ಶಿವನ ದೇವಾಲಯದಲ್ಲಿ ಸನ್‌ಗ್ಲಾಸ್ ಧರಿಸಿ ಪೂಜೆ: ನಟಿ ಭೂಮಿ ಪೆಡ್ನೇಕರ್ ವಿರುದ್ಧ ನೆಟ್ಟಿಗರ ಆಕ್ರೋಶ

ಪ್ರಸಿದ್ಧ ನಟಿ ಭೂಮಿ ಪೆಡ್ನೇಕರ್ ಅವರು ಇತ್ತೀಚೆಗೆ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾಗೆ ಆಯ್ಕೆ ಆಗುವ ಮೂಲಕ ಸುದ್ದಿ ಆಗಿದ್ದರು. ಆದರೆ ಈಗ ಅವರು ಒಂದು ನೆಗೆಟಿವ್ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ದೇವಸ್ಥಾನದ ಒಳಗೆ ಕೂಲಿಂಗ್ ಗ್ಲಾಸ್ ಧರಿಸಿದ್ದಕ್ಕೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಶಿವನ ದೇವಾಲಯದಲ್ಲಿ ಸನ್‌ಗ್ಲಾಸ್ ಧರಿಸಿ ಪೂಜೆ: ನಟಿ ಭೂಮಿ ಪೆಡ್ನೇಕರ್ ವಿರುದ್ಧ ನೆಟ್ಟಿಗರ ಆಕ್ರೋಶ
Bhumi Pednekar

Updated on: Jul 30, 2026 | 9:24 PM

ಮುಖ್ಯಾಂಶಗಳು

  • ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಕಪ್ಪು ಸನ್‌ಗ್ಲಾಸ್ ಹಾಗೂ ಜೀನ್ಸ್ ಧರಿಸಿದ್ದ ನಟಿ ಭೂಮಿ ಪೆಡ್ನೇಕರ್.
  • ದೇವಸ್ಥಾನದ ಒಳಗೆ ಇಂತಹ ಉಡುಪು ಹಾಗೂ ಸನ್‌ಗ್ಲಾಸ್ ಧರಿಸಿ ಫೋಟೋಶೂಟ್ ಮಾಡಿದ್ದಕ್ಕೆ ತೀವ್ರ ಟೀಕೆ.
  • ಕಮೆಂಟ್ ಮೂಲಕ ಜನರು ಕ್ಲಾಸ್ ತೆಗೆದುಕೊಂಡರೂ ಕೂಡ ಯಾವುದೇ ಉತ್ತರ ನೀಡದ ಹೀರೋಯಿನ್.

ಖ್ಯಾತ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ (Bhumi Pednekar) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ. ಶಿವನ ದೇವಾಲಯದ ಒಳಗೆ ಕಪ್ಪು ಕೂಲಿಂಗ್ ಗ್ಲಾಸ್ (Sunglasses) ಧರಿಸಿ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಶ್ರಾವಣ ಮಾಸದ ಆರಂಭದ ಅಂಗವಾಗಿ ಭೂಮಿ ಪೆಡ್ನೇಕರ್ ಅವರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅವು ವೈರಲ್ ಆಗಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ.

ಬ್ಲ್ಯಾಕ್ ಟಾಪ್ ಮತ್ತು ನೀಲಿ ಡೆನಿಮ್ ಜೀನ್ಸ್ ಧರಿಸಿದ್ದ ಭೂಮಿ ಪೆಡ್ನೇಕರ್ ಅವರು ಕಣ್ಣಿಗೆ ಕಪ್ಪು ಸನ್‌ಗ್ಲಾಸ್ ಧರಿಸಿ ಶಿವಲಿಂಗದ ಮುಂದೆ ಕೈಮುಗಿದು ನಿಂತಿರುವುದು ಕಂಡುಬಂದಿದೆ. ಈ ಫೋಟೋಗಳ ಜೊತೆಗೆ, ‘ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ, ನಾನು ಸರಳ ಜೀವನಕ್ಕಾಗಿ ಪ್ರಾರ್ಥಿಸುವುದಿಲ್ಲ. ಬದಲಿಗೆ ಅದನ್ನು ಗೌರವ ಮತ್ತು ಶಕ್ತಿಯಿಂದ ಎದುರಿಸುವ ಸಾಮರ್ಥ್ಯ ನೀಡುವಂತೆ ಕೋರುತ್ತೇನೆ. ಹರ ಹರ ಮಹಾದೇವ್’ ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

ತರಾಟೆಗೆ ತೆಗೆದುಕೊಂಡ ನೆಟ್ಟಿಗರು:

ಆದರೆ, ದೇವಾಲಯದ ಆವರಣದಲ್ಲಿ ನಟಿಯ ಈ ರೀತಿಯ ಆಧುನಿಕ ಉಡುಪು ಮತ್ತು ಸನ್‌ಗ್ಲಾಸ್ ಧರಿಸಿ ಪೂಜೆ ಸಲ್ಲಿಸಿದ್ದಕ್ಕೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪೂಜೆ ಮಾಡುವಾಗ ಆ ಸನ್‌ಗ್ಲಾಸ್ ತೆಗೆಯಬಹುದಿತ್ತು ಅಲ್ಲವೇ?’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ಸನ್‌ಗ್ಲಾಸ್ ಹಾಕಿಕೊಂಡು ಪೂಜೆ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಟೀಕೆಗೆ ಉತ್ತರ ನೀಡದ ನಟಿ:

ಕಮೆಂಟ್ ಮಾಡಿರುವ ಇನ್ನು ಕೆಲವರು ‘ಇದು ದೇವಸ್ಥಾನದಲ್ಲಿ ದೇವರ ಭಕ್ತಿಯೋ ಅಥವಾ ಫೋಟೋಶೂಟ್‌ ಮಾಡುವ ಜಾಗವೋ?’ ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಯಾವುದೇ ಟೀಕೆಗಳಿಗೆ ಭೂಮಿ ಪೆಡ್ನೇಕರ್ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ: ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್

ಬೆಳವಡಿ ಮಲ್ಲಮ್ಮನಾಗಿ ಭೂಮಿ:

ಸಿನಿಮಾ ಬಗ್ಗೆ ಹೇಳುವುದಾದರೆ, ಭೂಮಿ ಪೆಡ್ನೇಕರ್ ಅವರು ಶೀಘ್ರದಲ್ಲೇ ಬಹುನಿರೀಕ್ಷಿತ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಅವರು ಕರ್ನಾಟಕದ ವೀರರಾಣಿ ಬೆಳವಡಿ ಮಲ್ಲಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಸಂದೀಪ್ ಸಿಂಗ್ ನಿರ್ಮಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us