
‘ಪುಷ್ಪ 2’ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಘಟನೆ ನಡೆದು ಒಂದು ವರ್ಷಗಳ ಬಳಿಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ (Allu Arjun) ಅವರನ್ನು ಎ11 ಆರೋಪಿ ಆಗಿ ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರೆ, ಅವರ ಮಗ ತೀವ್ರವಾಗಿ ಗಾಯಗೊಂಡಿದ್ದರು.
2024ರ ಡಿಸೆಂಬರ್ 04 ರಂದು ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದ ಉಂಟಾದ ಕಾಲ್ತುಳಿತದಲ್ಲಿ ಸಾಕಷ್ಟು ಹಾನಿ ಆಯಿತು. ಅಲ್ಲು ಅರ್ಜುನ್ ಬಂದ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೆಂದು ಪೊಲೀಸರು ವಾದಿಸಿದರು. ಅವರನ್ನು ಬಂಧಿಸಿ ಒಂದು ದಿನ ಜೈಲಿನಲ್ಲೂ ಇಡಲಾಯಿತು ಈ ಘಟನೆ ನಡೆದು ಒಂದು ವರ್ಷ ಕಳೆದಿದೆ. ಈಗ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ.
ಚಿಕ್ಕಡಪಲ್ಲಿ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ಚಾರ್ಜ್ಶೀಟ್ನಲ್ಲಿ ಸಲ್ಲಿಕೆ ಮಾಡಿದ್ದಾರೆ. ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್ ಅನ್ನು ಎ1 ಆಗಿ ಪರಿಗಣಿಸಲಾಗಿದೆ. ಘಟನೆಗೆ ಕಾರಣವಾದ ಲೋಪಗಳಿಗೆ ಥಿಯೇಟರ್ನವರು ಮುಖ್ಯ ಹೊಣೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಜನಸಂದಣಿಯ ನಿರ್ವಹಣೆ ಸರಿಯಾಗಿಲ್ಲದ ಕಾರಣ ಮತ್ತು ಸರಿಯಾದ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿತು. ನಟನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಆಯೋಜಕರು ಜನರನ್ನು ನಿಯಂತ್ರಿಸುವಲ್ಲಿ ವಿಫಲರಾದರು ಎಂದು ತನಿಖೆ ಹೇಳಿದೆ. ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಪೊಲೀಸರ ಬಳಿ ಈಗ ಸಂಪೂರ್ಣವಾದ ಸಾಕ್ಷಿಗಳು ಸಿಕ್ಕಿವೆ. ಹೀಗಾಗಿ, ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತಕ್ಕೆ ವರ್ಷ: ಬಾಲಕನ ಸ್ಥಿತಿ ಈಗ ಹೇಗಿದೆ? ನಿಂತಿದೆಯೇ ಅಲ್ಲು ಅರ್ಜುನ್ ನೆರವು?
ಸಂಧ್ಯಾ ಚಿತ್ರಮಂದಿರ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಮತ್ತು ‘ಪುಷ್ಪ 2’ ಚಿತ್ರತಂಡದ ವತಿಯಿಂದ ಬರೋಬ್ಬರಿ ಎರಡು ಕೋಟಿ ರೂಪಾಯಿ ಹಣ ನೀಡಲಾಗಿತ್ತು. ನಟ ಅಲ್ಲು ಅರ್ಜುನ್ ಅವರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.