
ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಧಾರಾವಾಹಿಗಳಲ್ಲಿ ಒಂದಾದ ‘ಭಾಗ್ಯಲಕ್ಷ್ಮೀ’ (Bhagyalaxmi) ತನ್ನ ಸುದೀರ್ಘ ಪಯಣವನ್ನು ಮುಗಿಸಿ ಅಂತಿಮ ಸಂಚಿಕೆಯತ್ತ ಹೆಜ್ಜೆ ಇಡುತ್ತಿದೆ ಎಂಬ ಸುದ್ದಿ ಸದ್ಯ ಕಿರುತೆರೆ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಕೌಟುಂಬಿಕ ಮೌಲ್ಯಗಳು, ಅಕ್ಕ-ತಂಗಿಯ ಬಾಂಧವ್ಯ ಮತ್ತು ಗೃಹಿಣಿಯೊಬ್ಬಳ ಸ್ವಾಭಿಮಾನದ ಬದುಕನ್ನು ಮನೋಜ್ಞವಾಗಿ ಉಣಬಡಿಸಿದ್ದ ಈ ಧಾರಾವಾಹಿ, ಆರಂಭದಿಂದಲೂ ಟಿಆರ್ಪಿ ರೇಟಿಂಗ್ನಲ್ಲಿ ಮುಂಚೂಣಿಯಲ್ಲಿತ್ತು.
ಭಾಗ್ಯ ಮತ್ತು ಲಕ್ಷ್ಮಿ ಎಂಬ ಇಬ್ಬರು ಸಹೋದರಿಯರ ಕಥೆಯನ್ನಿಟ್ಟುಕೊಂಡು ಶುರುವಾದ ಈ ಸೀರಿಯಲ್, ನಂತರ ಪ್ರತ್ಯೇಕ ಧಾರಾವಾಹಿಗಳಾದವು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ಮೊದಲೇ ಮುಗಿದಿದೆ. ಈಗ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪೂರ್ಣಗೊಳ್ಳುವ ಸಮಯ. ಈ ಧಾರಾವಾಹಿ ನಟಿ ಸುಷ್ಮಾ ರಾವ್ (ಭಾಗ್ಯ) ಅವರ ಅದ್ಭುತ ನಟನೆಯಿಂದಾಗಿ ಪ್ರತಿ ಮನೆಮಾತಾಗಿತ್ತು.
ಪತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಮುಗ್ಧ ಗೃಹಿಣಿ ಭಾಗ್ಯ, ನಂತರದ ದಿನಗಳಲ್ಲಿ ಶಿಕ್ಷಣ ಪಡೆದು, ಸ್ವಾವಲಂಬಿಯಾಗಿ ಹೇಗೆ ನಿಲ್ಲುತ್ತಾಳೆ ಎಂಬ ಕಥಾಹಂದರ ಮಹಿಳಾ ವೀಕ್ಷಕರನ್ನು ಅಪಾರವಾಗಿ ಸೆಳೆದಿತ್ತು. ತಾಂಡವ್ ಎಂಬ ನೆಗೆಟಿವ್ ಪಾತ್ರ ಹಾಗೂ ಶ್ರೇಷ್ಠಾಳ ಕುತಂತ್ರಗಳ ಸುತ್ತ ನಡೆದ ಹೈ-ಡ್ರಾಮಾ ಸೀರಿಯಲ್ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.
ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕೊನೆಯಾಗುತ್ತಾ? ‘ತಾಂಡವ್’ ಪಾತ್ರಧಾರಿ ಸುದರ್ಶನ್ ಹೇಳೋದೇನು?
ಸದ್ಯ ಕಥೆಯು ತಾರ್ಕಿಕ ಅಂತ್ಯದತ್ತ ಸಾಗುತ್ತಿದ್ದು, ಭಾಗ್ಯ ಮತ್ತು ತಾಂಡವ್ ವಿಚ್ಛೇದನದ ಬಳಿಕ ಕಥೆಗೆ ಸೂಕ್ತ ತಿರುವು ಸಿಕ್ಕಿದೆ.ಆದಿಯನ್ನು ಭಾಗ್ಯಾ ಮದುವೆ ಆಗಿದ್ದಾಳೆ. ಈಗ ವಾಹಿನಿಯು ಕಥೆಯನ್ನು ಎಳೆಯದೆ, ವೀಕ್ಷಕರಿಗೆ ನಿರಾಸೆ ಮೂಡಿಸದಂತೆ ಗೌರವಯುತವಾಗಿ ಮುಕ್ತಾಯಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿದಿನ ಸಂಜೆ ವೀಕ್ಷಕರನ್ನು ರಂಜಿಸುತ್ತಿದ್ದ ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಅದರ ಅಪ್ಪಟ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿರುವುದಂತೂ ನಿಜ. ಶೀಘ್ರದಲ್ಲೇ ಈ ಸಮಯಕ್ಕೆ ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರ ಕಾಣುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.