ಕನ್ವೆನ್ಷನ್ ಸೆಂಟರ್​ ನೆಲಸಮ ವಿವಾದ, ನಾಗಾರ್ಜುನ ಸಹೋದರ ಹೇಳಿದ್ದೇನು?

|

Updated on: Sep 18, 2024 | 6:24 PM

ಕಳೆದ ತಿಂಗಳು ಅಕ್ಕಿನೇನಿ ನಾಗಾರ್ಜುನಗೆ ಸೇರಿದ 10 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಭೂ ಒತ್ತುವರಿ ಆರೋಪದ ಮೇಲೆ ನೆಲಸಮ ಮಾಡಿತು. ಅಕ್ಕಿನೇನಿ ನಾಗಾರ್ಜುನ ಸಹೋದರ ಅಕ್ಕಿನೇನಿ ವೆಂಕಟ್ ವಿವಾದದ ಬಗ್ಗೆ ಮಾತನಾಡಿದ್ದಾರೆ.

ಕನ್ವೆನ್ಷನ್ ಸೆಂಟರ್​ ನೆಲಸಮ ವಿವಾದ, ನಾಗಾರ್ಜುನ ಸಹೋದರ ಹೇಳಿದ್ದೇನು?
Follow us on

ತೆಲುಗು ಚಿತ್ರರಂಗದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ, ಇತ್ತೀಚೆಗೆ ಸಿನಿಮಾಗಳಿಂದ ಹೆಚ್ಚಾಗಿ ಸದ್ದು ಮಾಡುತ್ತಿಲ್ಲ. ಆದರೆ ಇತ್ತೀಚೆಗಿನ ವಿವಾದವೊಂದರಿಂದಾಗಿ ಸುದ್ದಿಗಳಲ್ಲಿ ಮುನ್ನೆಲೆಗೆ ಬಂದಿದ್ದರು. ಕಳೆದ ತಿಂಗಳು ನಟ ನಾಗಾರ್ಜುನ ಒಡೆತನದ ಹೈದರಾಬಾದ್​ನಲ್ಲಿದ್ದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ತೆಲಂಗಾಣ ಸರ್ಕಾರ ನೆಲಸಮಗೊಳಿಸಿತು. ತೆಲಂಗಾಣ ಸರ್ಕಾರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈಡ್ರಾ ತಂಡ, ಎನ್ ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮಗೊಳಿಸಿದ್ದು, ಇದರ ವಿರುದ್ಧ ನಟ ನಾಗಾರ್ಜುನ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದದ ಬಗ್ಗೆ ನಾಗಾರ್ಜುನ ಸಹೋದರ ಮಾತನಾಡಿದ್ದಾರೆ.

ಹೈದರಾಬಾದ್​ನ ಮಾದಾಪುರದ ಬಳಿ ಹತ್ತು ವರ್ಷದ ಹಿಂದೆ ನಾಗಾರ್ಜುನ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಿದ್ದರು. 10 ಎಕರೆ ಪ್ರದೇಶದಲ್ಲಿ ಭಾರಿ ಬೃಹತ್ ಆಗಿ ಮತ್ತು ಅದ್ಧೂರಿಯಾಗಿ ಈ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಲಾಗಿತ್ತು, ಆದರೆ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣವನ್ನು ರಾಜಕಾಲುವೆ ಮೇಲೆ ಮಾಡಲಾಗಿದೆ ಎಂದು ಆರೋಪಿಸಿದ್ದ ಹೈಡ್ರಾ ತಂಡ ಏಕಾಏಕಿ ಎನ್ ಕನ್ವೆನ್ಷನ್ ಅನ್ನು ನೆಲಸಮಗೊಳಿಸಿತು. 1.2 ಎಕರೆ ರಾಜಕಾಲುವೆ ಪ್ರದೇಶ ಹಾಗೂ 2 ಎಕರೆ ಬಫರ್ ವಲಯವನ್ನು ಅತಿಕ್ರಮಿಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್ ಅನ್ನು ನಿರ್ಮಾಣ ಮಾಡಲಾಗಿದೆ ಎಂದು ಹೈಡ್ರಾ ಆರೋಪಿಸಿತ್ತು. ತಮ್ಮ ಕಟ್ಟಡ ನೆಲಸಮವಾದ ಬಳಿಕ ಇದನ್ನು ಖಂಡಿಸಿ ನಾಗಾರ್ಜುನ ಟ್ವೀಟ್ ಒಂದನ್ನು ಮಾಡಿದ್ದರು.

