BBK8: ಬಿಗ್​ ಬಾಸ್​ ಮನೆಯಿಂದ ಹೊರಬಿದ್ದ ಶಂಕರ್​ ಅಶ್ವತ್ಥ್​? ಹಿರಿಯ ಸ್ಪರ್ಧಿಯೇ ಈ ವಾರ ಟಾರ್ಗೆಟ್​ ಆಗಿದ್ದೇಕೆ?

Bigg Boss Elimination: ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್​ ಅಶ್ವತ್ಥ್​ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಪ್ಲಸ್​ ಮತ್ತು ಮೈನಸ್​ ಎರಡೂ ಆಗಿತ್ತು.

BBK8: ಬಿಗ್​ ಬಾಸ್​ ಮನೆಯಿಂದ ಹೊರಬಿದ್ದ ಶಂಕರ್​ ಅಶ್ವತ್ಥ್​? ಹಿರಿಯ ಸ್ಪರ್ಧಿಯೇ ಈ ವಾರ ಟಾರ್ಗೆಟ್​ ಆಗಿದ್ದೇಕೆ?
ಶಂಕರ್​ ಅಶ್ವತ್ಥ್​ - ಬಿಗ್​ ಬಾಸ್​

Updated on: Apr 04, 2021 | 12:10 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಅಖಾಡ ಇನ್ನಷ್ಟು ರಂಗೇರಿದೆ. ಐದು ವಾರಗಳ ಪಯಣದಲ್ಲಿ ಹಲವರ ಬಣ್ಣ ಬಯಲಾಗಿದೆ. ಪ್ರತಿ ವಾರ ಒಬ್ಬೊಬ್ಬರು ಎಲಿಮಿನೇಟ್​ ಆಗುತ್ತಿದ್ದು, ಐದನೇ ವಾರದಲ್ಲಿ ಹಿರಿಯ ನಟ ಶಂಕರ್​ ಅಶ್ವತ್ಥ್​ ಅವರು ಬಿಗ್​ ಬಾಸ್​ ಮನೆಯಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ವಾರ ನಾಮಿನೇಷನ್​ನಲ್ಲಿ ಶಂಕರ್​ ಹೆಸರು ಇತ್ತು. ಅವರ ಪರ್ಫಾರ್ಮೆನ್ಸ್​ ಕೂಡ ಕಳಪೆ ಆಗಿತ್ತು. ಪರಿಣಾಮವಾಗಿ ಬಿಗ್​ ಬಾಸ್​ನಲ್ಲಿ ಅವರ ಪಯಣ ಅಂತ್ಯವಾಗಿದೆ ಎನ್ನಲಾಗಿದೆ.

ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್​ ಅಶ್ವತ್ಥ್​ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಪ್ಲಸ್​ ಮತ್ತು ಮೈನಸ್​ ಎರಡೂ ಆಗಿತ್ತು. ಹಿರಿಯರು ಎಂಬ ಕಾರಣಕ್ಕೆ ಎಲ್ಲರೂ ಅವರಿಗೆ ಗೌರವ ನೀಡುತ್ತಿದ್ದರು. ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ಅನೇಕ ಟಾಸ್ಕ್​ಗಳಲ್ಲಿ ವಯಸ್ಸಿನ ನೆಪವೊಡ್ಡಿ ಕೆಲವು ವಿನಾಯಿತಿಯನ್ನೂ ಪಡೆದುಕೊಳ್ಳುತ್ತಿದ್ದರು. ಇದು ಕೆಲವರ ಅಸಮಾಧಾನಕ್ಕೆ ಕಾರಣ ಆಗಿತ್ತು.

