ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ

ಆಮಿರ್ ಖಾನ್ ಅವರ ಮೂರನೇ ಮದುವೆಯು ವಿವಾದಕ್ಕೆ ಕಾರಣ ಆಗಿದೆ. ಈ ಮದುವೆಯನ್ನು ಲವ್ ಜಿಹಾದ್ ಎಂದು ಅನೇಕರು ಟೀಕಿಸಿದ್ದಾರೆ. ಆಮಿರ್ ಖಾನ್ ಅವರನ್ನು ಕೊಲ್ಲಲು ಜಗದ್ಗುರು ಪರಮಹಂಸ ಆಚಾರ್ಯ ಅವರು ಬಹಿರಂಗವಾಗಿ ಕರೆ ನೀಡಿದ್ದಾರೆ. ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಇಲ್ಲಿದೆ ಮಾಹಿತಿ..

ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ
Jagadguru Paramhans Acharya
Image Credit source: IANS

Updated on: Jul 15, 2026 | 8:05 PM

ಮುಖ್ಯಾಂಶಗಳು

  • ಮೂರನೇ ಮದುವೆ ವಿವಾದದ ಬೆನ್ನಲ್ಲೇ ನಟ ಆಮಿರ್ ಖಾನ್‌ಗೆ ಬಹಿರಂಗ ಕೊಲೆ ಬೆದರಿಕೆ.
  • ನಟನನ್ನು ಕೊಲ್ಲುವವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಧಾರ್ಮಿಕ ಗುರು.
  • ಗೌರಿ ಸ್ಪ್ರ್ಯಾಟ್ ಕ್ರಿಶ್ಚಿಯನ್ ಧರ್ಮದವರೆಂದು ಈಗಾಗಲೇ ಸ್ಪಷ್ಟನೆ ನೀಡಿದ ಆಮಿರ್ ಖಾನ್.

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಜುಲೈ 5ರಂದು ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಮೂರನೇ ವಿವಾಹವಾದ ಬೆನ್ನಲ್ಲೇ ಅವರ ಸುತ್ತಲಿನ ವಿವಾದಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಆರಂಭದಲ್ಲಿ ಬಜರಂಗದಳದ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ತೀವ್ರ ಆಕ್ರೋಶಗಳು ಈಗ ಕೊಲೆ ಬೆದರಿಕೆಯ ಹಂತಕ್ಕೆ ಬಂದು ತಲುಪಿವೆ. ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶರಾದ ಜಗದ್ಗುರು ಪರಮಹಂಸ ಆಚಾರ್ಯ (Jagadguru Paramhans Acharya) ಅವರು ಆಮಿರ್ ಖಾನ್ ಅವರನ್ನು ಕೊಲ್ಲುವವರಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’

ಮಹಾರಾಷ್ಟ್ರದ ಬಿಜೆಪಿ ಸಚಿವ ನಿತೇಶ್ ರಾಣೆ ಅವರು ಇತ್ತೀಚೆಗೆ ಆಮಿರ್ ಖಾನ್ ಅವರನ್ನು ‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಕರೆದಿದ್ದರು. ಸಚಿವರ ಈ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿರುವ ಅಯೋಧ್ಯೆಯ ಧಾರ್ಮಿಕ ಮುಖಂಡ ಜಗದ್ಗುರು ಪರಮಹಂಸ ಆಚಾರ್ಯ ಅವರು ಆಮಿರ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ. ಆಮಿರ್ ಖಾನ್ ಅವರನ್ನು ಹತ್ಯೆ ಮಾಡುವಂತೆ ಬಹಿರಂಗ ಕರೆ ನೀಡಿದ್ದಾರೆ.

ಧಾರ್ಮಿಕ ಮುಖಂಡನ ವಿವಾದಾತ್ಮಕ ಹೇಳಿಕೆ:

‘ಆಮಿರ್ ಖಾನ್ ಮೂರು ಬಾರಿ ಮದುವೆಯಾಗಿದ್ದು, ಅವರ ಮೂರೂ ಪತ್ನಿಯರು ಹಿಂದೂ ಮಹಿಳೆಯರಾಗಿದ್ದಾರೆ. ಹೀಗಾಗಿ ನಿತೇಶ್ ರಾಣೆ ಅವರ ಹೇಳಿಕೆ ಕೇವಲ ಆರೋಪವಲ್ಲ, ಅದು ವಾಸ್ತವ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ವೈಷಮ್ಯ ಮೂಡಿಸುತ್ತಿದ್ದಾರೆ. ಭಗವಾನ್ ರಾಮ ಹುಟ್ಟಿದ ಪವಿತ್ರ ಅಯೋಧ್ಯೆ ಧಾಮದಿಂದ ನಾನು ಘೋಷಿಸುತ್ತಿದ್ದೇನೆ. ಯಾರು ಆಮಿರ್ ಖಾನ್‌ನನ್ನು ಕೊಲ್ಲುತ್ತಾರೋ ಅವರಿಗೆ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಮತ್ತು ಅವರ ಮೇಲಾಗುವ ಎಲ್ಲಾ ಕಾನೂನು ಹೋರಾಟದ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ಪರಮಹಂಸ ಆಚಾರ್ಯ ಅವರು ಹೇಳಿದ್ದಾರೆ.

ಸತ್ಯ ಬಿಚ್ಚಿಟ್ಟಿದ್ದ ಆಮಿರ್ ಖಾನ್:

ತಮ್ಮ ಮದುವೆಯ ಸುತ್ತ ಎದ್ದಿರುವ ‘ಲವ್ ಜಿಹಾದ್’ ಆರೋಪಗಳಿಗೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಆಮಿರ್ ಖಾನ್, ‘ನನ್ನ ಯಾವುದೇ ಪತ್ನಿಯರು ಧರ್ಮ ಬದಲಾಯಿಸಿಲ್ಲ. ನಾವೆಲ್ಲರೂ ಸಿವಿಲ್ ಕಾನೂನಿನ ಅಡಿಯಲ್ಲಿ ಮದುವೆಯಾಗಿದ್ದೇವೆ. ಮೊದಲ ಪತ್ನಿ ರೀನಾ ಮತ್ತು ಎರಡನೇ ಪತ್ನಿ ಕಿರಣ್ ಅವರು ಮತಾಂತರ ಆಗಿಲ್ಲ. ಇತ್ತೀಚೆಗೆ ನಾನು ಮದುವೆಯಾದ ಗೌರಿ ಸ್ಪ್ರ್ಯಾಟ್ ಕೂಡ ಹಿಂದೂ ಅಲ್ಲ. ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು?

ಆಮಿರ್ ಖಾನ್ ಅವರು ಈ ಮೊದಲು ರೀನಾ ದತ್ತಾ (1986-2002) ಮತ್ತು ಕಿರಣ್ ರಾವ್ (2005-2021) ಅವರೊಂದಿಗೆ ವಿವಾಹವಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದರು. ಇದೀಗ ಜುಲೈ 5ರಂದು ಬೆಂಗಳೂರು ಮೂಲದ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿದ್ದಾರೆ. ಈ ಮದುವೆಯ ಬಳಿಕ ಲವ್ ಜಿಹಾದ್ ಆರೋಪ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 pm, Wed, 15 July 26

Follow Us