ಇದನ್ನೂ ಓದಿ:ವಿಚ್ಛೇದನ ಪಡೆದ ಒಂದು ವರ್ಷದೊಳಗೆ ಅಕ್ಕಿನೇನಿ ನಾಗಾರ್ಜುನಗೆ ಆಗಿತ್ತು ಲವ್

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ ಸಹೋದರ ಅಕ್ಕಿನೇನಿ ವೆಂಕಟ್, ‘ನಾಗಾರ್ಜುನ ಆತುರ ಪಡುವೆ ವ್ಯಕ್ತಿಯಲ್ಲ, ಬಹಳ ಸಮಾಧಾನದ ವ್ಯಕ್ತಿ ಮತ್ತು ಪಕ್ಕಾ ಜಂಟಲ್​ಮ್ಯಾನ್. ಹೈಡ್ರಾದ ಕೆಲಸಗಳ ಬಗ್ಗೆ ದಿನಕ್ಕೆ ಒಬ್ಬರು ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ ಆದರೆ ನಾಗಾರ್ಜುನ ಹಾಗೆ ಮಾಡುವವರಲ್ಲ. ಅವರಿಗೆ ಈ ಬಗ್ಗೆ ಬೇಸರವಿದೆ. ಆದರೆ ಯಾರನ್ನೋ ದೂಷಿಸಿ ಅದನ್ನು ಹೊರಹಾಕುವ ವ್ಯಕ್ತಿ ಅವರಲ್ಲ, ಘಟನೆ ಬಳಿಕವೂ ಅವರು ಕಾಮ್ ಆಗಿದ್ದಾರೆ. ಆದರೆ ಕಾನೂನು ಹೋರಾಟ ನಡೆಯುತ್ತಲೇ ಇದೆ. ಇನ್ನೊಂದು ವಾರದಲ್ಲಿ ಎಲ್ಲ ಮಾಧ್ಯಮದವರಿಗೂ ಆ ಸುದ್ದಿ ಗೊತ್ತಾಗುತ್ತದೆ’ ಎಂದಿದ್ದಾರೆ.

ಕೆಲವರ ಆರೋಪವೆಂದರೆ ಎನ್ ಕನ್ವೆನ್ಷನ್ ಸೆಂಟರ್ ವಿರುದ್ಧ ಹಲವು ದೂರುಗಳು ಈಗಾಗಲೇ ಹೋಗಿದ್ದವಂತೆ. ಆದರೆ 2014 ರಿಂದಲೂ ನಾಗಾರ್ಜುನ, ತೆಲಂಗಾಣ ಸರ್ಕಾರದೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಕಾರಣ ಕನ್ವೆನ್ಷನ್ ಸೆಂಟರ್​ ಉಳಿದುಕೊಂಡಿತ್ತು. ಆದರೆ ತೆಲಂಗಾಣದ ಹೊಸ ಸಿಎಂ ರೇವಂತ್ ರೆಡ್ಡಿ, ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದು, ಯಾವ ವಶೀಲಿಬಾಜಿಗೂ ಬಗ್ಗುತ್ತಿಲ್ಲವಾದ್ದರಿಂದ ನಾಗಾರ್ಜುನ ಮಾತ್ರವಲ್ಲದೆ ಹಲವು ದೊಡ್ಡ ಉದ್ಯಮಿಗಳ, ರಾಜಕಾರಣಿಗಳಿಗೆ ಸೇರಿದ ಕಟ್ಟಡಗಳನ್ನು ಸಹ ಒಡೆದು ಕೆಡವಲಾಗಿದೆ.

ಹೈಡ್ರಾ (ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಆಂಡ್ ಅಸ್ಸೆಟ್ ಮಾನಿಟರಿಂಗ್ ಏಜೆನ್ಸಿ) ಈವರೆಗೆ ಕೇವಲ ಹೈದರಾಬಾದ್​ನಲ್ಲಿ ಅಕ್ರಮ ಒತ್ತುವರಿ 67.48 ಎಕರೆ ಮರು ವಶಪಡಿಸಿಕೊಂಡಿದೆ. ಇನ್ನು ತೆಲಂಗಾಣ ಸಿಎಂ ಸಹ ಹೈಡ್ರಾಗೆ ಕೆಲ ವಿಶೇಷ ಅಧಿಕಾರಗಳನ್ನು ನೀಡಿದ್ದು, ಅಕ್ರಮ ಒತ್ತುವರಿದಾರರ ಹೆಡೆಮುರಿ ಕಟ್ಟುವಲ್ಲಿ ನಿರತರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