ಇತರ ಸ್ಪರ್ಧಿಗಳ ಜೊತೆಗೆ ವಯಸ್ಸಿನ ಅಂತರ ಇರುವುದರಿಂದ ಶಂಕರ್​ ಅಶ್ವತ್ಥ್​ ಅವರು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅದು ಸಹ ಅವರಿಗೆ ಮೈನಸ್​ ಆಯಿತು. ಇನ್ನು, ಸತತ ಎರಡು ವಾರ ಶಂಕರ್​ ಅಶ್ವತ್ಥ್​ ಅವರು ಕಳಪೆ ಪ್ರದರ್ಶನ ನೀಡಿದರು. ಮನೆಯ ಎಲ್ಲ ಸದಸ್ಯರು ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದರಿಂದ ಎರಡು ಬಾರಿ ಅವರು ಜೈಲಿಗೆ ಹೋಗಬೇಕಾಯಿತು. ಟಾಸ್ಕ್​ವೊಂದರಲ್ಲಿ ದಿವ್ಯಾ ಸುರೇಶ್​ ಮತ್ತು ವೈಷ್ಣವಿ ನಡುವೆ ಪೈಪೋಟಿ ನಡೆಯುತ್ತಿತ್ತು. ಸ್ವಿಮಿಂಗ್​ ಪೂಲ್​ನಲ್ಲಿ ಇಬ್ಬರೂ ನಿಂತುಕೊಂಡಿರುವಾಗ ಆ ಆಟವನ್ನು ನಿಲ್ಲಿಸಲು ಶಂಕರ್​ ಅಶ್ವತ್ಥ್​ ಪೂಲ್​ಗೆ ಹಾರಿದರು. ಅವರ ಈ ವರ್ತನೆಯಿಂದ ಅನೇಕರಿಗೆ ಬೇಸರ ಆಗಿತ್ತು.

ಶಂಕರ್​ ಅಶ್ವತ್ಥ್​ ಅವರು ಈ ರೀತಿ ನಡೆದುಕೊಂಡ ವಿಚಾರ ಶನಿವಾರದ ಎಪಿಸೋಡ್​ನಲ್ಲಿ ಚರ್ಚೆ ಆಯಿತು. ಕಿಚ್ಚ ಸುದೀಪ್​ ಕೂಡ ಈ ಬಗ್ಗೆ ತಕರಾರು ತೆಗೆದರು. ತಾವು ಮಾಡಿದ್ದೇ ಸರಿ ಎಂದು ಮೊದಲಿಗೆ ಶಂಕರ್​ ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ, ಸುದೀಪ್​ ಎದುರು ಜೋರು ಧ್ವನಿಯಲ್ಲಿ ಮಾತನಾಡಿದರು. ಇದು ಎಲ್ಲರಿಗೂ ಅಚ್ಚರಿ ಎನಿಸಿತು. ಆದರೂ ಶಂಕರ್​ ಅಶ್ವತ್ಥ್​ ಆ ರೀತಿ ಆಕ್ರಮಣಕಾರಿಯಾಗಿ ಆಟ ಆಡಿದ್ದು ಸರಿ ಅಲ್ಲ ಎಂದು ಸುದೀಪ್​ ಹೇಳಿದರು.

ದಿನದಿಂದ ದಿನಕ್ಕೆ ಟಾಸ್ಕ್​ಗಳ ಸ್ವರೂಪ ತೀವ್ರವಾಗುತ್ತಲೇ ಇದೆ. ವಯಸ್ಸಿನ ಕಾರಣದಿಂದ ಶಂಕರ್​ ಅಶ್ವತ್ಥ್​ ಅವರು ಟಾಸ್ಕ್​ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಷ್ಟ ಆಗುತ್ತಿದೆ. ಹಾಗಂತ ಅವರಿಗೆ ಪದೇಪದೇ ವಿನಾಯಿತಿ ನೀಡುವುದು ಆಟದ ನಿಯಮಕ್ಕೆ ವಿರುದ್ಧವಾಗುತ್ತದೆ. ಆ ಎಲ್ಲ ಕಾರಣಗಳಿಗಾಗಿ ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿರಬಹುದು ಎಂಬುದು ಹಲವರ ಅಭಿಪ್ರಾಯ.

ಸದ್ಯ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರು ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಅವರ ಆಗಮನದಿಂದಾಗಿ ಮನೆಯ ವಾತಾವರಣದಲ್ಲಿ ಬದಲಾವಣೆ ಬಂದಿದೆ. ಸದ್ಯ ಕ್ಯಾಪ್ಟನ್​ ಆಗಿ ಮಂಜು ಪಾವಗಡ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!

 

(Bigg Boss Kannada 8 Elimination: Actor Shankar Ashwath reportedly eliminated in 5th week of BBK8)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us