿ ಮತ್ತು ನಾಚಿಕೆಗೇಡಿನ ಸಂಗತಿ. ಸಂಸದೀಯ ಘನತೆಯನ್ನು ಗಾಳಿಗೆ ತೂರಿ ನಮ್ಮ ಸಹೋದ್ಯೋಗಿ ನಯನತಾರಾ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದೀರಿ’ ಎಂದು ಕಿಡಿಕಾರಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಬಿಡುಗಡೆಗೂ ಮುನ್ನ 31.5 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ ನಯನತಾರಾ

‘ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಅತ್ಯಂತ ಎಚ್ಚರಿಕೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಅದನ್ನು ಮರೆತಿದ್ದೀರಿ. ಈ ಕೂಡಲೇ ನೀವು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಮುಂದೆಂದೂ ಚಿತ್ರರಂಗದ ಮಹಿಳೆಯರ ಬಗ್ಗೆ ಇಂತಹ ಹಗುರವಾದ ಮಾತುಗಳನ್ನು ಆಡುವುದಿಲ್ಲ ಎಂದು ಭರವಸೆ ನೀಡಬೇಕು’ ಎಂದು ಸಂಘವು ಆಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us